ಬೆಂಗಳೂರು ಜ.17: ಬೆಂಗಳೂರಿನಲ್ಲಿ ಚಿರತೆ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದೆ. ಇಂದು ಒಂದು ಪ್ರದೇಶದಲ್ಲಿ ಕಾಣಿಸಿಕೊಂಡ ಚಿರತೆ ಮತ್ತೊಂದು ದಿನ ಇನ್ಯಾವುದೋ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಇದನ್ನು ಪತ್ತೆ ಮಾಡುವುದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಕಳೆದ ದಿನ ನೆಲಮಂಗಲದಲ್ಲಿ ಚಿರತೆ ದೃಶ್ಯ ಸೆರೆಯಾಗಿದೆ.
ಕಳೆದ ದಿನ ರಾತ್ರಿ ನೆಲಮಂಗಲದ ಮಂಜುನಾಥ್ ಎಂಬುವವರ ಜಮೀನಿನಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಸಿಸಿಟಿವಿಯಲ್ಲಿ ಚಿರತೆ ದೃಶ್ಯ ಸೆರೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಮಧ್ಯರಾತ್ರಿ ಮಂಜುನಾಥ್ ಎಂಬುವವರ ಜಮೀನಿನಲ್ಲಿ ಚಿರತೆ ಚಲನವಲನ ಕಂಡು ಬಂದಿದೆ. ಆದರೆ ಈ ಚಿರತೆಯಿಂದ ಯಾವುದೇ ಹಾನಿಯಾಗಿಲ್ಲ. ಚಿರತೆ ಕಾಣಿಸಿಕೊಂಡಾಗಿನಿಂದಲೂ ಜನ ನಿದ್ದೆಗೆಡುವಂತಾಗಿದೆ. ಮನೆಯಿಂದ ಹೊರಬರಲು ಭಯಪಡುವಂತಾಗಿದೆ.
ಇನ್ನೂ ಇತ್ತೀಚೆಗೆ ಬೆಂಗಳೂರಿನ ಬನಶಂಕರಿಯಲ್ಲಿ ಚಿರತೆ ಹಾಗೂ ಅದರ ಮರಿಗಳ ಓಟಾಟದ ದೃಶ್ಯ ಕಂಡು ಜನ ಬೆಚ್ಚಿಬಿದ್ದಿದ್ದಾರೆ. ಬನಶಂಕರಿಯ ಆರನೇ ಹಂತದ ಮೊದಲೇ ಬ್ಲಾಕ್ನ ತುರಹಳ್ಳಿ ಫಾರೆಸ್ಟ್ ಬಳಿ ತಾಯಿ ಮತ್ತು ಮರಿ ಚಿರತೆ ಪ್ರತ್ಯಕ್ಷವಾಗಿದೆ. ಇವುಗಳು ಈಗಾಗಲೇ ಹತ್ತಕ್ಕೂ ಹೆಚ್ಚು ನಾಯಿ, ಮೇಕೆ, ಕುರಿಯನ್ನು ಕೊಂದು ಹಾಕಿದೆ ಎಂದು ಸ್ಥಳಿಯರು ಆರೋಪ ಮಾಡಿದ್ದಾರೆ. ಈ ಹಿಂದೆ ಬಿಎಂಟಿಸಿ ಬಸ್ ಚಾಲಕನ ಮೇಲೆ ಚಿರತೆ ದಾಳಿ ಮಾಡಿದ ವರದಿಯಾಗಿತ್ತು. ಹೀಗಾಗಿ ಸಂಜೆ ರಾತ್ರಿಯಾದರೆ ಸಾಕು ಜನ ಹೊರಬರಲು ಭಯಪಡುತ್ತಿದ್ದಾರೆ.
ಇನ್ನೂ ಮೈಸೂರು ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಸೆರೆ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಸ್ಥಗಿತಗೊಳಿಸಿದೆ. ಕಳೆದ ಹತ್ತು ದಿನಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಚಿರತೆ ಮಾತ್ರ ಯಾರ ಕಣ್ಣಿಗೂ ಕಾಣಿಸಿಕೊಂಡಿಲ್ಲ. ಡ್ರೋನ್ ಕ್ಯಾಮೆರಾ, ಕ್ಯಾಮೆರಾ ಟ್ರ್ಯಾಪ್, ಕ್ಯಾಂಪಸ್ನಲ್ಲಿರುವ ಸಿಸಿಟಿವಿ ಕ್ಯಾಮೆರಾ ಹಾಗೂ ಕೂಂಬಿಂಗ್ ಸಮಯದಲ್ಲಿ ಚಿರತೆಯ ಯಾವುದೇ ಚಲನವಲನ ಕಂಡು ಬಂದಿಲ್ಲ. ಹೀಗಾಗಿ ಕಾರ್ಯಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಚಿರತೆ ಸೆರೆಗೆ ಕಾರ್ಯಾಚರಣೆ :
ಚಿರತೆ ಸೆರೆ ಕಾರ್ಯಾಚರಣೆಗಾಗಿ ಮೈಸೂರು ಪ್ರಾದೇಶಿಕ ವಿಭಾಗದ ಒಟ್ಟು 70 ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ಚಿರತೆ ಕಾರ್ಯ ಪಡೆ, ಆನೆ ಕಾರ್ಯ ಪಡೆ ಸಿಬ್ಬಂದಿ ಹಾಗೂ 70 ಇನ್ಫೋಸಿಸ್ ಸಿಬ್ಬಂದಿಗಳನ್ನು ಒಳಗೊಂಡ 12 ಜಂಟಿ ತಂಡಗಳನ್ನು ರಚಿಸಲಾಗಿತ್ತು. ಈ ತಂಡವು ಕೂಂಬಿಂಗ್ ಕಮ್ ಡ್ರೈವಿಂಗ್ ಆಪರೇಷನ್ ಕೈಗೊಂಡು ಚಿರತೆ ಪತ್ತೆಗೆ ಶ್ರಮಿಸಿತ್ತು. ಆದರೆ ಚಿರತೆ ಚಲನವಲನವಾಗಲಿ, ಹೆಜ್ಜೆ ಗುರುತು ಆಗಲಿ ಅಥವಾ ಯಾವುದೇ ರೀತಿಯ ಕುರುಹುಗಳು ಪತ್ತೆಯಾಗಿಲ್ಲ. ಡಿಸೆಂಬರ್ 31ರಂದು ಕಾಣಿಸಿಕೊಂಡ ಚಿರತೆ ಈವರೆಗೂ ಹಿಡಿಯಲಾಗಿಲ್ಲ. ಹೀಗಾಗಿ ಸ್ಥಳೀಯರಲ್ಲಿ ಹಾಗೂ ಉದ್ಯೋಗಿಗಳಲ್ಲಿ ಆತಂಕ ಹೆಚ್ಚಾಗಿದೆ.

