ಬೆಂಗಳೂರು : ರಾಮನಗರದಲ್ಲಿರುವ ಜಾಲಿಡೇಸ್ ಸ್ಟುಡಿಯೋಸ್ ಬಂದ್ ಮಾಡಿ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ -12 ಶೂಟಿಂಗ್ ನಿಲ್ಲಿಸಿದ ಜಿಲ್ಲಾಡಳಿತದ ಕ್ರಮವನ್ನು ಪ್ರಶ್ನಿಸಿ ಕೋರ್ಟ್ಗೆ ತೆರಳಲು ಶೋ ಆಯೋಜಕರು ಮುಂದಾಗಿದ್ದಾರೆ. ಸದ್ಯ ಸ್ಟುಡಿಯೋ ಬಂದ್ ಆಗಿರುವುದರಿಂದ ಕನ್ನಡ ಬಿಗ್ ಬಾಸ್ ಶೋ ಶೂಟಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಸ್ಟುಡಿಯೋದಲ್ಲಿದ್ದ ಸ್ಪರ್ಧಿಗಳನ್ನು ಈಗಲ್ಟನ್ ರೆಸಾರ್ಟ್ಗೆ ಕಳಿಸಲಾಗಿದೆ.
ಬಿಗ್ ಬಾಸ್ ಆಯೋಜಕರ ಮುಂದಿನ ನಡೆ ಏನು ಎಂಬುದು ಈಗ ಕುತೂಹಲಕರವಾಗಿದೆ. ಅಗತ್ಯ ಪರವಾನಗಿಗಳನ್ನು ಪಡೆದುಕೊಂಡು ಜಾಲಿವುಡ್ ಸ್ಟುಡಿಯೋದಲ್ಲಿಯೇ ಶೂಟಿಂಗ್ ಮುಂದುವರೆಸಲಾಗುತ್ತದೆಯೇ ಅಥವಾ ಬೇರೆ ಕಡೆ ಶಿಫ್ಟ್ ಮಾಡಲಾಗುತ್ತದೆಯೇ ಎಂಬುದೀಗ ಪ್ರಶ್ನೆಯಾಗಿದೆ. ಸ್ಟುಡಿಯೋಗೆ ಬೀಗಮುದ್ರೆ ಹಾಕಿದ್ದರಿಂದ ಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಲಾಗಿದೆ ಎನ್ನಲಾಗಿದೆ.
ಆಯೋಜಕರು ಇಂದು ಕೋರ್ಟ್ಗೆ ಅರ್ಜಿ ಸಲ್ಲಿಸುವ ಹಾಗೂ ತುರ್ತು ಅರ್ಜಿ ವಿಚಾರಣೆ ನಡೆಸುವಂತೆ ಮನವಿ ಮಾಡುವ ಸಾಧ್ಯತೆ ಇದೆ. ಈಗಾಗಲೇ ಶೋ ಸೆಟ್, ಸ್ಪರ್ಧಾಳುಗಳ ವೆಚ್ಚ, ಖರ್ಚಿನ ವಿಚಾರದಲ್ಲಿ ಕೋಟ್ಯಾಂತರ ರೂ ವ್ಯಯಿಸಲಾಗಿದೆ ಎಂಬ ವಿಚಾರ ಇಟ್ಟುಕೊಂಡು ಕೋರ್ಟ್ಗೆ ಮನವಿ ಮಾಡುವ, ಆಗಿರುವ ತಪ್ಪನ್ನು ಸರಿಪಡಿಸಿಕೊಳ್ತೀವಿ ಅಂತ ಹೇಳುವ ಸಾಧ್ಯತೆ ಇದೆ. ನಿಯಮ ಮೀರಿದ್ದಕ್ಕಾಗಿ ದಂಡ ಕಟ್ಟುವ ಬಗ್ಗೆಯೂ ಚಿಂತನೆ ಮಾಡಬಹುದು.
ಇಂದು ಕೋರ್ಟ್ ಕಲಾಪದ ಮೊದಲರ್ಧದಲ್ಲೇ ಹಿರಿಯ ವಕೀಲರ ಮೂಲಕ ಅರ್ಜಿ ಸಲ್ಲಿಸಿ ವಾದ ಮಾಡುವ ಸಾಧ್ಯತೆ ಇದೆ. ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ವಿಚಾರ ಆಗಿರುವುದರಿಂದ ಕೋರ್ಟ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬಹುದು ಎಂದು ವರದಿಯಾಗಿದೆ.

