ಬೆಂಗಳೂರು : ನಗರದಲ್ಲೇ ನಡೆದಿರುವ ದರೋಡೆ (Robbery ) ಪ್ರಕರಣ ನಗರವನ್ನು ಬೆಚ್ಚಿಬೀಳಿಸಿದೆ. ಇಂದು ಮಧ್ಯಾಹ್ನ ಸುಮಾರು 2.30ರ ಸುಮಾರಿಗೆ ಜೆ.ಪಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಗಳಲ್ಲಿ, ದರೋಡೆಕೋರರ ಒಂದು ಗ್ಯಾಂಗ್ ನಗದು ಸಾಗಣೆ ವಾಹನದಿಂದ 7.11 ಕೋಟಿ ರೂಪಾಯಿ ದೋಚಿಕೊಂಡು ಪರಾರಿಯಾಗಿದೆ.
ಎಟಿಎಂಗಳಿಗೆ ನಗದು ತುಂಬುವ ಜವಾಬ್ದಾರಿಯನ್ನಿಟ್ಟಿರುವ ಖಾಸಗಿ ಸಂಸ್ಥೆಯ ನೌಕರರು ಒಂದು ವ್ಯಾನ್ನಿಂದ ಮತ್ತೊಂದು ವಾಹನಕ್ಕೆ ಹಣ ವರ್ಗಾಯಿಸುತ್ತಿದ್ದ ಸಂದರ್ಭದಲ್ಲಿ, ಈ ಮಾಹಿತಿ ಮೊದಲೇ ತಿಳಿದುಕೊಂಡಿದ್ದ ದರೋಡೆಗಾರ್ಗಳು ಕಾರಿನಲ್ಲಿ ಸ್ಥಳಕ್ಕೆ ಬಂದು ತಾವು ಕೇಂದ್ರ ಸರ್ಕಾರದ ತೆರಿಗೆ ಅಧಿಕಾರಿಗಳು ಎಂದು ನಂಬಿಸಿ, ನೇರವಾಗಿ ವಾಹನ ಹಾಗೂ ನಗದು ಎರಡನ್ನೂ ಕಬಳಿಸಿಕೊಂಡಿದ್ದಾರೆ.
ದರೋಡೆ ಬಳಿಕ, ದರೋಡೆಕೋರರು ಡೇರಿ ವೃತ್ತದ ಮೇಲ್ಸೇತುವೆ ಮೇಲೆ ಹಣ ಹೊಂದಿದ್ದ ವಾಹನವನ್ನು ನಿಲ್ಲಿಸಿ, ನಗದನ್ನು ತಮ್ಮ ವಾಹನಕ್ಕೆ ತುಂಬಿಕೊಂಡು ಕೆಲವೇ ಕ್ಷಣಗಳಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆ ತಿಳಿದ ಕೂಡಲೇ, ನಗರ ಪೊಲೀಸ್ ಇಲಾಖೆ ನಗರಾದ್ಯಂತ ನಾಕಾಬಂದಿ ಜಾರಿಗೊಳಿಸಿ ದರೋಡೆಕೋರರ ಪತ್ತೆ ಹಾಗೂ ಕಳವಾದ 7.11 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲು ಬೃಹತ್ ಶೋಧ ಕಾರ್ಯ ಆರಂಭಿಸಿದೆ. ದರೋಡೆಕೋರರ ತಂಡದಲ್ಲಿ 7ರಿಂದ 8 ಮಂದಿ ಇದ್ದರೆಂದು ಪ್ರಾಥಮಿಕ ಮಾಹಿತಿ ದೊರೆತಿದೆ. ಘಟನೆಗೆ ಸಂಬಂಧಿಸಿದಂತೆ ವಿವಿಧ ಕೋನಗಳಿಂದ ತನಿಖೆ ಮುಂದುವರಿದಿದೆ.
ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರತಿಕ್ರಿಯೆ :
ನಗರದಲ್ಲಿ 7 ಕೋಟಿ ಹಣ ದರೋಡೆ ನಡೆದಿದ್ದು, ಸಂಬಂಧಿಸಿದವರು ತಕ್ಷಣ ಪೋಲೀಸರಿಗೆ ಮಾಹಿತಿ ನೀಡಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಕ್ಷಣ ಮಾಹಿತಿ ನೀಡಿದ್ದರೆ ನಮ್ಮ ಪೊಲೀಸರು ದರೋಡೆಕೋರರನ್ನು ಬಂಧಿಸುವುದಕ್ಕೆ ಸಹಾಯವಾಗುತ್ತಿತ್ತು ಎಂದು ಹೇಳಿದ್ದರು.
ಇಂದು ಮಧ್ಯಾಹ್ನ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಟಿಎಂ ಗೆ ಹಣ ತುಂಬಲು ಹೋಗುತ್ತಿದ್ದ ವಾಹನವನ್ನು ಅಡಗಟ್ಟಿ 7 ಕೋಟಿ ಹಣವನ್ನು ದರೋಡೆಕೋರರು ದೋಚಿ ಪರಾರಿಯಾಗಿದ್ದಾರೆ ಎಂದು ಅವರು ತಿಳಿಸಿದರು.
ಹಣ ಸಾಗಿಸುತ್ತಿದ್ದ ವಾಹನದ ಚಾಲಕ ನಮ್ಮ ಪೊಲೀಸರಿಗೆ ಸ್ವಲ್ಪ ಮಾಹಿತಿ ನೀಡಿದ್ದಾರೆ. ಆತನನ್ನು ನಮ್ಮ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಸುದ್ದಿ ತಿಳಿದ ತಕ್ಷಣ ನಗರಾದ್ಯಂತ ನಾಕಾಬಂದಿ ಮಾಡಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದೇವೆ. ಆದರೆ ಈವರೆಗೂ ದರೋಡೆಕೋರರು ಸಿಕ್ಕಿಲ್ಲ ಎಂದರು.

