ನಗರ: ಗಾಳಿಪಟ ಹಾರಿಸುವ ದಾರ ಜೀವಕ್ಕೆ ಅಪಾಯವಾಗುತ್ತಿರುವ ಮತ್ತೊಂದು ಘಟನೆ ಹೆಬ್ಬಾಳದ ಆರ್.ಟಿ. ನಗರದಲ್ಲಿ ನಡೆದಿದೆ. ಬೆಳಕಿಗೆ ಬಂದಿದೆ. ಬೆಳಗ್ಗೆ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ನಾಗಾರ್ಜುನ ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ರಸ್ತೆಯಲ್ಲಿ ಗಾಳಿಪಟದ ದಾರ ಬೈಕ್ ಸವಾರನಿಗೆ ಅಡ್ಡ ಸಿಕ್ಕಿದ್ದನ್ನು ಗಮನಿಸಿದ ನಾಗಾರ್ಜುನ, ಅದನ್ನು ಬಿಡಿಸುವ ಉದ್ದೇಶದಿಂದ ಮುಂದಾದರು. ಈ ವೇಳೆ ವೇಗವಾಗಿ ಬಂದ ಕಾರೊಂದು ಆ ದಾರವನ್ನು ಎಳೆದುಕೊಂಡು ಹೋಗಿದ್ದು, ಪರಿಣಾಮವಾಗಿ ದಾರ ನಾಗಾರ್ಜುನ ಕಾಲಿಗೆ ಬಿಗಿಯಾಗಿ ಸುತ್ತಿಕೊಂಡಿದೆ.
ಕಾರು ಹೋದ ರಭಸಕ್ಕೆ ನಾಗಾರ್ಜುನ ಅವರ ಕಾಲು ಅರ್ಧವಾಗಿ ಕಟ್ ಆಗಿದ್ದು, ಕಾಲಿನ ಮೂರು ನರಗಳು ಕಟ್ ಆಗಿರುವುದರಿಂದ ಅವರು ತೀವ್ರ ನೋವಿನಲ್ಲಿ ನರಳಾಡಿದರು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಚಿಕಿತ್ಸೆ ಮುಂದುವರಿದಿದೆ.
ವೈದ್ಯರು ಕನಿಷ್ಠ ನಾಲ್ಕು ತಿಂಗಳು ಸಂಪೂರ್ಣ ಬೆಡ್ ರೆಸ್ಟ್ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಗಾಯಗೊಂಡ ನಾಗಾರ್ಜುನ ಜಿಬಿಎ ಕಸದ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಯುವಕನಾಗಿದ್ದಾರೆ.
ಈ ಘಟನೆ ಗಾಳಿಪಟದ ದಾರದಿಂದ ಉಂಟಾಗುವ ಅಪಾಯದ ಬಗ್ಗೆ ಮತ್ತೆ ಎಚ್ಚರಿಕೆ ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗಾಳಿಪಟ ಹಾರಿಸುವಾಗ ಹೆಚ್ಚಿನ ಜಾಗ್ರತೆ ವಹಿಸಬೇಕೆಂದು ಪೊಲೀಸರು ಮತ್ತು ಸಾರ್ವಜನಿಕರು ಮನವಿ ಮಾಡಿದ್ದಾರೆ.

