ಬೆಂಗಳೂರು: ರಾಜ್ಯ ಮಾತ್ರವಲ್ಲ ದೇಶಾದ್ಯಂತ ಭಾರೀ ಕುತೂಹಲ ಮೂಡಿಸಿದ್ದ ಧರ್ಮಸ್ಥಳ ಸಮಾಧಿ ಶೋಧ ಕಾರ್ಯ ಅಂತ್ಯವಾಗಿದೆ. ಬುರುಡೆ ಮ್ಯಾನ್ ಚಿನ್ನಯ್ಯ ಹೇಳಿದ ಕಡೆಯೆಲ್ಲ ಅಗೆದ್ರೂ ಬರೀ ಮಣ್ಣು ಸಿಕ್ಕಿತ್ತು. ಬಳಿಕ ಚಿನ್ನಯ್ಯನ ಅರೆಸ್ಟ್ ಕೂಡ ಆಗಿತ್ತು. ಇದೀಗ ಪ್ರಕರಣಕ್ಕೆ ದಿನಕ್ಕೊಂದು ತಿರುವು ಸಿಗುತ್ತಿವೆ. ‘ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ತನಿಖೆ ಮುಂದುವರೆದಿದೆ.
ಕಾಲಮಿತಿ ನಿಗದಿ ಪಡಿಸಿ, ಮಧ್ಯಂತರ ವರದಿ ಪಡೆಯುವುದು ಅಥವಾ ತನಿಖೆಯನ್ನು ಸಿಐಡಿಗೆ ವಹಿಸುವುದು ಸೇರಿದಂತೆ ಯಾವುದೇ ರೀತಿಯ ಚರ್ಚೆಯಾಗಿಲ್ಲ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಚಿನ್ನಯ್ಯ ಪತ್ನಿ ಪ್ರಾಣ ಭಯ ಇದೆ ಎಂದು ರಕ್ಷಣೆ ಕೋರಿದ್ದರೆ, ಪೊಲೀಸರು ಅಗತ್ಯ ಕ್ರಮಕೈಗೊಳ್ಳುತ್ತಾರೆ. ಪ್ರಕರಣವನ್ನು ಸಿಐಡಿಗೆ ಕೊಡುವ ಚರ್ಚೆ ನಡೆದಿಲ್ಲ, ಎಸ್ಐಟಿ ತನಿಖೆಯೇ ಮುಂದುವರೆಯುತ್ತದೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಇದೊಂದು ದೊಡ್ಡ ಪ್ರಕರಣ. ಸತ್ಯವನ್ನು ಹೊರ ತರುವ ಸಂದರ್ಭದಲ್ಲಿ ಯಾರಿಗಾದರೂ ತೊಂದರೆಗಳಿದ್ದರೆ, ಪ್ರಾಣ ಭಯ ಅಥವಾ ಇನ್ನಿತರ ಆತಂಕಗಳಿದ್ದರೆ, ಸರ್ಕಾರ ಅಗತ್ಯ ಭದ್ರತೆಯನ್ನು ಒದಗಿಸಲಿದ್ದೇವೆ ಎಂದು ಹೇಳಿದರು.
ಮಧ್ಯಂತರ ವರದಿ ಅಥವಾ ಚಾರ್ಜ್ ಶೀಟ್ ಪಡೆಯುವುದಿಲ್ಲ. ತನಿಖೆಯನ್ನು ಶೀಘ್ರವೇ ಮುಗಿಸುವಂತೆ ಹೇಳಿದ್ದೇವೆ. ಆದರೆ ಕಾಲಮಿತಿಯನ್ನು ನಿಗದಿ ಮಾಡಿಲ್ಲ. ಸದ್ಯ ಇರುವ ಪುರಾವೆ ಹಾಗೂ ಸಾಕ್ಷ್ಯಗಳನ್ನು ಆಧರಿಸಿ ಶೀಘ್ರ ವರದಿ ನೀಡುವಂತೆ ಸೂಚಿಸಿದ್ದೇವೆ ಎಂದು ಪರಮೇಶ್ವರ್ ಹೇಳಿದರು.
ಪ್ರತಿನಿತ್ಯ ನಾವು ಏನು ಮಾಡುತ್ತಿದ್ದೇವೆ ಎಂದು ಎಸ್ಐಟಿಯವರು, ಮಾಧ್ಯಮಕ್ಕಾಗಲಿ ಅಥವಾ ಸಾರ್ವಜನಿಕರಿಗಾಗಲಿ ಹೇಳುವುದಿಲ್ಲ. ಅನೇಕ ವಿಚಾರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದಿಲ್ಲ. ಇದರಿಂದ ಎಸ್ಐಟಿ ವೇಗ ಕಳೆದುಕೊಂಡು ಬಿಟ್ಟಿದೆ, ತನಿಖೆ ನಡೆಯುತ್ತಿಲ್ಲ ಅಂದುಕೊಳ್ಳಬಾರದು. ಅನೇಕ ವಿಚಾರಗಳಲ್ಲಿ ಸಂಪೂರ್ಣ ಮಾಹಿತಿ ಬರುವವರೆಗೂ ಎಸ್ಐಟಿಯವರು ನಮಗೂ ಹೇಳುವುದಿಲ್ಲ ಎಂದರು.

