ನವದೆಹಲಿ: ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿರುವ ಮತ್ತು ಬ್ಯಾಲೆಟ್ ಪೇಪರ್ ಮೂಲಕ ಮತದಾನಕ್ಕೆ ಮತ್ತೆ ಮರಳುವಂತೆ ಪ್ರತಿಪಾದಿಸುತ್ತಿರುವ ನಡುವೆಯೇ, ಇಂದಿ ಮೈತ್ರಿಕೂಟದ ಸದಸ್ಯರಾದ ಜಮ್ಮು-ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಅವರು ಇವಿಎಂ ಮೇಲೆ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಮಿತ್ರಪಕ್ಷವಾದ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷರೂ ಆಗಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಚುನಾವಣಾ ಫಲಿತಾಂಶಗಳು ಪ್ರತಿಕೂಲವಾದಾಗ ಮಾತ್ರ ಇವಿಎಂಗಳನ್ನು ಪ್ರಶ್ನಿಸುವುದು ತಪ್ಪು ಎಂದು ಹೇಳಿದ್ದಾರೆ.
“ನೀವು ಅದೇ ಇವಿಎಂಗಳನ್ನು ಬಳಸಿಕೊಂಡು ಸಂಸತ್ತಿನಲ್ಲಿ ನೂರಕ್ಕೂ ಹೆಚ್ಚು ಸದಸ್ಯರನ್ನು ಪಡೆದಾಗ ಮತ್ತು ಅದನ್ನು ನಿಮ್ಮ ಪಕ್ಷಕ್ಕೆ ಒಂದು ರೀತಿಯ ವಿಜಯವೆಂದೇ ನೀವು ಆಚರಿಸಿದಾಗ, ಮತ್ತೆ ಕೆಲವು ತಿಂಗಳ ನಂತರ ಇವಿಎಂ ವಿರುದ್ಧ ತಿರುಗಿ ಬೀಳಲು ಸಾಧ್ಯವಿಲ್ಲ. ಚುನಾವಣಾ ಫಲಿತಾಂಶಗಳು ನಾವು ಬಯಸಿದ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ಇವಿಎಂ ದೂರುವುದು ಸರಿಯಲ್ಲ, ”ಎಂದು ಅಬ್ದುಲ್ಲಾ ಹೇಳಿದ್ದಾರೆ.
“ಇವಿಎಂಗಳಲ್ಲಿ ಸಮಸ್ಯೆಗಳಿದೆ ಎಂಬುದು ನಿಮ್ಮ ನಿಲುವಾದರೆ ಅದು ನಿಮ್ಮ ಸ್ಥಿರ ನಿಲುವಾಗಿರಬೇಕು, ಗೆದ್ದಾಗ ಒಂದು, ಸೋತಾಗ ಇನ್ನೊಂದು ಎಂಬಂತಾಗಬಾರದು” ಎಂದು ಅವರು ಹೇಳಿದ್ದಾರೆ. ಪಕ್ಷಗಳು ಮತದಾನದ ವಿಧಾನವನ್ನು ನಂಬದಿದ್ದರೆ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ಅವರು ಹೇಳಿದರು.

