ತಿರುಪತಿ: ತಿರುಪತಿ ತಿಮ್ಮಪ್ಪ ದೇವಾಲಯದ ಪವಿತ್ರ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಬಳಕೆ ಮಾಡಲಾಗಿದೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಚರ್ಚೆಯಲ್ಲಿದೆ. ಈ ಬೆನ್ನಲ್ಲೇ ದೇವಸ್ಥಾನದ ಆಢಳಿತ ಮಂಡಳಿ ದೇವಸ್ಥಾನ ಶುದ್ಧೀಕರಣಕ್ಕೆ ಮುಂದಾಗಿದೆ.
ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ಶಾಂತಿ ಹೋಮ ಆರಂಭವಾಗಿದೆ. ಪಂಡಿತರು ಹಾಗೂ ಅರ್ಚಕರು ದೇವಸ್ಥಾನದ ಯಾಗಶಾಲೆಯಲ್ಲಿ ಹೋಮ ನಡೆಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಇಒ ಶ್ಯಾಮಲಾ ರಾವ್, ಹೆಚ್ಚುವರಿ ಇಒ ವೆಂಕಯ್ಯ ಚೌಧರಿ ಭಾಗವಹಿಸಿದ್ದರು. ಶಾಂತಿ ಹೋಮ ನಡೆಯಲಿದೆ. ಹೋಮ ಮುಗಿದ ನಂತರ ದೇವಸ್ಥಾನದಲ್ಲಿ ಲಡ್ಡು ಪೋಟು ಸಹಿತ ಪಂಚಗವ್ಯಗಳೊಂದಿಗೆ ಸಂಪ್ರೋಕ್ಷಣೆ ಕಾರ್ಯಕ್ರಮ ನಡೆಯಲಿದೆ.
ಇಂದು ರೋಹಿಣಿ ನಕ್ಷತ್ರ ಶ್ರೀಗಳಿಗೆ ಮುಹೂರ್ತದ ಬಲವಿರುವುದರಿಂದ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಶಾಂತಿ ಹೋಮ ನಡೆಸಲಾಗುತ್ತಿದೆ. ಮೊದಲಿಗೆ ಶಾಂತಿ ಯಾಗ ಮತ್ತು ವಾಸ್ತು ಹೋಮ ನಡೆಸಲಾಗುತ್ತದೆ. ಅಂತಿಮವಾಗಿ ಅರ್ಚಕರು ಪಂಚಗವ್ಯಗಳೊಂದಿಗೆ ಸಂಪ್ರೋಕ್ಷಣೆ ನಡೆಸಲಿದ್ದಾರೆ. ಆದರೆ, ಆಗಮ ಪಂಡಿತರು ಭಗವಂತನಿಗೆ ಮಾಡುವ ಪುಣ್ಯಕಾರ್ಯಗಳಿಗೆ ಅಡ್ಡಿಯಾಗದಂತೆ ಒಂದು ದಿನ ಮಾತ್ರ ಯಾಗ ಮಾಡಲು ನಿರ್ಧರಿಸಿದ್ದಾರೆ.
ಲಡ್ಡು ಪ್ರಸಾದಕ್ಕೆ ಈ ಹಿಂದೆ ಬಳಸಿದ ತುಪ್ಪದಲ್ಲಿ ವಿದೇಶಿ ಸಂಸ್ಥೆಗಳಿಂದ ತರಿಸಿಕೊಂಡ ವಿವಿಧ ಪ್ರಾಣಿಗಳ ಕೊಬ್ಬು ಸೇರಿಸಲಾಗಿತ್ತು ಎಂಬ ಅಂಶವನ್ನು ಲ್ಯಾಬ್ ಪರೀಕ್ಷೆಗಳು ಬಹಿರಂಗಪಡಿಸಿದ ನಂತರ ಈ ವಿಷಯ ದೇಶ, ವಿದೇಶಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅಪವಿತ್ರ ಆರೋಪ ನಡುವೆಯೂ ತಿರುಪತಿ ಲಡ್ಡುಗೆ ಬೇಡಿಕೆ :
ತಿರುಪತಿ ಲಡ್ಡು ಅಪವಿತ್ರವಾಗಿದೆ ಎಂಬ ಆರೋಪಗಳು ಲಡ್ಡು ಪ್ರಸಾದಕ್ಕೆ ಬೇಡಿಕೆ ಕುಸಿಯಬಹುದು ಎಂದು ಎಲ್ಲರೂ ಅಂದಾಜಿಸಿದ್ದರು. ಆದರೆ, ಈ ಆರೋಪಗಳು ಭಕ್ತರ ಮೇಲೆ ಹೆಚ್ಚಿನ ಪ್ರಭಾವ ಬೀರಿಲ್ಲ.ತಿಮ್ಮಪ್ಪನ ಮಹಾ ಪ್ರಸಾದ ಲಡ್ಡುಗೆ ಮತ್ತೆ ಬೇಡಿಕೆ ಹೆಚ್ಚಿದೆ.ಇದಕ್ಕೆ ಲಡ್ಡು ಮಾರಾಟದ ಲೆಕ್ಕವೇ ಸಾಕ್ಷಿಯಾಗಿದೆ. ಸೆ. 19 ರಂದು 3.69 ಲಕ್ಷ, 20 ರಂದು 3.16 ಲಕ್ಷ, 21 ರಂದು 3.66 ಲಕ್ಷ ಲಡ್ಡುಗಳನ್ನು ಟಿಟಿಡಿ ಮಾರಾಟ ಮಾಡಿದೆ. ಲಡ್ಡು ತಯಾರಿಯಲ್ಲಿ ಅಪಚಾರ ನಡೆದಿದೆ ಎಂಬ ಆರೋಪಗಳ ನಡುವೆಯೂ ತಿಮ್ಮಪ್ಪನ ಪ್ರಸಾದವನ್ನು ಪರಮವಿತ್ರ ಎಂದೇ ಭಕ್ತರು ಪರಿಗಣಿಸಿದ್ದಾರೆ.
ಅಕ್ರಮಗಳ ತನಿಖೆಗೆ ವಿಶೇಷ ತಂಡ ರಚನೆ :
ವೈಎಸ್ ಆರ್ ಪಿ ಸರ್ಕಾರದ ಅವಧಿಯಲ್ಲಿ ತಿರುಪತಿ ದೇವಸ್ಥಾನದ ಲಡ್ಡುಗಳ ತಯಾರಿಕೆಗೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬನ್ನು ಕಲಬೆರಕೆ ಮಾಡಲಾಗಿದೆ ಎಂಬ ಆರೋಪದ ಬೆನ್ನಲ್ಲೇ ದೇವಾಲಯದ ಅವ್ಯವಹಾರಗಳ ತನಿಖೆಗೆ ಸಿಎಂ ಎನ್.ಚಂದ್ರಬಾಬು ನಾಯ್ಡು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ.
ಈ ಹಿಂದೆ ತಿರುಮಲ ತಿರುಪತಿ ದೇವಸ್ಥಾನಮ್ ಟ್ರಸ್ಟ್ನ ಮಾಜಿ ಅಧ್ಯಕ್ಷ ಭೂಮನ ಕರುಣಾಕರ್ ರೆಡ್ಡಿ ಮತ್ತು ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಎವಿ ಧರ್ಮಾ ರೆಡ್ಡಿ ಕಳೆದ ಐದು ವರ್ಷಗಳಿಂದ ದೇವಾಲಯದ ನಿರ್ವಹಣೆಯಲ್ಲಿ ಹಲವಾರು ಅಕ್ರಮಗಳನ್ನು ಎಸಗಿದ್ದಾರೆ ಎಂದು ಆರೋಪಿಸಿತ್ತು. ಈ ಎಲ್ಲಾ ಪ್ರಕರಣವನ್ನೂ ತನಿಖೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಅಲ್ಲದೇ ಪ್ರಕರಣದ ತನಿಖೆ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಟಿಡಿಪಿ ಹೇಳಿದೆ.

