ಬೆಂಗಳೂರು: ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿಸುವ ದಿಶೆಯಲ್ಲಿ ಕರ್ನಾಟಕದಂತಹ ಸ್ವಾವಲಂಬಿ ರಾಜ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ ಆಧುನಿಕ ತಂತ್ರಜ್ಞಾನ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ, ತನ್ನ ಈ ಸಾಧನೆಯನ್ನು ಪ್ರತಿಬಿಂಬಿಸುವಂತೆ ‘ಸಿರಿಧಾನ್ಯದಿಂದ ಮೈಕ್ರೋಚಿಪ್ ವರೆಗೆ (ಮಿಲ್ಲೆಟ್ ಟು ಮೈಕ್ರೋಚಿಪ್)’ ಎಂಬ ವಿಶಿಷ್ಟ ಸ್ತಬ್ಧಚಿತ್ರವನ್ನು 2026ರ ಜನವರಿ 26ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಅಂಗವಾಗಿ ಕೆಂಪು ಕೋಟೆಯಲ್ಲಿನ ಭಾರತ ಪರ್ವದಲ್ಲಿ ಪ್ರದರ್ಶಿಸುತ್ತಿದೆ.
ಕರ್ನಾಟಕ ರಾಜ್ಯದ ಪರವಾಗಿ ಗಣರಾಜ್ಯೋತ್ಸವ ಪಥಸಂಚಲನ ಮತ್ತು ಭಾರತ ಪರ್ವದಲ್ಲಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರತಿವರ್ಷ ತನ್ನ ವೈಶಿಷ್ಟ್ಯಪೂರ್ಣ ಸ್ತಬ್ಧಚಿತ್ರಗಳ ಮೂಲಕ ದೇಶದ ಗಮನ ಸೆಳೆಯುತ್ತಿದೆ. ಈ ಬಾರಿ ಕೃಷಿ, ಶಿಕ್ಷಣ, ವಿಜ್ಞಾನ, ಉನ್ನತ ತಂತ್ರಜ್ಞಾನ ಹಾಗೂ ಮೈಕ್ರೋಚಿಪ್ ಉತ್ಪಾದನೆಯಲ್ಲಿ ರಾಜ್ಯ ಸಾಧಿಸಿರುವ ಸಮತೋಲನಯುತ ಪ್ರಗತಿಯನ್ನು ಸ್ತಬ್ಧಚಿತ್ರದಲ್ಲಿ ನಿರೂಪಿಸಲಾಗಿದೆ ಎಂದು ಇಲಾಖೆಯ ಆಯುಕ್ತರಾದ ಹೇಮಂತ್ ಎಂ. ನಿಂಬಾಳ್ಕರ್ ತಿಳಿಸಿದ್ದಾರೆ.
ಸಿರಿಧಾನ್ಯಗಳ ಉತ್ಪಾದನೆ ಹಾಗೂ ಪೌಷ್ಟಿಕ ಆಹಾರ ಬಳಕೆಯನ್ನು ಉತ್ತೇಜಿಸುವಲ್ಲಿ ಕರ್ನಾಟಕ ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬೆಂಗಳೂರು ಜಾಗತಿಕವಾಗಿ ಹೆಸರು ಮಾಡಿದೆ. ಮೈಕ್ರೋಚಿಪ್, ಎಲೆಕ್ಟ್ರಾನಿಕ್ಸ್ ಹಾಗೂ ಸೆಮಿಕಂಡಕ್ಟರ್ ವಲಯಗಳಲ್ಲಿನ ಆವಿಷ್ಕಾರಗಳು ರಾಜ್ಯವನ್ನು ಶ್ರೇಷ್ಠ ತಂತ್ರಜ್ಞಾನ ಕೇಂದ್ರವನ್ನಾಗಿ ರೂಪಿಸಿವೆ. ಇವೆಲ್ಲವೂ ಈ ಬಾರಿ ಸ್ತಬ್ಧಚಿತ್ರದಲ್ಲಿ ಸಮನ್ವಯಗೊಂಡಿವೆ.
ಸಂಶೋಧನೆ, ನವೀನತೆ ಹಾಗೂ ಕೌಶಲ್ಯಾಭಿವೃದ್ಧಿಗೆ ನೀಡಿರುವ ವಿಶೇಷ ಆದ್ಯತೆಯ ಮೂಲಕ ಯುವಶಕ್ತಿಗೆ ಉದ್ಯಮಶೀಲ ಅವಕಾಶಗಳನ್ನು ಕಲ್ಪಿಸಿ, ಭವಿಷ್ಯದ ಆರ್ಥಿಕತೆಗೆ ಭದ್ರ ಬುನಾದಿ ಹಾಕುತ್ತಿರುವ ಕರ್ನಾಟಕ, ಹೂಡಿಕೆ ಸ್ನೇಹಿ ನೀತಿಗಳ ಮೂಲಕ ಉತ್ಪಾದನಾ ವಲಯದಲ್ಲಿಯೂ ಗರಿಷ್ಠ ಬೆಳವಣಿಗೆ ಸಾಧಿಸಿದೆ. ಸ್ಟಾರ್ಟ್ಅಪ್ ಕ್ಯಾಪಿಟಲ್ ಆಫ್ ಇಂಡಿಯಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಜ್ಯದ ಈ ಸ್ತಬ್ಧಚಿತ್ರವು ಎಲ್ಲರ ಮನಸೂರೆಗೊಳ್ಳಲಿದೆ ಎಂದು ಆಯುಕ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೆಹಲಿಯ ಗಣರಾಜ್ಯೋತ್ಸವದ ಸ್ತಬ್ಧಚಿತ್ರದ ವಿಷಯ ಆಯ್ಕೆ, ವಿನ್ಯಾಸ, ರಕ್ಷಣಾ ಸಚಿವಾಲಯದ ಅನುಮೋದನೆ, ನಿರ್ಮಾಣ ಹಾಗೂ ಪ್ರದರ್ಶನದ ಎಲ್ಲ ಹಂತಗಳಲ್ಲೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೇ ಸಕ್ರಿಯ ಪಾತ್ರವಹಿಸಿದೆ. ಕಳೆದ 16 ವರ್ಷಗಳಿಂದ ನಿರಂತರವಾಗಿ ಗಣರಾಜ್ಯೋತ್ಸವ ಪಥಸಂಚಲನ ಮತ್ತು ಭಾರತ ಪರ್ವದಲ್ಲಿ (2024 ಮತ್ತು 2026) ಕರ್ನಾಟಕ ಪಾಲ್ಗೊಂಡಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.
2026ರ ಗಣರಾಜ್ಯೋತ್ಸವಕ್ಕಾಗಿ ಇಲಾಖೆ
ಕಿತ್ತೂರು ರಾಣಿ ಚೆನ್ನಮ್ಮ ಮತ್ತು ರಾಣಿ ಅಬ್ಬಕ್ಕದೇವಿ
ಕರ್ನಾಟಕ ಪುಷ್ಪ ವೈಭವ
ಹಲಗಲಿ ಬೇಡರು
ಸಿರಿಧಾನ್ಯದಿಂದ ಮೈಕ್ರೋಚಿಪ್ ವರೆಗೆ
ಎಂಬ ನಾಲ್ಕು ವಿಷಯಗಳನ್ನು ಕಳುಹಿಸಿತ್ತು. ಮೊದಲ ಸಭೆಯಲ್ಲಿಯೇ ಪರಿಣಿತರ ಸಮಿತಿಯು ‘ಸಿರಿಧಾನ್ಯದಿಂದ ಮೈಕ್ರೋಚಿಪ್ ವರೆಗೆ’ ವಿಷಯವನ್ನು ಏಕಮತದಿಂದ ಅಂತಿಮಗೊಳಿಸಿತು.
ಸ್ತಬ್ಧಚಿತ್ರದಲ್ಲಿ ಏನಿರಲಿದೆ?
ಸ್ತಬ್ಧಚಿತ್ರದ ಮುಂಭಾಗದಲ್ಲಿ ಉದಯಿಸುತ್ತಿರುವ ಸೂರ್ಯ ನಿರಂತರ ಪ್ರಗತಿಯ ಸಂಕೇತವಾಗಿ ಹೊಳೆಯಲಿದೆ. ದೊಡ್ಡ ಮಡಿಕೆಗಳಲ್ಲಿ ಸಿರಿಧಾನ್ಯಗಳ ಪ್ರದರ್ಶನ, ಬೆಳೆದ ಫಸಲನ್ನು ಹಿಡಿದಿರುವ ರೈತ ಕುಟುಂಬ ಗ್ರಾಮೀಣ ಶಕ್ತಿಯ ಜೀವಂತ ಚಿತ್ರಣವಾಗಲಿದೆ.
ಮಧ್ಯಭಾಗದಲ್ಲಿ ಅಣು ಮಾಲಿಕ್ಯೂಲ್ ಮಾದರಿ, ಕೃತಕ ಬುದ್ಧಿಮತ್ತೆಯ ರೋಬೋಟ್, ರಾಕೆಟ್, ವಿಜ್ಞಾನಿ, ಟೆಲಿಮೆಡಿಸಿನ್ ಮೂಲಕ ಮಾರ್ಗದರ್ಶನ ನೀಡುವ ವೈದ್ಯೆ ಹಾಗೂ ಡ್ರೋನ್ ಬಳಸುವ ಮಹಿಳಾ ರೈತ ವಿಜ್ಞಾನ–ಆರೋಗ್ಯ–ಆಧುನಿಕ ಕೃಷಿಯ ಸಮನ್ವಯವನ್ನು ತೋರಿಸುತ್ತವೆ.
ಕೊನೆಯಲ್ಲಿ ಮಿನುಗುವ ಮೈಕ್ರೋಚಿಪ್ ಹಾಗೂ ಅದರೊಳಗೆ ಸಾಂಕೇತಿಕವಾಗಿ ಚಿತ್ರಿಸಲಾದ ರೋಬೋಟ್ ಮುಖ, ಪರಂಪರೆಯಿಂದ ಪ್ರಗತಿಯತ್ತ ಸಾಗುತ್ತಿರುವ ಕರ್ನಾಟಕದ ಆತ್ಮನಿರ್ಭರ ಪಯಣವನ್ನು ಸಾರುತ್ತದೆ.
ತೀವ್ರ ಪೈಪೋಟಿ
ಭದ್ರತೆ ಹಾಗೂ ಅವಧಿ ಸೀಮಿತಗೊಳಿಸಿದ ಹಿನ್ನೆಲೆ, 2022ರಿಂದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ರಾಜ್ಯಗಳ ಸಂಖ್ಯೆಯನ್ನು 15ಕ್ಕೆ ಇಳಿಸಲಾಗಿದೆ. 2024ರಿಂದ ಆವರ್ತನ ಮಾದರಿಯಲ್ಲಿ ಒಂದು ವರ್ಷ ಪಥಸಂಚಲನ, ಮುಂದಿನ ವರ್ಷ ಭಾರತ ಪರ್ವದಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಇದರಿಂದ ತೀವ್ರ ಪೈಪೋಟಿ ಉಂಟಾಗಿದೆ. ಪ್ರಶಸ್ತಿ ಗಿಂತಲೂ ಪಾಲ್ಗೊಳ್ಳುವಿಕೇ ಗೌರವದ ಸಂಕೇತವಾಗಿದೆ.
ಪ್ರಶಸ್ತಿಗಳ ಸರಮಾಲೆ
2005ರಲ್ಲಿ ವೈರಾಗ್ಯಮೂರ್ತಿ ಬಾಹುಬಲಿಯ ಮಹಾಮಸ್ತಕಾಭಿಷೇಕ ಸ್ತಬ್ಧಚಿತ್ರಕ್ಕೆ ಪ್ರಥಮ ಪ್ರಶಸ್ತಿ,
2008ರಲ್ಲಿ ಹೋಯ್ಸಳ ವಾಸ್ತುಶಿಲ್ಪಕ್ಕೆ ದ್ವಿತೀಯ ಹಾಗೂ ಅತ್ಯುತ್ತಮ ನಿರೂಪಣೆ–ಫ್ಯಾಬ್ರಿಕೇಷನ್ ಪ್ರಶಸ್ತಿ,
2011ರಲ್ಲಿ ಬಿದರಿ ಕಲೆ,
2012ರಲ್ಲಿ ಭೂತಾರಾಧನೆ,
2015ರಲ್ಲಿ ಚನ್ನಪಟ್ಟಣದ ಗೊಂಬೆಗಳು,
2022ರಲ್ಲಿ ಸಾಂಪ್ರದಾಯಿಕ ಕಸೂತಿ ತೊಟ್ಟಿಲುಗೆ ದ್ವಿತೀಯ ಪ್ರಶಸ್ತಿ ಲಭಿಸಿದೆ.
ಒಂದೇ ಸ್ತಬ್ಧಚಿತ್ರಕ್ಕೆ ಮೂರು ಪ್ರಶಸ್ತಿಗಳನ್ನು ಪಡೆದ ಅಪರೂಪದ ಸಾಧನೆಯನ್ನು ಕರ್ನಾಟಕ ಸಾಧಿಸಿದೆ ಎಂದು ಆಯುಕ್ತರು ಹೆಮ್ಮೆಯಿಂದ ತಿಳಿಸಿದ್ದಾರೆ.

