ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ಅವರು 2028ರ ವಿಧಾನಸಭೆ ಚುನಾವಣೆಗೆ ಮೈಸೂರು ನಗರದ ಚಾಮರಾಜ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಈ ಹಿನ್ನೆಲೆ ಅವರು ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಈ ಕುರಿತು ಪ್ರತಾಪ್ ಸಿಂಹ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ನಿಯಂತ್ರಣ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಸಂಸದ ಯದುವೀರ್ ಒಡೆಯರ್ ಅವರೊಂದಿಗೆ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೈಸೂರು–ಕೊಡಗು ಲೋಕಸಭಾ ಸದಸ್ಯರಾದ ಮಾನ್ಯ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಭೇಟಿ ಮಾಡಿ, ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಾಹನ ಸಂಚಾರವನ್ನು ಸುಗಮಗೊಳಿಸುವ ಉದ್ದೇಶದಿಂದ ಹಲವು ಪ್ರಮುಖ ಅಭಿವೃದ್ಧಿ ಯೋಜನೆಗಳ ಕುರಿತು ಮನವಿ ಸಲ್ಲಿಸಲಾಗಿದೆ. ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಂಸದರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಚಾಮರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಶ್ರೀ ದಿನೇಶ್ ಗೌಡ, ಮುಖಂಡರಾದ ಶ್ರೀ ಗಿರೀಶ್ ಪ್ರಸಾದ್, ಶ್ರೀ ಎಸ್.ಕೆ. ದಿನೇಶ್, ಶ್ರೀ ಸೋಮಶೇಖರ್ ರಾಜು, ಶ್ರೀ ಕಿರಣ್ ಗೌಡ, ಶ್ರೀ ಪರಮೇಶ್ ಗೌಡ, ಶ್ರೀ ನಂಜಪ್ಪ, ಶ್ರೀ ಬ್ರಹ್ಮಚಾರ್, ಶ್ರೀ ರಾಜೇಶ್, ಶ್ರೀ ಅಶೋಕ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಸಲ್ಲಿಸಿದ ಪ್ರಮುಖ ಮನವಿಗಳು:
ಮೈಸೂರು ನಗರದ ಕೆ.ಜಿ.ಕೊಪ್ಪಲಿನ ರೈಲ್ವೆ ಅಂಡರ್ ಬ್ರಿಡ್ಜ್ ಕಿರಿದಾಗಿದ್ದು, ಸಾರ್ವಜನಿಕರ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ವಿಸ್ತರಿಸಿ ಸಂಚಾರ ಸುಗಮಗೊಳಿಸುವಂತೆ ಮನವಿ.
ಮೈಸೂರು–ಅಶೋಕಪುರಂ ಬಿಜಿ ವಿಭಾಗದ ಕ್ರಾಫರ್ಡ್ ಹಾಲ್ ಜಂಕ್ಷನ್ ಬಳಿ ನಿರ್ಮಾಣವಾಗುತ್ತಿರುವ ರಸ್ತೆ ಕೆಳ ಸೇತುವೆ (ಆರ್ಯುಬಿ)ಯ ಪ್ರಸ್ತಾವಿತ 5.5 ಮೀಟರ್ ರಸ್ತೆ ಅಗಲವನ್ನು ಪ್ರತಿ ದಿಕ್ಕಿನಲ್ಲಿ 7.5 ಮೀಟರ್ಗೆ ಹೆಚ್ಚಿಸಿ ತ್ವರಿತವಾಗಿ ಕಾಮಗಾರಿ ಕೈಗೊಳ್ಳುವಂತೆ ಬೇಡಿಕೆ.
ಕೆಆರ್ಎಸ್ಗೆ ಸಂಪರ್ಕಿಸುವ ಮೇಟಗಳ್ಳಿ ರಸ್ತೆಯು ಕಿರಿದಾಗಿರುವುದರಿಂದ, ರಾಯಲ್ ಇನ್ ಹೋಟೆಲ್ ಬಳಿ ಪ್ರಸ್ತಾವಿತ ರಸ್ತೆ ಕೆಳ ಸೇತುವೆ (ಆರ್ಯುಬಿ) ಕಾಮಗಾರಿಯನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ಹಾಗೂ ಹೊರ ವರ್ತುಲ ರಸ್ತೆ (ಎನ್ಎಚ್-275ಕೆ) ವ್ಯಾಪ್ತಿಯ ನಾಲ್ಕು ಆರ್ಯುಬಿಗಳ ಭಾಗವಾಗಿ ಮೈಸೂರು–ಅರಸೀಕೆರೆ ಬ್ರಾಡ್ ಗೇಜ್ ವಿಭಾಗದ ಲೆವೆಲ್ ಕ್ರಾಸಿಂಗ್ ತೆರವುಗೊಳಿಸುವಂತೆ ಮನವಿ.
ರೈಲು ಸಂಖ್ಯೆ 14805/06 ಯಶವಂತಪುರ–ಬಾರ್ಮೆರ್–ಯಶವಂತಪುರ ಸಾಪ್ತಾಹಿಕ ರೈಲನ್ನು ಮೈಸೂರಿನವರೆಗೆ ವಿಸ್ತರಿಸುವಂತೆ ಮನವಿ.
ರೈಲು ಸಂಖ್ಯೆ 16508/09 ಕೆಎಸ್ಆರ್ ಬೆಂಗಳೂರು ಸಿಟಿ ಜಂಕ್ಷನ್–ಜೋಧಪುರ ದ್ವಿ-ಸಾಪ್ತಾಹಿಕ ರೈಲನ್ನು ಮೈಸೂರಿನವರೆಗೆ ವಿಸ್ತರಿಸುವಂತೆ ಮತ್ತೊಂದು ಮನವಿ ಸಲ್ಲಿಸಲಾಗಿದೆ. ಈ ಭೇಟಿ ರಾಜಕೀಯ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.

