ಚನ್ನಪಟ್ಟಣ : ಹುಬ್ಬಳ್ಳಿ ಧಾರವಾಡ ಮಾದರಿಯಲ್ಲಿ ಚನ್ನಪಟ್ಟಣ ಮತ್ತು ರಾಮನಗರ ಪಟ್ಟಣಗಳನ್ನು ಅವಳಿ ನಗರಗಳನ್ನಾಗಿ ಅಭಿವೃದ್ದಿ ಮಾಡಲಾಗುವುದು ಎಂದು ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಭರವಸೆ ನೀಡಿದರು.
ಚನ್ನಪಟ್ಟಣ ಕ್ಷೇತ್ರದ ನೀಲಕಂಠನಹಳ್ಳಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು; ಅವಳಿ ಪಟ್ಟಣಗಳನ್ನು ಅವಳಿ ನಗರಗಳನ್ನಾಗಿ ಪರಿವರ್ತಿಸಲಾಗುವುದು. ಇದರಿಂದ ಈ ಭಾಗದ ಆರ್ಥಿಕತೆಗೆ ಶಕ್ತಿ ಬರುವುದರ ಜತೆಗೆ ಜನಜೀವನ ಮಟ್ಟವೂ ಸುಧಾರಿಸುತ್ತದೆ. ಅಭಿವೃದ್ಧಿ ಮಾಡುವುದು ಎಂದರೆ ಯಾವುದೇ ದುರುದ್ದೇಶಕ್ಕೆ ಬೆಂಗಳೂರಿಗೆ ಸೇರುವುದಲ್ಲ, ಆಯಾ ಪ್ರದೇಶಗಳನ್ನು ಆಯಾ ಬೌಗೋಳಿಕ ವ್ಯಾಪ್ತಿಯಲ್ಲಿಯೇ ವಿಸ್ತೃತವಾಗಿ ಅಭಿವೃದ್ಧಿ ಮಾಡುವುದು ಎಂದು ತಮ್ಮ ವಿರೋಧಿಗಳಿಗೆ ಟಾಂಗ್ ಕೊಟ್ಟರು.
ಕಮೀಶನ್ ದುರಾಸೆಗೆ ಯುಜಿಡಿ ಯೋಜನೆ ನೆನೆಗುದಿಗೆ
ಚನ್ನಪಟ್ಟಣ ಕ್ಷೇತ್ರದಲ್ಲಿ ಒಳಚರಂಡಿ ವ್ಯವಸ್ಥೆ ಆಗಿಲ್ಲ. ನಾನು ಸಿಎಂ ಆಗಿದ್ದಾಗ ಯೋಜನೆಗೆ ಒಪ್ಪಿಗೆ ನೀಡಿದ್ದೆ. ₹97 ಕೋಟಿ ಹಣ ಬಿಡುಗಡೆಯಾಗಿ ಮೂರು ವರ್ಷವಾಗಿದೆ. ಟೆಂಡರ್ ಕರೆದು ಹಣ ಬಿಡುಗಡೆ ಮಾಡಿದರೆ ಕೆಲಸ ಆಗುತ್ತಿದೆ. ಅದನ್ನು ಮಾಡುವುದು ಬಿಟ್ಟು ಗುತ್ತಿಗೆದಾರರಿಗೆ ‘ಮನೆ ಹತ್ತಿರ ಬಂದು ನೋಡಿ’ ಎಂದು ತಾಕೀತು ಮಾಡುತ್ತಿದ್ದಾರೆ. ಅವರ ಕಮೀಶನ್ ದುರಾಸೆಗೆ ಯುಜಿಡಿ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ಕುಮಾರಸ್ವಾಮಿ ಅವರು ದೂರಿದರು.
ಗಾರ್ಮೆಂಟ್ಸ್ ಕಾರ್ಖಾನೆಗೆ ಸ್ಥಾಪನೆ
ನೀಲಕಂಠನಹಳ್ಳಿ ಗ್ರಾಮದ ಹೆಣ್ಣು ಮಕ್ಕಳು ಗಾರ್ಮೆಂಟ್ಸ್ ಕಾರ್ಖಾನೆ ಬೇಕೆಂದು ಕೇಳಿದ್ದಾರೆ. ಅವರ ಮನವಿ ನಾನು ಸ್ಪಂದಿಸುತ್ತೇನೆ. ಹೆಣ್ಣು ಮಕ್ಕಳಿಗೆ ಟೈಲರಿಂಗ್ ತರಬೇತಿ ಕೊಡಿಸಿ, ಗಾರ್ಮೆಂಟ್ಸ್ ಕಾರ್ಖಾನೆ ಸ್ಥಾಪನೆ ಮಾಡುವ ಬಗ್ಗೆ ಗಂಭೀರವಾಗಿ ಪರಿಶೀಲಿಸಿ ಪ್ರಯತ್ನ ಮಾಡುತ್ತೇನೆ ಎಂದು ಕೇಂದ್ರ ಸಚಿವರು ಭರವಸೆ ನೀಡಿದರು.
ದಲಿತರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಎತ್ತಿಕಟ್ಟುವ ಹೀನ ರಾಜಕೀಯವನ್ನು ಕಾಂಗ್ರೆಸ್ ಮಾಡುತ್ತಿದೆ. ಅಂಬೇಡ್ಕರ್ ಅವರನ್ನು ಎರಡು ಸಾಲ ಸೋಲಿಸಿ ಅವರನ್ನು ರಾಜಕೀಯವಾಗಿ ನಿರ್ನಾಮ ಮಾಡಿದ್ದು ಕಾಂಗ್ರೆಸ್. ಆದರೆ, ಮೋದಿ ಅವರು ಅಂಬೇಡ್ಕರ್ ಅವರ ಹೆಸರನ್ನು ಚಿರಸ್ಥಾಯಿಗೊಳಿಸಲು ಸಂಕಲ್ಪ ತೊಟ್ಟಿದ್ದಾರೆ. ಸಂವಿಧಾನ ಅಂಗೀಕರಿಸಲಾದ ನವೆಂಬರ್ 26ನೇ ತಾರೀಖನ್ನು ಶಾಶ್ವತವಾಗಿ ಸಂವಿಧಾನ ದಿನವನ್ನಾಗಿ ಆಚರಿಸಲು ಅವರು ನೃದರ ಮಾಡಿದ್ದಾರೆ. ಅಂಬೇಡ್ಕರ್ ಅವರ ಕನಸಿನ ಕಾರ್ಯಕ್ರಮಗಳನ್ನು ಮೋದಿ ಅವರು ಪರಿಣಾಮಕಾರಿ ಆಗಿ ಜಾರಿಗೆ ತರುತ್ತಿದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಹೇಳಿದರು.
ದಲಿತರನ್ನು ಉದ್ಧಾರ ಮಾಡುತ್ತೇವೆ ಎನ್ನುತ್ತಾರೆ. ಆದರೆ ವಾಲ್ಮೀಕಿ ನಿಗಮದಲ್ಲಿದ್ದ ಪರಿಶಿಷ್ಟ ಜಾತಿ, ವರ್ಗದವರ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿ ತೆಲಂಗಾಣ, ಬಳ್ಳಾರಿ ಚುನಾವಣೆಗಳಿಗೆ ಬಳಕೆ ಮಾಡಿಕೊಳ್ಳುತ್ತಾರೆ. ದುರ್ಬಲರನ್ನು ಉದ್ಧಾರ ಮಾಡುವುದು ಎಂದರೆ ಹೀಗೆನಾ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಮೈಸೂರು ಕೊಡಗು ಸಂಸದ ಯದುವೀರ್ ಕೃಷದತ್ತ ಒಡೆಯರ್, ಮಾಜಿ ಸಚಿವ ಸಾ.ರಾ.ಮಹೇಶ್, ಮಾಜಿ ಶಾಸಕರಾದ ಡಾ.ಅನ್ನದಾನಿ, ಚೌಡರೆಡ್ಡಿ ತೂಪಲ್ಲಿ, ನಿಸರ್ಗ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಸೇರಿದಂತೆ ಅನೇಕ ನಾಯಕರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
ಗಂಗಾ ಮತಸ್ತರ ಬದುಕು ಹಾಳು ಮಾಡಿದ ಡಿ.ಕೆ.ಶಿವಕುಮಾರ್!!
ತಲೆ ತಲಾಂತರದಿಂದ ಕೆರೆಕಟ್ಟೆಗಳಲ್ಲಿ ಮೀನು ಹಿಡಿದು ಜೀವನ ಮಾಡುತ್ತಿದ್ದ ಗಂಗಾ ಮತಸ್ತರ ಜೀವನವನ್ನು ಹಾಳು ಮಾಡಿದ್ದು ಇವತ್ತಿನ ಡಿಸಿಎಂ ಡಿ.ಕೆ.ಶಿವಕುಮಾರ್ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಮೊಳೆದೊಡ್ಡಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಮಾಡಿದ ವೇಳೆ ಡಿಕೆಶಿ ವಿರುದ್ಧ ಹರಿಹಾಯ್ದ ಅವರು; ನಿಮ್ಮ ಬದುಕಿನಲ್ಲಿ ಚೆಲ್ಲಾಟ ಆಡಿರುವ ವ್ಯಕ್ತಿ ಎಂದರೆ ಡಿ.ಕೆ. ಶಿವಕುಮಾರ್. ಕೆರೆಗಳಲ್ಲಿ ಮೀನುಗಳನ್ನು ಹರಾಜು ಹಾಕುವ ವ್ಯವಸ್ಥೆ ಜಾರಿಗೆ ತಂದ ವ್ಯಕ್ತಿ ಇವರೇ ಎಂದು ಅವರು ಆರೋಪ ಮಾಡಿದರು.
ತಲೆ ತಲಾಂತರದಿಂದ ಕೆರೆಗಳಲ್ಲಿ ಮೀನು ಹಿಡಿದು ಬದುಕು ಕಟ್ಟಿಕೊಂಡಿದ್ದ ಗಂಗಾ ಮತಸ್ತರ ಜೀವನವನ್ನು ಹಾಳು ಮಾಡಿದ್ದು ಇದೇ ಡಿ.ಕೆ.ಶಿವಕುಮಾರ್. ಕೆರೆಗಳನ್ನು ನಂಬಿ ಬದುಕು ಮಾಡುತ್ತಿದ್ದ ಅವರನ್ನು ಕೆರೆಗಳಿಂದ ದೂರ ಮಾಡಿದ್ದು ಇದೇ ವ್ಯಕ್ತಿ ಎಂದು ಅವರು ಕಿಡಿಕಾರಿದರು.
ಎಸ್ ಟಿ ಪ್ರವರ್ಗಕ್ಕೆ ಗಂಗಾ ಮತಸ್ಥರು
ಗಂಗಾ ಮತಸ್ಥರನ್ನು ಎಸ್ ಟಿ ಪ್ರವಾರ್ಗಕ್ಕೆ ಸೇರಿಸುವ ಭರವಸೆ ನೀಡಿದ ಕೇಂದ್ರ ಸಚಿವರು; ನಿಮ್ಮ ಬೇಡಿಕೆ ನ್ಯಾಯವಿದೆ. ಈಗಾಗಲೇ ಕಾಡುಗೊಲ್ಲ ಸಮುದಾಯವನ್ನು ಎಸ್ ಟಿ ಪ್ರವರ್ಗಕ್ಕೆ ಸೇರಿಸುವ ಪ್ರಯತ್ನವನ್ನು ದೇವೆಗೌಡರ ನಾಯಕತ್ವದಲ್ಲಿ ಮಾಡಿದ್ದೇವೆ. ಈ ಬಗ್ಗೆ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಗೋಪಿ ಪಕ್ಷ ತೊರೆದು ಜೆಡಿಎಸ್ ಸೇರಿದರು.

