ನವದೆಹಲಿ: ಅಮೆರಿಕದ ದಾಳಿಯ ಬೆದರಿಕೆಯ ಹಿನ್ನೆಲೆ ಇರಾನ್ ತನ್ನ ವಾಯುಪ್ರದೇಶವನ್ನು ಹಠಾತ್ತನೆ ಮುಚ್ಚಿರುವುದರಿಂದ ಭಾರತೀಯ ವಿಮಾನಯಾನ ಸಂಸ್ಥೆಗಳ ಅಂತರರಾಷ್ಟ್ರೀಯ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಯಾವುದೇ ಸ್ಪಷ್ಟ ಕಾರಣವನ್ನು ನೀಡದೆ ಇರಾನ್ ಗುರುವಾರ ವಾಣಿಜ್ಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚುವಂತೆ ಆದೇಶಿಸಿದೆ.
ಈ ಅಧಿಸೂಚನೆಯ ನಂತರ ಏರ್ ಇಂಡಿಯಾ ಮತ್ತು ಇಂಡಿಗೋ ಸೇರಿದಂತೆ ಪ್ರಮುಖ ವಿಮಾನಯಾನ ಸಂಸ್ಥೆಗಳು ಪರ್ಯಾಯ ಮಾರ್ಗಗಳ ಮೂಲಕ ತಮ್ಮ ವಿಮಾನಗಳನ್ನು ನಡೆಸುತ್ತಿವೆ. ಮಾರ್ಗ ಬದಲಾವಣೆ ಸಾಧ್ಯವಾಗದ ಕೆಲವು ಸಂದರ್ಭಗಳಲ್ಲಿ ವಿಮಾನ ರದ್ದತಿ ಅಥವಾ ಪರ್ಯಾಯ ಮಾರ್ಗಗಳಿಂದ ಸಂಚರಿಸುವಾಗ ವಿಳಂಬ ಸಂಭವಿಸಬಹುದೆಂದು ಏರ್ ಇಂಡಿಯಾ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದೆ.
ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ತಮ್ಮ ವಿಮಾನಗಳ ಸ್ಥಿತಿಯನ್ನು ಪರಿಶೀಲಿಸುವಂತೆ ಏರ್ ಇಂಡಿಯಾ ಸಲಹೆ ನೀಡಿದ್ದು, ಪ್ರಯಾಣಿಕರು ಹಾಗೂ ಸಿಬ್ಬಂದಿಯ ಸುರಕ್ಷತೆಯೇ ಸಂಸ್ಥೆಯ ಪ್ರಥಮ ಆದ್ಯತೆ ಎಂದು ಸ್ಪಷ್ಟಪಡಿಸಿದೆ.
ಇರಾನ್ ವಾಯುಪ್ರದೇಶದ ಹಠಾತ್ ಮುಚ್ಚುವಿಕೆಯ ಪರಿಣಾಮವಾಗಿ ತನ್ನ ಕೆಲವು ಅಂತರರಾಷ್ಟ್ರೀಯ ವಿಮಾನಗಳು ಅಡ್ಡಿಪಡಿಸಲ್ಪಟ್ಟಿವೆ ಎಂದು ಇಂಡಿಗೋ ತಿಳಿಸಿದೆ. ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದು, ಸಾಧ್ಯವಾದಷ್ಟು ಉತ್ತಮ ಪರ್ಯಾಯ ಮಾರ್ಗಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ ಎಂದು ಸಂಸ್ಥೆ ಹೇಳಿದೆ.
ಸ್ಪೈಸ್ಜೆಟ್ ಕೂಡ ಇದೇ ರೀತಿಯ ಸೂಚನೆಯನ್ನು ನೀಡಿದ್ದು, ಈ ಪರಿಸ್ಥಿತಿ ತನ್ನ ನಿಯಂತ್ರಣಕ್ಕೆ ಮೀರಿದ ಕಾರಣ ಪ್ರಯಾಣಿಕರು ಕಂಪನಿಯ ವೆಬ್ಸೈಟ್ಗೆ ಭೇಟಿ ನೀಡಿ ಹೊಂದಿಕೊಳ್ಳುವ ಮರುಬುಕಿಂಗ್ ಆಯ್ಕೆಗಳು ಅಥವಾ ತಮ್ಮ ಅನುಕೂಲಕ್ಕೆ ತಕ್ಕಂತೆ ಮರುಪಾವತಿ ಪಡೆಯಬಹುದು ಎಂದು ತಿಳಿಸಿದೆ.

