ಬೆಂಗಳೂರು : ಬಾರ್ ಲೈಸೆನ್ಸ್ ಹಾಗೂ ಮೈಕ್ರೋಬ್ರೇವರಿ ಲೈಸೆನ್ಸ್ ಕೊಡಿಸುವ ಹೆಸರಲ್ಲಿ ಕೋಟಿ ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಬಕಾರಿ ಇಲಾಖೆಯ ಉಪ ಆಯುಕ್ತ ಜಗದೀಶ್ ನಾಯ್ಕ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 25 ಲಕ್ಷ ರೂ. ಲಂಚ ಹಣ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಅವರನ್ನು ಬಂಧಿಸಿದ್ದಾರೆ.
ಲಕ್ಷ್ಮೀನಾರಾಯಣ ಎಂಬುವವರು ಸಿಎಲ್-7 ಹಾಗೂ ಮೈಕ್ರೋಬ್ರೇವರಿ ಲೈಸೆನ್ಸ್ಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಲೈಸೆನ್ಸ್ ಮಂಜೂರಿಗೆ ಕೋಟಿ ಕೋಟಿ ಹಣ ಬೇಕೆಂದು ಅಬಕಾರಿ ಉಪ ಆಯುಕ್ತ ಜಗದೀಶ್ ನಾಯ್ಕ್ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಲೈಸೆನ್ಸ್ ಡೀಲ್ಗೆ ಸಂಬಂಧಿಸಿದ ಆಡಿಯೋ ದಾಖಲೆ ಸಮೇತ ಲೋಕಾಯುಕ್ತಕ್ಕೆ ಲಕ್ಷ್ಮೀನಾರಾಯಣ ದೂರು ನೀಡಿದ್ದಾರೆ.
ಲೋಕಾಯುಕ್ತಕ್ಕೆ ನೀಡಿರುವ ದೂರಿನಲ್ಲಿ ಹಾಗೂ ಆಡಿಯೋ ದಾಖಲೆಗಳಲ್ಲಿ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅವರ ಹೆಸರಿನ ಉಲ್ಲೇಖವಿದೆ ಎಂಬ ಆರೋಪಗಳು ಇದೀಗ ಭಾರೀ ರಾಜಕೀಯ ಹಾಗೂ ಆಡಳಿತಾತ್ಮಕ ಸಂಚಲನಕ್ಕೆ ಕಾರಣವಾಗಿವೆ. ಅಬಕಾರಿ ಇಲಾಖೆಯಲ್ಲಿ ಬ್ರಹ್ಮಾಂಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪಗಳು ಮತ್ತಷ್ಟು ಬಲ ಪಡೆದಿದ್ದು, ತನಿಖೆಯ ಫಲಿತಾಂಶದತ್ತ ರಾಜ್ಯದ ಗಮನ ಕೇಂದ್ರೀಕೃತವಾಗಿದೆ.
ದೂರಿನ ಅನ್ವಯ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿದ್ದು, 25 ಲಕ್ಷ ರೂ. ಲಂಚ ಹಣ ಸ್ವೀಕರಿಸುತ್ತಿದ್ದಾಗ ಅಬಕಾರಿ ಉಪ ಆಯುಕ್ತ ಜಗದೀಶ್ ನಾಯ್ಕ್ ಅವರನ್ನು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ. ಲಂಚದ ಹಣವನ್ನು ಜಪ್ತಿ ಮಾಡಲಾಗಿದ್ದು, ಭ್ರಷ್ಟಾಚಾರ ಪ್ರಕರಣದಡಿ ತನಿಖೆ ಆರಂಭಿಸಲಾಗಿದೆ.
ಈ ಪ್ರಕರಣದಲ್ಲಿ ಅಬಕಾರಿ ಉಪ ಆಯುಕ್ತ ಜಗದೀಶ್ ನಾಯ್ಕ್ ಜೊತೆಗೆ ಚೇರಿ ಅಧೀಕ್ಷಕ ಕೆ.ಎಂ. ತಮ್ಮಣ್ಣ ಹಾಗೂ ಅಬಕಾರಿ ಕಾನ್ಸ್ಟೇಬಲ್ ಲಕ್ಕಪ್ಪ ಗಣಿ ಅವರನ್ನು ಬಂಧಿತ ಆರೋಪಿಗಳೆಂದು ಲೋಕಾಯುಕ್ತ ಅಧಿಕಾರಿಗಳು ಗುರುತಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದಾಖಲೆ ಪರಿಶೀಲನೆ ಹಾಗೂ ಹೆಚ್ಚಿನ ವಿಚಾರಣೆ ಮುಂದುವರೆದಿದೆ.

