ಮೈಸೂರು, ಜ. 13: ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಗೆ ಮೈಸೂರಿನಲ್ಲಿ ಸಿದ್ಧತೆ ಜೋರಾಗಿದ್ದು, ಹಬ್ಬಕ್ಕೆ ಬೇಕಾದಷ್ಟು ಅಗತ್ಯ ವಸ್ತುಗಳ ಖರೀದಿ ಮತ್ತು ವ್ಯಾಪಾರ ಭರಾಟೆ ಜೋರಾಗಿಯೇ ನಡೆಯುತ್ತಿದ್ದು, ಎಲ್ಲೆಡೆ ಜನಜಂಗುಳಿ ಕಂಡು ಬರುತ್ತಿದೆ.
ದಕ್ಷಿಣಾಯನದಿಂದ ಉತ್ತರಾಯಣದ ಕಡೆಗೆ ಸೂರ್ಯನ ಚಲನೆಯನ್ನು ಸಂಕ್ರಾಂತಿಯಾಗಿ ಆಚರಣೆ ಮಾಡಲಾಗುತ್ತದೆ. ಅಲ್ಲದೇ, ಈ ಸಮಯದಲ್ಲಿ ಸೂರ್ಯದೇವ ತನ್ನ ಮಗ ಶನಿಯನ್ನು ಭೇಟಿ ಮಾಡುತ್ತಾನೆ ಎನ್ನುವ ನಂಬಿಕೆ ಇದೆ. ಮಕರ ಸಂಕ್ರಾಂತಿ ದೇಶದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದಾಗಿದ್ದು, ಈ ಹಬ್ಬವನ್ನು ವಿವಿಧೆಡೆ ಹಲವು ರೀತಿಯಲ್ಲಿ ಆಚರಿಸಲಾಗುತ್ತದೆ. ಮೈಸೂರು ಭಾಗದಲ್ಲಿ ಜನರು ಹಬ್ಬದ ದಿನದಂದು ಬೇಗನೆ ಎದ್ದು ಸ್ನಾನ ಮಾಡಿ, ಸೂರ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.
ಮನೆ ಮುಂಭಾಗ ಚಿತ್ತಾಕರ್ಷಕ ರಂಗೋಲಿ ಬಿಡಿಸಿ ಅದಕ್ಕೆ ಬಣ್ಣ ತುಂಬುತ್ತಾರೆ. ಮನೆಗಳನ್ನು ಅಲಂಕಾರ ಮಾಡಿ ಎಳ್ಳು-ಬೆಲ್ಲ ಹಂಚಲಾಗುತ್ತದೆ. ಜಾನುವಾರುಗಳಿಗೆ ಅರಿಶಿಣ ಬಳಿದು ಪೂಜೆ ಸಲ್ಲಿಸುತ್ತಾರೆ. ಅಲ್ಲದೆ, ಎತ್ತುಗಳನ್ನು ಕಿಚ್ಚು ಹಾಯಿಸಲಾಗುತ್ತದೆ.
ಜಾನುವಾರುಗಳನ್ನು ಅಲಂಕರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಕಿಚ್ಚು ಹಾಯಿಸುವುದು ಮೈಸೂರು ಭಾಗದ ಸಂಕ್ರಾಂತಿಯ ವೈಶಿಷ್ಟ್ಯದಲ್ಲೊಂದಾಗಿದೆ. ಕಿಚ್ಚು ಹಾಯಿಸಿದ ಬಳಿಕ ಮನೆಗೆ ಮರಳುವ ರಾಸುಗಳಿಗೆ ಆರತಿ ಬೆಳಗಿ ಪೂಜೆ ಮಾಡಿ ಪ್ರಸಾದ ನೀಡಲಾಗುತ್ತದೆ
ಈ ಹಬ್ಬದ ಸಂಭ್ರಮದಲ್ಲಿ ಮೈಸೂರು ನಗರದ ದೇವರಾಜ ಮಾರುಕಟ್ಟೆ, ಚಿಕ್ಕ ಗಡಿಯಾರ ವೃತ್ತ, ಶಿವರಾಂ ಪೇಟೆ, ವಾಣಿವಿಲಾಸ, ಮಂಡಿ ಮಾರ್ಕೆಟ್, ಅಗ್ರಹಾರ ವೃತ್ತ, ನಂಜುಮಳಿಗೆ ವೃತ್ತ, ಜೆಕೆ ಮೈದಾನ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿರುವ ಪ್ರಮುಖ ಮಾರುಕಟ್ಟೆ, ವೃತ್ತಗಳು ಹಾಗೂ ರಸ್ತೆ ಬದಿಯಲ್ಲಿ ಹಬ್ಬಕ್ಕೆ ಬೇಕಿರುವ ಅಗತ್ಯ ವಸ್ತುಗಳ ವ್ಯಾಪಾರ ಜೋರಾಗಿ ನಡೆಯಿತು.
ನಿನ್ನೆ ಬೆಳಗ್ಗೆಯಿಂದಲೇ ಮಾರುಕಟ್ಟೆಗೆ ತಂಡೋಪಾದಿಯಲ್ಲಿ ಬಂದ ಗ್ರಾಹಕರು ಹೂ, ಹಣ್ಣು, ಕಬ್ಬು, ಎಳ್ಳು-ಬೆಲ್ಲ-ಕೊಬ್ಬರಿ, ಹೊಸ ಬಟ್ಟೆ ಸೇರಿದಂತೆ ಇತರೆ ವಸ್ತುಗಳನ್ನು ಖರೀದಿಸಲು ಮುಗಿಬಿದ್ದರು. ಸಂಕ್ರಾಂತಿಯ ಪ್ರಮುಖ ಆಕರ್ಷಣೆ ಎಳ್ಳು ಬೆಲ್ಲ ಬೀರಲು ಬೇಕಾದ ಎಳ್ಳು-ಬೆಲ್ಲ-ಕೊಬ್ಬರಿ ಮಿಕ್ಸ್ ಮತ್ತು ಕಬ್ಬಿನ ಜಲ್ಲೆಯ ವ್ಯಾಪಾರ ಹೆಚ್ಚಿನ ಪ್ರಮಾಣದಲ್ಲಿ ನಡೆಯಿತು.
ಮೈಸೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಕಬ್ಬಿನ ಜಲ್ಲೆಗಳನ್ನು ತಂದು ನಗರದ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಮಾರಾಟ ಮಾಡಿದರು. ಇತ್ತ ದೇವರಾಜ ಮಾರುಕಟ್ಟೆಯಲ್ಲಿ ಕಬ್ಬಿನ ಜಲ್ಲೆಯ ಉದ್ದ ಮತ್ತು ದಪ್ಪದ ಅನುಗುಣವಾಗಿ ಒಂದು ಜಲ್ಲೆಯ ದಿಂಡಿಗೆ 10, 20, 30 ರೂಪಾಯಿಗೆ ಮಾರಾಟವಾಯಿತು. ಇನ್ನೂ ಅಗ್ರಹಾರ ಸೇರಿದಂತೆ ಇತರೆಡೆ ಪೂರ್ಣ ಜಲ್ಲೆಗೆ 50ರಿಂದ 60 ರೂಗೆ ಮಾರಾಟವಾದ ದೃಶ್ಯಗಳು ಕಂಡುಬಂದವು.
ಇನ್ನೂ ಎಳ್ಳು-ಬೆಲ್ಲ ಮಿಕ್ಸ್ ಇರುವ ಒಂದು ಕೆಜಿಯ ಪ್ಯಾಕೆಟ್ 160-180 ರೂಪಾಯಿ ಆಗಿದೆ. ಕೆಲವರು ಎಳ್ಳು ಬೆಲ್ಲ ಮಿಕ್ಸ್ ಪ್ಯಾಕೆಟ್ ಕೊಂಡರೆ, ಬಹುತೇಕರು ಮಿಕ್ಸ್ ಬೇಕಾದ ಎಳ್ಳು, ಬೆಲ್ಲ, ಕೊಬ್ಬರಿ, ಕಡಲೆ ಬೀಜ, ಸಕ್ಕರೆ ಅಚ್ಚು, ಕಲ್ಲು ಸಕ್ಕರೆ ಅಚ್ಚು ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಖರೀದಿಸುವ ದೃಶ್ಯ ಕಂಡುಬತು.
ಒಂದು ಕೆಜಿ ಎಳ್ಳಿಗೆ 280 ರೂ., ಕತ್ತರಿಸಿದ ಬೆಲ್ಲ ಕೆಜಿಗೆ 140 ರೂ., ಕಡಲೆ ಬೀಜ (ಬೆಳೆ) ಕೆಜಿಗೆ 200, ಹುಂಡೆ ಕಡಲೇ ಬೀಜ ಕೆಜಿಗೆ 180 ರೂ. ಕತ್ತರಿಸಿದ ಕೊಬ್ಬರಿ ಕೆಜಿಗೆ 250-280 ರೂ.ಗೆ ಮಾರಾಟವಾಯಿತು. ಬಣ್ಣ ಬಣ್ಣದ ಹಾಗೂ ವಿವಿಧ ಆಕೃತಿಯ ಕಲ್ಲು ಸಕ್ಕರೆ ಅಚ್ಚುಗಳು ಗ್ರಾಹಕರ ಗಮನ ಸೆಳೆದವು.
ಸಂಕ್ರಾಂತಿ ಹಬ್ಬದ ಹಿನ್ನೆಲೆ ನಗರದಲ್ಲಿ ಹೂವಿನ ಬೆಲೆ ಕೊಂಚ ಏರಿಕೆಯಾಗಿದೆ. ಸಾಮಾನ್ಯ ದಿನಕ್ಕಿಂತ 20ರಿಂದ 30ರೂ. ಏರಿಕೆಯಾಗಿದೆ. ಸೇವಂತಿಗೆ 80-100 ರೂ. ಮಲ್ಲಿಗೆ ಮೀಟರ್ಗೆ 150-200 ರೂ., ಕನಕಾಂಬರ 150, ಕಾಕಡ 80-100 ರೂ. ಮರಳೆ 80 ರೂ ಹಾಗೂ ಬಾಳೆ ಹಣ್ಣು ಕೆಜಿಗೆ 70-80 ರೂ.ಗೆ ಮಾರಾಟವಾಯಿತು. ತರಕಾರಿ ಮತ್ತು ಹಣ್ಣುಗಳು ಬೆಲೆಯೂ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೆಲವರು ಎಳ್ಳು ಬೆಲ್ಲದ ಜೊತೆಗೆ ಕಿತ್ತಲೆ, ಸೊಪ್ಪಿನ ಕಡಲೆಯನ್ನೂ ನೀಡುವುದರಿಂದ ಸೊಪ್ಪಿನ ಕಡಲೆಯ ಮಾರಾಟವೂ ಜೋರಾಗಿತ್ತು. ಕಿತ್ತಲೆ ಕೆಜಿಗೆ 80, ಸೌತೆಕಾಯಿ ಕೆಜಿಗೆ 40 ರೂಪಾಯಿ ಮಾರುಕಟ್ಟೆಯಲ್ಲಿ ನಿಗದಿ ಮಾಡಲಾಗಿತ್ತು. ಒಟ್ಟಾರೆ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಗೆ ಸಂಭ್ರಮಕ್ಕೆ ಮೈಸೂರು ಸಂಪೂರ್ಣ ಸಜ್ಜಾಗಿದೆ.

