ಬೆಂಗಳೂರು : ಕಿರಿಕ್ ಲಾಯರ್ ಎಂದೇ ಫಾಮ್ಸ್ ಆಗಿರುವ ಬಿಗ್ ಬಾಸ್ ಖ್ಯಾತಿಯ ವಕೀಲ ಜಗದೀಶ್ ಅವರಿಗೆ ಕೆಲವರು ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬೆಂಗಳೂರಿನ ಕೊಡಿಗೇಹಳ್ಳಿಯ ವಿರೂಪಾಕ್ಷ ನಗರದಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಕೊಡಿಗೇಹಳ್ಳಿಯಲ್ಲಿ ದೂರು ದಾಖಲಾಗಿದೆ.
ಯುವಕರ ಗುಂಪೊಂದು ಲಾಯರ್ ಜಗದೀಶ್ ಮೇಲೆ ನಡು ರಸ್ತೆಯಲ್ಲೇ ಹಲ್ಲೆ ನಡೆಸಿದೆ. ಮಾತಿಗೆ ಮಾತು ಬೆಳೆದು ಲಾಯರ್ ಜಗದೀಶ್ ಕೂಡ ಯುವಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಇಬ್ಬರೂ ಶರ್ಟ್ ಹಿಡಿದು ಬೀದಿಯಲ್ಲೇ ಗುದ್ದಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೊಡಿಗೇಹಳ್ಳಿಯಲ್ಲಿ ಜಗದೀಶ್ ಅವರಿಗೆ ಸೇರಿದ ಕಾಂಪ್ಲೆಕ್ಸ್ ಒಂದು ಇದೆ. ಇದೇ ರಸ್ತೆಯಲ್ಲಿ ಸ್ಥಳೀಯರು ಅಣ್ಣಮ್ಮ ದೇವಿಯನ್ನು ಕೂರಿಸಲು ಪ್ಲ್ಯಾನ್ ಮಾಡಿದ್ದರು. ಇದಕ್ಕೆ ಜಗದೀಶ್ ಅವರು ಆಕ್ಷೇಪ ತೆಗೆದಿದ್ದಾರೆ. ಅಲ್ಲದೆ ಠಾಣೆಗೆ ದೂರು ನೀಡಿದ್ದಾರೆ. ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಜನರ ಜೊತೆ ಚರ್ಚಿಸಿದ್ದಾರೆ. ಪೆಂಡಾಲ್ ಹಾಕಿದ್ದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗುತ್ತದೆ ಎಂಬುದು ಜಗದೀಶ್ ಅವರ ವಾದ ಆಗಿತ್ತು. ಆದರೆ, ಪೆಂಡಾಲ್ ತೆಗೆಯಲು ಸ್ಥಳಿಯರು ಒಪ್ಪಿಲ್ಲ.
ಜಗದೀಶ್ ಅವರ ವಿರುದ್ಧ 40ಕ್ಕೂ ಅಧಿಕ ಸ್ಥಳೀಯರು ಬಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಅವರ ಮೇಲೆ ಹಲ್ಲೆಗೂ ಯತ್ನ ನಡೆದಿದೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ.

