ತಿರುಮಲ: ತಿರುಪತಿಯಲ್ಲಿ ಭೀಕರ ಕಾಲ್ತುಳಿತ ಉಂಟಾಗಿದ್ದು, ಐವರು ಮಹಿಳಾ ಭಕ್ತರು ಸೇರಿ 6 ಮಂದಿ ಸಾವಿಗೀಡಾಗಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸರ್ವದರ್ಶನ ಟಿಕೆಟ್ಗಾಗಿ ಭಕ್ತರು ವಿತರಣಾ ಕೇಂದ್ರಗಳತ್ತ ಒಮ್ಮೆಲೇ ನುಗ್ಗಿ ಬಂದ ಕಾರಣ, ಕಾಲ್ತುಳಿತ ಉಂಟಾಗಿದೆ. ಇದರಿಂದ ಹಲವು ಭಕ್ತರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಮೃತ ಭಕ್ತರಲ್ಲಿ ತಮಿಳುನಾಡಿನ ಸೇಲಂ ಮೂಲದ ಮಹಿಳೆ ಕೂಡ ಇದ್ದಾರೆ.
ಇದೇ ಜನವರಿ 10 ರಂದು ವೈಕುಂಠ ಏಕಾದಶಿ ನಡೆಯಲಿದೆ. ಈ ವೇಳೆ ವಿಶ್ವ ಪ್ರಸಿದ್ಧ ತಿರುಪತಿ ದೇವಸ್ಥಾನದಲ್ಲಿ ವೈಕುಂಠ ದ್ವಾರ ತೆರೆಯಲಿದ್ದು, ತಿಮ್ಮಪ್ಪನ ಆಲಯದಲ್ಲಿ ಸಡಗರ ಮನೆ ಮಾಡಿರುತ್ತೆ. ಆದ್ರೆ ಏಕಾದಶಿಗೂ ಮುನ್ನವೇ ತಿರುಪತಿಯಲ್ಲಿ ದಾರುಣ ಘಟನೆ ನಡೆದುಹೋಗಿದೆ.
ವೈಕುಂಠ ಏಕಾದಶಿಯ ಸಂದರ್ಭದಲ್ಲಿ ತಿರುಮಲ ಶ್ರೀವರಿ ವೈಕುಂಠ ದ್ವಾರದ ದರ್ಶನಕ್ಕಾಗಿ ತಿರುಪತಿಯ ಎಂಟು ಕೇಂದ್ರಗಳಲ್ಲಿ ಸ್ಲಾಟ್ ಮಾಡಿದ ಸರ್ವ ದರ್ಶನ ಟೋಕನ್ಗಳನ್ನು ವಿತರಿಸಲು ಟಿಟಿಡಿ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ. ಈ ತಿಂಗಳ 10, 11 ಮತ್ತು 12 ರಂದು ಒಟ್ಟು 1.20 ಲಕ್ಷ ಟೋಕನ್ಗಳನ್ನು ನೀಡಲಾಗುವುದು ಎಂದು ಘೋಷಿಸಲಾಗಿತ್ತು. ಆದಾಗ್ಯೂ ದಿನಾಂಕ 9 (ಗುರುವಾರ) ರಂದು ಬೆಳಗ್ಗೆ 5 ಗಂಟೆಗೆ ಟೋಕನ್ ವಿತರಣೆ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂಬ ವಿಚಾರ ತಿಳಿದ ಬೆನ್ನಲ್ಲೇ ಬುಧವಾರ ಬೆಳಿಗ್ಗೆಯಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಟೋಕನ್ ವಿತರಣಾ ಕೇಂದ್ರಗಳಲ್ಲಿ ನೂಕುನುಗ್ಗಲಿಗೆ ಕಾರಣರಾದರು.
ಟಿಟಿಡಿ ಅಧ್ಯಕ್ಷರು ಹೇಳಿದ್ದೇನು..?
ಮೃತರ ಪೈಕಿ ಐದು ಮಹಿಳೆಯರು ಮತ್ತು ಓರ್ವ ಪುರುಷ ಎಂದು ವರದಿಯಾಗಿದೆ. ಕಾಲ್ತುಳಿತ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಟಿಟಿಡಿ ಅಧ್ಯಕ್ಷರಾದ ಬಿ.ಆರ್. ನಾಯ್ಡು, “ದೇವಸ್ತಾನದ ಬಳಿ ಜಮಾಯಿಸಿದ್ದ ಭಕ್ತರು ಹೊರಗಿರುವಾಗ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದ್ವಾರವನ್ನು ತೆರೆದರು. ಈ ವೇಳೆ ಭಕ್ತರು ಏಕಾಏಕಿ ನುಗ್ಗಿದ್ದೇ ಕಾಲ್ತುಳಿತಕ್ಕೆ ಕಾರಣವಾಯಿತು. ಕಾಲ್ತುಳಿತ ಸಂಭವಿಸಲು ಅತಿಯಾದ ಜನದಟ್ಟಣೆ. ನಿಜಕ್ಕೂ ಇದೊಂದು ದುರದೃಷ್ಟಕರ ಘಟನೆ” ಎಂದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಮಂಡಳಿ ಸದಸ್ಯ ಭಾನು ಪ್ರಕಾಶ್ ರೆಡ್ಡಿ, “ವೈಕುಂಠ ಏಕಾದಶಿ ದರ್ಶನಕ್ಕಾಗಿ ಟೋಕನ್ ವಿತರಿಸಲು ನಾವು 91 ಕೌಂಟರ್ಗಳನ್ನು ತೆರೆದಿದ್ದೇವೆ. ದುರದೃಷ್ಟವಶಾತ್ ಕಾಲ್ತುಳಿತ ಸಂಭವಿಸಿದೆ. ಈ ಕುರಿತು ಸಮಗ್ರ ತನಿಖೆ ನಡೆಸಿ, ಕ್ರಮ ಕೈಗೊಳ್ಳುತ್ತೇವೆ” ಎಂದಿದ್ದಾರೆ

