ತುಲಾ ರಾಶಿ
ಈಗ ನಿಮಗೆ ರಾಹು ಆರನೇ ಮನೆಯಲ್ಲಿ ಇರುವುದು ಒಳ್ಳೆಯ ಬಲ. ಇದು ಪರಾಕ್ರಮವನ್ನು ಕೊಡುತ್ತದೆ. ಯಾವುದೇ ಕೆಲಸದಲ್ಲಿ ಜಯ ಸಿಗುವಂತೆ ಮಾಡುತ್ತದೆ. ಆದರೆ ಪಂಚಮದಲ್ಲಿ ಶನಿ ಹಾಗೂ ಅಷ್ಟಮದಲ್ಲಿ ಗುರು ಕೊಂಚ ಹಿನ್ನಡೆ ಕೊಡುತ್ತಾರೆ. ಪಂಚಮಶನಿ ಮಾನಸಿಕ ಕಿರುಕುಳವನ್ನೂ ಹಣಕಾಸಿನ ಮುಗ್ಗಟ್ಟನ್ನೂ ಕೊಡುತ್ತಾನೆ. ಅಷ್ಠಮ ಗುರು ಆರೋಗ್ಯದಲ್ಲಿ ಏರುಪೇರು ಮಾಡುತ್ತಾನೆ ಹಾಗೂ ಬಂಧು ಸ್ನೇಹಿತರಲ್ಲಿ ವೈಮನಸ್ಸು ಮೂಡಿಸುತ್ತಾನೆ. ನಿಮ್ಮವರೇ ನಿಮ್ಮನ್ನು ಅರ್ಥ ಮಾಡಿಕೊಳ್ಳದೆ ನೋಯಿಸುವಂತೆ ಅವಮಾನಿಸುವಂತೆ ಆಗುತ್ತದೆ. ಹತ್ತನೇ ಮನೆಯಲ್ಲಿ ಶುಕ್ರ, ಬುಧ ಇರುವುದು ವೃತ್ತಿಸಂಬಂಧವಾಗಿ ನಿಮಗೆ ಶುಭವನ್ನು ತರುತ್ತದೆ. ಈ ತಿಂಗಳು ಪೂರ್ತಿ ಬುಧಶುಕ್ರರು ವೃತ್ತಿಸ್ಥಾನದಲ್ಲಿ ಇರುತ್ತಾರೆ. ಇದು ನಿಮಗೆ ವೃತ್ತಿಯಲ್ಲಿ ಅಪಾರ ಯಶಸ್ಸು ತಂದುಕೊಡುತ್ತದೆ. ವಾಹನದಿಂದ ಲಾಭ ಇದೆ. ವಾಹನ ವಹಿವಾಟು ನಡೆಸುವವರಿಗೆ ಲಾಭ ಇದೆ. ಈ ರಾಶಿಯ ರಾಜಕಾರಣಿಗಳು ಪದವಿ ಪಡೆಯದಿದ್ದರೂ ಒಳ್ಳೆಯ ಹೆಸರು ಗಳಿಸುತ್ತಾರೆ. ಇರು ಅವರಿಗೆ ಮುಂದಿನ ಬೆಳವಣಿಗೆಗೆ ಕಾರಣವಾಗುತ್ತದೆ. ಆರನೇ ಮನೆಯ ರಾಹುವಿನಿಂದ ಶತ್ರುಗಳಿಂದ ತೊಂದರೆ ತಪ್ಪುತ್ತದೆ. ಈಗ ನೀವು ಅರ್ಧಫಲ ಅನುಭವಿಸುತ್ತೀರಿ. ಕೆಲವೇ ತಿಂಗಳಲ್ಲಿ ಶನಿ ಸಹ ಆರನೇ ಮನೆಗೆ ಬಂದಾಗ ಇನ್ನಷ್ಟು ಅದೃಷ್ಟ ನಿಮ್ಮ ಕೈಹಿಡಿಯಲಿದೆ.
ವೃಶ್ಚಿಕ ರಾಶಿ
ಈಗ ಸಂಪೂರ್ಣ ನಿಮ್ಮ ರಾಶಿಯ ಮೇಲೆ ಗುರುವಿನ ಅನುಗ್ರಹ ಇದ್ದು ನಿಂತು ಹೋಗಿದ್ದ ಬೆಳವಣಿಗೆಗಳು ಶುಭಸಂಗತಿಗಳು ಈಗ ಮರುಚಾಲನೆ ಪಡೆದು ನಿಮಗೆ ಅದೃಷ್ಟ ತಂದುಕೊಡುತ್ತದೆ. ವೃತ್ತಿಯಲ್ಲಿ ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುತ್ತೀರಿ. ಅವಿವಾಹಿತರಿಗೆ ವಿವಾಹ ಯೋಗ ಇದೆ. ಕಳೆದ ವರ್ಷದಲ್ಲಿ ಪ್ರಗತಿಯ ಒಂದೂ ಕಾರ್ಯ ನಡೆಯಲಿಲ್ಲ. ಆದರೆ ಈಗ ಪ್ರಗತಿಗೆ ಹಲವಾರು ಅವಕಾಶಗಳು ನಿಮ್ಮ ಬಾಗಿಲಿಗೆ ಬರುತ್ತದೆ. ಇದನ್ನು ಈಗ ನೀವು ಹೇಗೆ ಉಪಯೋಗಿಸಿಕೊಳ್ಳುವಿರೋ ನಿಮಗೆ ಸೇರಿದ್ದು. ಶನಿ ಹಾಗೂ ರಾಹು ಈಗ ನಿಮಗೆ ವ್ಯತಿರಿಕ್ತವಾಗಿ ಇರುವುದು ಸ್ವಲ್ಪ ಕಿರಿಕಿರಿಯನ್ನುಂಟು ಮಾಡಿದರೂ ಗುರುಬಲ ಸಂಪೂರ್ಣ ಇರುವುದರಿಂದ ಅಪಾಯಗಳನ್ನು ಬಹುಮಟ್ಟಿಗೆ ನಿವಾರಿಸಿಕೊಳ್ಳುತ್ತೀರಿ. ಅಪಾಯಗಳು ನಿಮ್ಮ ಬಳಿಗೆ ಬರುವಷ್ಟರಲ್ಲಿ ದೇವರ ಅನುಗ್ರಹದಿಂದ ಉಪಾಯ ಗೋಚರಿಸುತ್ತದೆ. ಐದನೇ ಮನೆಯಲ್ಲಿ ರಾಹು ಇರುವುದು ಮಕ್ಕಳ ಫಲಕ್ಕೆ ವಿಘ್ನ ಇದೆ. ಮಕ್ಕಳಿಗಾಗಿ ಪ್ರಯತ್ನಿಸುವವರು ಸ್ವಲ್ಪಕಾಲ ಸುಮ್ಮನಿರಿ. ಮಕ್ಕಳಿಂದ ಕೂಡ ಸ್ವಲ್ಪ ಜಗಳ ವೈಮನಸ್ಸು ಅನುಭವಿಸುತ್ತೀರಿ. ಮಕ್ಕಳೇ ನಿಮಗೆ ದುಃಖ ಕೊಡುವಂಥ ಅಥವಾ ಮಕ್ಕಳಿಂದ ಅಹಿತಕರ ವಾತಾವರಣ ನಿರ್ಮಾಣವಾಗುತ್ತದೆ. ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿಕೊಳ್ಳಿ. ಹನ್ನೊಂದನೇ ಮೆಯಲ್ಲಿ ಇರುವ ಕೇತು ಹಣದ ಹರಿವನ್ನು ಉತ್ತಮಪಡಿಸುತ್ತಾನೆ.
ಧನಸ್ಸು ರಾಶಿ
ಐದನೇ ಮನೆಯಲ್ಲಿ ಇದ್ದ ಗುರು ಈಗ ಆರನೇ ಮನೆಗೆ ಬಂದು ಕೊಂಚ ಇಕ್ಕಟ್ಟಿನ ಬಿಕ್ಕಟ್ಟಿನ ವಾತಾವರಣ ಸೃಷ್ಟಿಸುತ್ತಾನೆ. ನಾಲ್ಕನೇ ಮನೆಯಲ್ಲಿ ರಾಹು ಕೂಡ ಸುಖಸಂತೋಷಗಳಿಗೆ ಕುತ್ತು ತರುತ್ತಾನೆ. ಎಷ್ಟೇ ಸುಖದ ಸುಪ್ಪತ್ತಿಗೆಯಲ್ಲಿ ಇದ್ದರೂ ಒಂದು ಮುಳ್ಳು ಹಾಸಿಗೆಯಲ್ಲಿ ಸೇರಿದರೆ ಹೇಗೆ ಕಿರಿಕಿರಿ ಆಗುವುದೋ ಹಾಗೆ ಏನೋ ಒಂದು ಸಣ್ಣಪುಟ್ಟ ಕಿರಿಕಿರಿ ಇರುತ್ತದೆ. ನಿರಾಳತೆ ಇರುವುದಿಲ್ಲ. ತಾಯಿಯೊಂದಿಗೆ ಜಗಳ ಅಥವಾ ತಾಯಿಯಿಂದ ದೂರ ಇರುವ ಸಂದರ್ಭ ಬರಬಹುದು. ಅಂದರೆ ಬೇರೆ ಊರಿಗೆ ವರ್ಗಾವಣೆ ಆಗುವುದು, ವಿದ್ಯೆಗಾಗಿ ಪರವೂರಿಗೆ ಹೋಗಬೇಕಾಗುವುದು, ವೃತ್ತಿಯಲ್ಲಿ ವರ್ಗಾವಣೆ ಆಗಿ ಮನೆಯಿಂದ ದೂರ ಇರಬೇಕಾದಂಥ ಸಂದರ್ಭ ಬರುವುದು ಹೀಗೆ ಇರುತ್ತದೆ. ಮನಸ್ಸಿಗೆ ಘಾಸಿ ಮಾಡಿಕೊಳ್ಳಬೇಡಿ. ಇವೆಲ್ಲವೂ ತಾತ್ಕಾಲಿಕ. ಮುಂದೆ ನಿಮಗೆ ಒಳ್ಳೆಯ ದಿನಗಳು ಇವೆ. ಈಗಲೂ ಶನಿ ಮೂರನೇ ಮನೆಯಲ್ಲಿ ಇರುವುದು ನಿಮಗೆ ಧೈರ್ಯವನ್ನೂ ಪರಾಕ್ರಮವನ್ನೂ ಕೊಡುತ್ತದೆ. ಹಣದ ಹರಿವನ್ನು ಉತ್ತಮ ಪಡಿಸುತ್ತದೆ. ಹಣಕಾಸಿಗೆ ತೊಂದರೆ ಇಲ್ಲ. ಆದರೆ ಯಾವುದಾದಾರೂ ಶುಭಕಾರ್ಯ ನಡೆಯಬೇಕಿರುವುದು ಕೊಂಚ ವಿಳಬವಾಗುತ್ತದೆ. ಗುರು ಆರನೇ ಮನೆಯಲ್ಲಿ ಕೊಂಚ ಅವಮಾನ ಮನಸ್ಸಿಗೆ ಹಿಂಸೆ ಕೊಡುತ್ತಾನೆ. ಆದ್ದರಿಂದ ನೀವು ನಿಮ್ಮ ಒಡನಾಡಿ ಸ್ನೇಹಿತರು ಬಂಧುಬಾಂಧವರ ಬಳಿ ಜಾಗರೂಕರಾಗಿರಿ. ಮಾತಾಡುವಾಗ ಎಚ್ಚರ ಇರಲಿ. ಗೊತ್ತಿದ್ದೂ ತಪ್ಪು ಮಾಡಬೇಡಿ. ದತ್ತಾತ್ರೇಯನ ಸ್ತೋತ್ರ ಸ್ತವನ ಪಠಿಸಿ.
ಮಕರ ರಾಶಿ
ಇನ್ನು ಕೆಲವೇ ತಿಂಗಳಲ್ಲಿ ಎರಡನೇ ಮನೆಯಲ್ಲಿ ಇರುವ ಶನಿ ಮೂರನೇ ಮನೆ ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ. ಅಲ್ಲಿಗೆ ನಿಮ್ಮ ಸಾಡೆಸಾತಿ ಸಮಯ ಮುಗಿಯುತ್ತದೆ. ಅಲ್ಲಿಂದ ನಿಮಗೆ ಅದೃಷ್ಠಗಳ ಸುರಿಮಳೆ. ಈಗ ಗುರು ನಿಮ್ಮ ರಾಶಿಯಿಂದ ಐದನೇ ಮನೆಯಲ್ಲಿ ಇರುವುದು ಕೂಡ ಅದೃಷ್ಠವನ್ನು ತರುತ್ತದೆ. ಐದನೇ ಮನೆಯಲ್ಲಿ ಗುರು ಮೂರನೇ ಮನೆಯಲ್ಲಿ ರಾಹು ಇಬ್ಬರೂ ಈಗ ನಿಮಗೆ ಬಹಳ ಅನುಕೂಲವಾಗಿದ್ದಾರೆ. ಹಣದ ಹರಿವು ಉತ್ತಮವಾಗಿರುತ್ತದೆ. ಈ ತಿಂಗಳ ಮೊದಲಲ್ಲಿ ಬುಧ ಹಾಗೂ ಶುಕ್ರ ನಿಮ್ಮರಾಶಿಯಿಂದ ಏಳನೇ ಮನೆಗೆ ಬರುತ್ತಾರೆ ಇದೂ ಕೂಡ ನಿಮಗೆ ಶುಭಫಲವನ್ನು ಕೊಡುತ್ತದೆ. ಈಗ 15 ನೇ ತಾರೀಖಿನವರೆಗೂ ಸೂರ್ಯ ಆರನೇ ಮನೆಯಲ್ಲಿ ಇದ್ದು ಪರಾಕ್ರಮವನ್ನೂ ಧೈರ್ಯವನ್ನೂ ಕೊಡುತ್ತಾನೆ. ಗುರುಬಲ ರಾಹುಬಲ ಜೊತೆಗೆ ಸೂರ್ಯನ ಬಲದಿಂದ ಏನಾದರೂ ಅದೃಷ್ಟ ಒಲಿದು ಬರಬಹುದು. ಅವಿವಾಹಿತರಿಗೆ ವಿವಾಹಯೋಗ ಇದೆ. ಹೊಸ ಕೆಲಸ ನೌಕರಿ ಬಡ್ತಿ ಪ್ರವಾಸ ಎಲ್ಲವೂ ಇದೆ. ಕೇತು ಒಂಬತ್ತನೆಯ ಮನೆಯಲ್ಲಿ ಇರುವುದು ಶುಭವಲ್ಲದಿದ್ದರೂ ಗುರುವಿನ ದೃಷ್ಟಿ ಕೇತುವಿನ ಮೇಲೆ ಇದೆ. ಗುರು ಐದನೇ ಮನೆಯಲ್ಲಿ ಇದ್ದು ಭಾಗ್ಯಸ್ಥಾನವನ್ನೂ ನೋಡುತ್ತಾನೆ. ಇದು ಕೂಡ ನಿಮಗೆ ಅದೃಷ್ಟ ಕೊಡುತ್ತದೆ. ಗುರು ಐದನೇ ಮನೆಯಲ್ಲಿ ಇದ್ದು ನಿಮ್ಮ ರಾಶಿಯನ್ನೂ ನೋಡುತ್ತಾನೆ. ಹೀಗಾಗಿ ನಿಮಗೆ ನಾನಾ ತರದಲ್ಲಿ ಅನುಕೂಲಗಳು ಒದಗಿಬರಲಿದೆ. ನಿಮ್ಮ ಮೇಲೆ ಇರುವ ಒಂದು ಪೂರ್ವಾಗ್ರಹ ಅಭಿಪ್ರಾಯ ಬದಲಾಗಿ ನಿಮಗೆ ನೆಮ್ಮದಿಯನ್ನು ತಂದುಕೊಡುತ್ತದೆ.
ಕುಂಭ ರಾಶಿ
ಈಗ ನಿಮಗೆ ಗುರುಬಲ ಇಲ್ಲ. ಇದು ನಿಮ್ಮನ್ನು ಹಿಂದಕ್ಕೆ ಎಳೆಯುತ್ತದೆ. ನೀವು ನಾಲ್ಕು ಹೆಜ್ಜೆ ಮುಂದಿಟ್ಟರೆ ವಿಧಿ ನಿಮ್ಮನ್ನು ಐದು ಹೆಜ್ಜೆ ಹಿಂದಕ್ಕೆ ಎಳೆಯುತ್ತದೆ. ಯಾವ ಕೆಲಸಕ್ಕೆ ಕೈಹಾಕಿದರೂ ನಿಧಾನ. ಕೋರ್ಟ್ ಪ್ರಕರಣಗಳು ವಿಚಾರಣೆಗಳು ತೀವ್ರಸ್ವರೂಪ ಪಡೆದು ನೀವೆ ಒತ್ತಡವನ್ನು ಸೃಷ್ಟಿ ಮಾಡುತ್ತದೆ. ಈ ತಿಂಗಳ ಮೊದಲವಾರದಲ್ಲಿ ಬುಧ ಶುಕ್ರರು ಆರನೇ ಮನೆಗೆ ಪ್ರವೇಶವಾಗುವುದು ಕೊಂಚ ನಿಮಗೆ ಬಿಗಿ ಸಡಿಲವಾದಂತೆ ಅನಿಸಬಹುದು. ಆದರೂ ಎರಡನೇ ಮನೆ ರಾಹು ನಾಲ್ಕನೇ ಮನೆ ಗುರು ನಿಮಗೆ ಹಿನ್ನಡೆ ಕೊಡುತ್ತಾರೆ. ದತ್ತಾತ್ರೇಯ ಮತ್ತು ದುರ್ಗೆಯ ಪೂಜೆ ಮಾಡಿರಿ. ಸ್ತೋತ್ರ ಪಠಿಸಿರಿ. ಮನೆಯಲ್ಲಿ ಪ್ರತಿಕೂಲ ವಾತಾವರಣ ಇರುತ್ತದೆ. ನೀವು ಏನೇ ಹೇಳಿದರೂ ಅದಕ್ಕೆ ಒಂದು ವ್ಯತಿರಿಕ್ತ ಅಭಿಪ್ರಾಯ ವ್ಯಕ್ತವಾಗುತ್ತದೆ. ಈ ತಿಂಗಳ 15 ರ ನಂತರ ಸೂರ್ಯ ಆರನೇ ಮನೆ ಕಟಕರಾಶಿಗೆ ಪ್ರವೇಶವಾಗುತ್ತಾನೆ. ಆಗ ನಿಮಗೆ ಕೊಂಚ ಧನಲಾಭ ಆಗಬಹುದು. ಸರ್ಕಾರಿ ನೌಕರರಿಗೆ ಅನುಕೂಲ ಆಬಹುದು. ಏನೇ ಆದರೂ ಸಾಡೆಸಾತಿಯ ಪ್ರಭಾವದಲ್ಲಿ ಇರುವಾಗ ಅನುಕೂಲ ನೆಮ್ಮದಿ ಕಡಿಮೆ. ನೆಮ್ಮದಿಗೆ ಭಂಗವಾಗುವ ಘಟನೆಗಳೇ ಹೆಚ್ಚು. ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ನಿಮ್ಮ ಕೆಲಸ ಪ್ರಾಮಾಣಿಕತೆಯಿಂದ ಮಾಡಿ.
ಮೀನ ರಾಶಿ
ನಿಮಗೂ ಸಹ ಈಗ ಗಂಭೀರ ಸಮಯ. ಯಾವುದು ಅನಿರೀಕ್ಷಿತ ಎಂದುಕೊಂಡಿರುತ್ತೀರೋ ಅದೇ ಧುತ್ತನೆ ಪ್ರತ್ಯಕ್ಷವಾಗಿ ನಿಮಗೆ ಭಯ ಪಡಿಸುವ ಸಮಯ. ಮನೆಯಲ್ಲಿ ಅಸೌಖ್ಯ ವಾತಾವರಣ. ನಿಮಗೂ ಸಹ ಅನಾರೋಗ್ಯ ಅಸ್ವಸ್ಥತೆ ಕಾಡುತ್ತದೆ. ನಿಮ್ಮ ರಾಶಿಯಲ್ಲೇ ರಾಹು ಹಾಗೂ ಏಳನೇ ಮನೆಯ ಕೇತು ಇಬ್ಬರೂ ಈಗ ನಿಮಗೆ ಅನುಕೂಲರಲ್ಲ. ಏಳರಾಟದ ಶನಿ ನಡೆಯುತಿರುವಾಗ ನೀವಂದುಕೊಂಡಂತೆ ಯಾವುದೂ ನಡೆಯುವುದಿಲ್ಲ. ಸ್ವಲ್ಪ ಹತಾಶೆ, ಹಣ ನಷ್ಟ, ಬಂಧು ಸ್ನೇಹಿತರ ನಡುವೆ ಕಿರಿಕಿರಿ ಜಗಳ ಇಂಥವೆಲ್ಲ ಇದ್ದೇ ಇರುತ್ತದೆ. ಮೇಲಾಧಿಕಾರಿಗಳಿಗೆ ನೀವೆಷ್ಟೇ ಚೆನ್ನಾಗಿ ಕೆಲಸ ಮಾಡಿದರೂ ತಪ್ಪು ಕಾಣುತ್ತದೆ. ನಿಮ್ಮನ್ನು ಕುಗ್ಗಿಸುವ ಕೆಲಸ ಅವಾಹತವಾಗಿ ನಡೆಯುತ್ತದೆ. ಇದಕ್ಕೆ ಭಯ ಪಡಬೇಡಿ. ನಿಮ್ಮ ಕೆಲಸವನ್ನು ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಮಾಡಿ. ಫಲವನ್ನು ದೇವರಿಗೆ ಬಿಡಿ. ಯಾರ ಮಾತಿಗೂ ಕಿವಿಕೊಡಬೇಡಿ. ನಿಮ್ಮ ಒಳಮನಸ್ಸಿನ ಮಾತನ್ನೂ ಮಾತ್ರ ಕೇಳಿ. ಸಾಧುಸಂತರ ಯತಿಗಳ ಸೇವೆ ಮಾಡಿ. ನಿಮ್ಮ ಗುರುಗಳನ್ನು ದರ್ಶನ ಮಾಡಿಬನ್ನಿ. ಕಪ್ಪು ಗೋವಿಗೆ ಆಹಾರ ಕೊಡಿ. ಇದು ನಿಮ್ಮನ್ನು ಎಷ್ಟೋ ಆಪತ್ತುಗಳಿಂದ ರಕ್ಷಿಸುತ್ತದೆ.