Rahul Gandhi : ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಟೀಕಿಸಿದ್ದಕ್ಕಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ, ಪಾಕಿಸ್ಥಾನದ ಅಜೆಂಡಾವನ್ನು ವರ್ಧಿಸಿದ್ದಾರೆ ಮತ್ತು ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಆರೋಪಿಸಿದೆ.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ರಾಹುಲ್ ಗಾಂಧಿಯನ್ನು “ಆಧುನಿಕ ಯುಗದ ಮೀರ್ ಜಾಫರ್” ಎಂದು ಕರೆದಿದ್ದಾರೆ. ಅಲ್ಲದೇ ರಾಹುಲ್ ಅವರ ಹೇಳಿಕೆಗಳನ್ನು ಪಾಕಿಸ್ಥಾನಿ ಮಾಧ್ಯಮಗಳು ಆಪರೇಷನ್ ಸಿಂಧೂರ್ ಸುತ್ತ ಸುಳ್ಳು ನಿರೂಪಣೆಯನ್ನು ನಿರ್ಮಿಸಲು ಬಳಸುತ್ತಿವೆ ಎಂದು ಆರೋಪಿಸಿದ್ದಾರೆ.
ರಕ್ಷಣಾ ಸಚಿವಾಲಯವು ಈಗಾಗಲೇ ಮಾಧ್ಯಮಗಳಿಗೆ ಈ ವಿಷಯದ ಬಗ್ಗೆ ಮಾಹಿತಿ ನೀಡಿದ್ದರೂ, ಆಪರೇಷನ್ ಸಿಂಧೂರ್ನಲ್ಲಿ ಕಳೆದುಹೋದ ಭಾರತೀಯ ವಿಮಾನಗಳ ಸಂಖ್ಯೆಯನ್ನು ಪ್ರಶ್ನಿಸುವ ಔಚಿತ್ಯವೇನಿತ್ತು ಎಂದು ಮಾಳವೀಯಯವರು ಗಾಂಧಿಯವರನ್ನು ಪ್ರಶ್ನಿಸಿದ್ದಾರೆ. ಗಾಂಧಿಯವರ ಹೇಳಿಕೆಗಳನ್ನು ಬಳಸಿಕೊಂಡು ಪಾಕಿಸ್ಥಾನಿ ಸುದ್ದಿ ವಾಹಿನಿ ಪ್ರಸಾರ ಮಾಡಿದ ವಿಡಿಯೋ ಕ್ಲಿಪ್ ಅನ್ನು ಪೋಸ್ಟ್ ಮಾಡಿದ ಅವರು, “ಇದು ಹೊಸದಲ್ಲ. ಹಿಂದೆಯೂ ಸಹ, ಪಾಕಿಸ್ಥಾನಿ ಅಜೆಂಡಾಗಳು ರಾಹುಲ್ ಗಾಂಧಿಯವರ ಹೇಳಿಕೆಗಳನ್ನು ಸಂತೋಷದಿಂದ ಉಲ್ಲೇಖಿಸಿವೆ. ಅವರ ಮಾತುಗಳು ಪದೇ ಪದೇ ಗಡಿಯಾಚೆಗಿನ ಭಯೋತ್ಪಾದನೆಯನ್ನು ಪ್ರಾಯೋಜಿಸುವವರಿಗೆ ಕವರ್ ಅಪ್ ಮಾಡಲು ಅಸ್ತ್ರವಾಗಿ ಕಾರ್ಯನಿರ್ವಹಿಸುತ್ತದೆ” ಎಂದಿದ್ದಾರೆ.
ಭಾರತದ ಮಿಲಿಟರಿ ಸಾಧನೆಗಳನ್ನು ಒಪ್ಪಿಕೊಳ್ಳಲು ರಾಹುಲ್ ಗಾಂಧಿ ನಿರಾಕರಿಸಿದ್ದಾರೆ, ನಷ್ಟಗಳ ಮೇಲೆ ಕೇಂದ್ರೀಕರಿಸುತ್ತಾ ಪಾಕಿಸ್ಥಾನದ ಸುಳ್ಳುಗಳಿಗೆ ಶಕ್ತಿ ತುಂಬುತ್ತಿದ್ದಾರೆ ಎಂದು ಮಾಳವೀಯ ಆರೋಪಿಸಿದ್ದಾರೆ. “ರಾಹುಲ್ ಗಾಂಧಿ ಆಧುನಿಕ ಯುಗದ ಮೀರ್ ಜಾಫರ್. ರಾಷ್ಟ್ರೀಯ ಕರ್ತವ್ಯವನ್ನು ಬಲಿಕೊಟ್ಟು ರಾಜಕೀಯ ಮಹತ್ವಾಕಾಂಕ್ಷೆ ಇರಬೇಕೇ” ಎಂದು ಪ್ರಶ್ನಿಸಿದ್ದಾರೆ.

