ನವದೆಹಲಿ ಭಾರತಕ್ಕೆ ಸುಂಕದ ಬೆದರಿಕೆಗಳ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ತರಾಟೆಗೆ ತೆಗೆದುಕೊಂಡಿದ್ದು, ಭಾರತವು ಪ್ರಮುಖ ಜಾಗತಿಕ ಶಕ್ತಿಯಾಗುವುದನ್ನು ತಡೆಯಲು ಯಾರಿಂದಲು ಸಾಧ್ಯವಿಲ್ಲ ಎಂಬ ಸಂದೇಶ ರವಾನಿಸಿದರು.
ಭೋಪಾಲ್ನಲ್ಲಿ ಮಾತನಾಡಿದ ಸಿಂಗ್, ಅಮೆರಿಕ ಆಡಳಿತವು, ಜಾಗತಿಕ ಶಕ್ತಿಯಾಗಿ ಭಾರತದ ಉದಯವನ್ನು ಸ್ವಾಗತಿಸಲು ಇಷ್ಟಪಡುವುದಿಲ್ಲ, ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವುದು ಕೆಲವು ಜನರಿಗೆ ಇಷ್ಟವಾಗುತ್ತಿಲ್ಲ, ಭಾರತದಲ್ಲಿ ತಯಾರಿಸಿದ ಉತ್ಪನ್ನಗಳು ಇತರ ದೇಶಗಳಲ್ಲಿ ತಯಾರಿಸಿದ ಉತ್ಪನ್ನಗಳಿಗಿಂತ ಹೆಚ್ಚು ದುಬಾರಿಯಾಗುವಂತೆ ಮಾಡಲು ಹಲವರು ಪ್ರಯತ್ನಿಸುತ್ತಿದ್ದಾರೆ. ಬೆಲೆಗಳು ಏರಿಕೆಯಾಗುತ್ತಿದ್ದಂತೆ, ಬೇರೆ ದೇಶದ ಜನರು ಅವುಗಳನ್ನು ಖರೀದಿಸುವುದನ್ನು ನಿಲ್ಲಿಸುತ್ತದೆ ಎನ್ನುವುದು ಅವರ ಲೆಕ್ಕಚಾರ ಎಂದರು.
ಪ್ರಸ್ತುತ ಪರಿಸ್ಥಿತಿಯಿಂದ ರಕ್ಷಣಾ ಇಲಾಖೆಯ ರಫ್ತುಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದ ರಾಜನಾಥ್ ಸಿಂಗ್, ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ, ನಾವು ಈಗ 24 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ರಫ್ತು ಮಾಡುತ್ತಿದ್ದೇವೆ, ಇದು ಭಾರತದ ಶಕ್ತಿ, ಇದು ನವ ಭಾರತದ ಹೊಸ ರಕ್ಷಣಾ ವಲಯ ಎಂದು ಹೇಳಿದರು.
ರಷ್ಯಾದೊಂದಿಗಿನ ತನ್ನ ಇಂಧನ ಸಂಬಂಧವನ್ನು ಸಮರ್ಥಿಸಿಕೊಂಡ ರಾಜನಾಥ್ ಸಿಂಗ್, ಸರ್ಕಾರ ದೇಶದ 1.4 ಶತಕೋಟಿ ನಾಗರಿಕರ ಇಂಧನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ, ಹಲವಾರು ದೇಶಗಳು ತಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಇದೇ ರೀತಿಯ ಖರೀದಿಯಲ್ಲಿ ತೊಡಗಿವೆ, ಇದರಿಂದಾಗಿ ಅಮೆರಿಕಾ ಹೆಚ್ಚುವರಿ ಸುಂಕಗಳನ್ನು ವಿಧಿಸಲು ನಿರ್ಧಾರ ಮಾಡಿರುವುದು ಅತ್ಯಂತ ದುರದೃಷ್ಟಕರ ಎಂದರು.

