ನವದೆಹಲಿ: ಸುಲ್ತಾನ್ಪುರದ ಚಮ್ಮಾರನ ಅಂಗಡಿಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೊಲಿದಿದ್ದ ಚಪ್ಪಲಿಗೆ ಭಾರೀ ಡಿಮ್ಯಾಂಡ್ ಬಂದಿದೆ. ರಾಹುಲ್ ಹೊಲಿದ ಚಪ್ಪಲಿಗೆ ವ್ಯಕ್ತಿಯೊಬ್ಬರು 10 ಲಕ್ಷ ರೂ.ಗೆ ಬೇಡಿಕೆ ಇಟ್ಟರೂ ಸಹ ಚಮ್ಮಾರ ರಾಮ್ ಚೈತ್ ಚಪ್ಪಲಿಯನ್ನು ಮಾರಾಟ ಮಾಡಲು ನಿರಾಕರಿಸಿದ್ದಾರೆ.
ಜು.26 ರಂದು ರಾಹುಲ್ ಗಾಂಧಿ ಮಾನನಷ್ಟ ಮೊಕದ್ದಮೆ ಪ್ರಕರಣವೊಂದರ ವಿಚಾರಣೆಗೆ ಉತ್ತರ ಪ್ರದೇಶದಕ್ಕೆ ಬಂದಾಗ ಸುಲ್ತಾನ್ಪುರದ ಬೀದಿಬದಿಯಿರುವ ರಾಮ್ ಚೈತ್ ಎಂಬ ಚಮ್ಮಾರನ ಅಂಗಡಿಗೆ ದಿಢೀರ್ ಭೇಟಿ ನೀಡಿದ್ದರು.
ರಾಹುಲ್ ಗಾಂಧಿ ಮತ್ತು ಚಮ್ಮಾರ ರಾಮ್ ಚೈತ್ ನಡುವೆ ಕುಶಲೋಪರಿಯ ಮಾತುಕತೆಯ ಬಳಿಕ ರಾಹುಲ್ ಗಾಂಧಿ ಚಪ್ಪಲಿಯೊಂದಕ್ಕೆ ಹೋಲಿಗೆ ಹಾಕಲು ಪ್ರಯತ್ನಿಸಿದ್ದರು. ಮಾರನೇ ದಿನ ಆ ಚಮ್ಮಾರನಿಗೆ ಹೊಲಿಗೆ ಯಂತ್ರವೊಂದು ಕಳುಹಿಸಿ ಮಾನವೀಯತೆ ಮೆರೆದಿದ್ದರು.
ಈ ಚಪ್ಪಲಿ ನನ್ನ ಅದೃಷ್ಟ :
ಈ ಕುರಿತು ಚಮ್ಮಾರ ರಾಮ್ ಚೈತ್ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಹೊಲಿದಿರುವ ಈ ಚಪ್ಪಲಿ ನನ್ನ ಅದೃಷ್ಟ ಎಂದು ಭಾವಿಸಿ ಅದನ್ನು ಫ್ರೇಮ್ ಹಾಕಿಸಿ ಜೋಪಾನವಾಗಿ ನನ್ನ ಅಂಗಡಿಯಲ್ಲಿ ಇಡುತ್ತೇನೆ ಎಂದಿದ್ದಾರೆ.
ರಾಹುಲ್ ಗಾಂಧಿ ಭೇಟಿ ಬಳಿಕ ಜನರು ನನ್ನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಆ ಚಪ್ಪಲಿಗಾಗಿ ನನಗೆ ಸಾಕಷ್ಟು ಕರೆಗಳು ಬರುತ್ತಿವೆ. ಆ ಚಪ್ಪಲಿಗೆ 10 ಲಕ್ಷ ರೂ.ವರೆಗೆ ಬೇಡಿಕೆ ಬಂದಿದೆ. ಆದರೆ ನಾನು ಅದನ್ನು ತಿರಸ್ಕರಿಸಿದ್ದೇನೆ. ಆ ಚಪ್ಪಲಿಯನ್ನು ನಾನು ಯಾರಿಗೂ ಮಾರಾಟ ಮಾಡುವುದಿಲ್ಲ ಎಂದು ಚಮ್ಮಾರ ರಾಮ್ ಚೈತ್ ತಿಳಿಸಿದ್ದಾರೆ.

