ಪ್ರಯಾಗರಾಜ್: ಪ್ರಯಾಗರಾಜ್ ನಲ್ಲಿ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸದಸ್ಯೆ ಸುಧಾ ಮೂರ್ತಿ ಅವರು ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ, ಪೂರ್ವಜರ ಹೆಸರಿನಲ್ಲಿ ತರ್ಪಣ ಬಿಟ್ಟಿದ್ದಾರೆ.
ಕುಂಭಮೇಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ಪುಣ್ಯ ಸ್ನಾನವನ್ನು ಮಾಡಿ ಅತೀವ ಸಂತಸವಾಗಿದೆ. ನಾನು ಮೂರು ದಿನಗಳ ವೃತ ಕೈಗೊಂಡಿದ್ದೇನೆ. ನಾನು ನಿನ್ನೆ ಪವಿತ್ರ ಸ್ನಾನ ಮಾಡಿದೆ, ಇಂದು ಮತ್ತೆ ಮಾಡುತ್ತೇನೆ ಮತ್ತು ನಾಳೆಯೂ ಮಾಡುತ್ತೇನೆ ಎಂದು ಹೇಳಿದ್ದಾರೆ.
ನನ್ನ ತಾಯಿಯ ಅಜ್ಜ, ಅಜ್ಜಿ ಮತ್ತು ನನ್ನ ಅಜ್ಜ ಇಲ್ಲಿಗೆ ಬರಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿಯೇ ನಾನು ಈಗ ಅವರ ಹೆಸರಿನಲ್ಲಿ ತರ್ಪಣವನ್ನು ಅರ್ಪಿಸಲು ಇಲ್ಲಿಗೆ ಬಂದಿದ್ದೇನೆ. ಇಲ್ಲಿಗೆ ಆಗಮಿಸಿ ನನಗೆ ತುಂಬಾ ಸಂತೋಷವಾಗಿದೆ ಎಂದು ಸುಧಾ ಹೇಳಿದ್ದಾರೆ.
ಈ ಮಹಾ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಯತ್ನ ಶ್ಲಾಘಿನೀಯ. ಯೋಗಿ ಜಿ ಅವರ ನೇತೃತ್ವದಲ್ಲಿ ಎಲ್ಲಾ ಜನರು ಇಲ್ಲಿ ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರಿಗೆ ದೀರ್ಘಾಯುಷ್ಯವನ್ನು ನಾನು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.
144 ವರ್ಷಗಳ ಬಳಿಕ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ವಿಶ್ವದ ಮೂಲೆ ಮೂಲೆಯಿಂದ ಯಾತ್ರಾರ್ಥಿಗಳು ಆಗಮಿಸುತ್ತಿದ್ದಾರೆ. ನಿತ್ಯ ಲಕ್ಷಾಂತರ ಮಂದಿ ಪ್ರಯಾಗ್ರಾಜ್ಗೆ ಬಂದು ಸೇರುತ್ತಿದ್ದಾರೆ. ಕುಂಭಮೇಳವು ಫೆಬ್ರವರಿ 26ರವರೆಗೆ ನಡೆಯಲಿದೆ.

