ಬೆಂಗಳೂರು, ಜನವರಿ 29: 2025ರ ನವೆಂಬರ್ನಲ್ಲಿ ಗೋವಾದಲ್ಲಿ ನಡೆದ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ವೇಳೆ ‘ಕಾಂತಾರ’ ಸಿನೆಮಾದ ಮಿಮಿಕ್ರಿ ಮಾಡುವ ಸಂದರ್ಭದಲ್ಲಿ ದೈವವನ್ನು ಅವಹೇಳನ ಮಾಡಿದ ಆರೋಪದ ಮೇಲೆ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಬುಧವಾರ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಚಿತ್ರವನ್ನು ಹೊಗಳುವ ಪ್ರಯತ್ನದಲ್ಲಿ ರಣವೀರ್ ಸಿಂಗ್ ಯಡವಟ್ಟು ಮಾಡಿಕೊಂಡಿದ್ದರು. ‘ಕಾಂತಾರ’ ಚಿತ್ರದ ದೈವವನ್ನು “ಹೆಣ್ಣು ದೆವ್ವ” ಎಂದು ಹೇಳಿ ಮಿಮಿಕ್ರಿ ಮಾಡಿದ ಹಿನ್ನೆಲೆಯಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದರು.
ಕಾರ್ಯಕ್ರಮದ ವೇಳೆ “ನಾನು ರಿಷಬ್ ಅವರ ‘ಕಾಂತಾರ’ ಚಿತ್ರವನ್ನು ಥಿಯೇಟರ್ನಲ್ಲಿ ನೋಡಿದ್ದೇನೆ. ಅದ್ಭುತ ನಟನೆ. ಅದರಲ್ಲೂ ಹೆಣ್ಣು ದೆವ್ವ ನಿಮ್ಮ ಮೇಲೆ ಮೈಸೇರುವ ದೃಶ್ಯ ಅತ್ಯಂತ ಚೆನ್ನಾಗಿತ್ತು” ಎಂದು ಹೇಳುತ್ತಾ ರಣವೀರ್ ಸಿಂಗ್ ಅನುಕರಣೆ ಮಾಡಿದ್ದರು. ಈ ಮಾತುಗಳು ಹಾಗೂ ಅಭಿನಯ ದೈವಾರಾಧಕರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ರಣವೀರ್ ಸಿಂಗ್ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದರು.
ಆದರೆ ದೈವವನ್ನು ಅವಹೇಳನ ಮಾಡಿದ ನಟನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿ ವಕೀಲ ಪ್ರಶಾಂತ್ ಮೆಥಲ್ ಅವರು ಡಿ.3ರಂದು ದೂರು ದಾಖಲಿಸಿದ್ದರು. ದೂರು ಆಧರಿಸಿ ಪೊಲೀಸರು ಮೊದಲು ಎನ್ಸಿಆರ್ ದಾಖಲಿಸಿಕೊಂಡಿದ್ದರು. ಇದೀಗ ನ್ಯಾಯಾಲಯದ ಸೂಚನೆಯ ಮೇರೆಗೆ ರಣವೀರ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ರಣವೀರ್ ಸಿಂಗ್ ಅವರ ಹೇಳಿಕೆಗಳು ಹಿಂದೂಗಳು ಹಾಗೂ ಕರ್ನಾಟಕದ ತುಳು ಭಾಷಿಕರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ. ಅವರ ಮಾತುಗಳಿಂದ ನೋವು ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ‘ಕಾಂತಾರ’ ಚಿತ್ರದ ರೀತಿಯಲ್ಲಿ ದೈವಗಳ ವೇಷಧರಿಸಿ ಅವಹೇಳನ ಮಾಡುವ ವಿಡಿಯೋಗಳು ಹರಿದಾಡುತ್ತಿರುವ ನಡುವೆಯೂ, ಕ್ಷಮೆ ಯಾಚಿಸಿದ್ದರೂ ನಟನ ವಿರುದ್ಧ ಎಫ್ಐಆರ್ ದಾಖಲಾಗಿರುವುದು ಚರ್ಚೆಗೆ ಕಾರಣವಾಗಿದೆ.

