ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, “ಪ್ರಧಾನಿ ಮೋದಿ ರಾಜಿಯಾಗಿದ್ದಾರೆ (Compromised)” ಎಂದು ಸ್ಫೋಟಕ ಆರೋಪ ಮಾಡಿದ್ದಾರೆ.
ಚೀನಾ ಗಡಿ ವಿವಾದ ಹಾಗೂ ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ಜೀವನಚರಿತ್ರೆಯ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.
“ಪ್ರಧಾನಿ ಮೋದಿ ರಾಜಿಯಾಗಿದ್ದಾರೆ. ಅವರನ್ನು ಯಾರು ಮತ್ತು ಹೇಗೆ ಬಳಸಿಕೊಂಡಿದ್ದಾರೆ ಎಂಬುದನ್ನು ದೇಶದ ಜನರು ಅರ್ಥಮಾಡಿಕೊಳ್ಳಬೇಕು. ಮೋದಿ ಈಗ ತೀವ್ರ ಒತ್ತಡದಲ್ಲಿದ್ದಾರೆ,” ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಕಳೆದ ನಾಲ್ಕು ತಿಂಗಳಿನಿಂದ ಸ್ಥಗಿತಗೊಂಡಿದ್ದ ವ್ಯಾಪಾರ ಒಪ್ಪಂದಕ್ಕೆ ಸೋಮವಾರ ಸಂಜೆ ಸಹಿ ಹಾಕಲಾಗಿದೆ ಎಂದು ಹೇಳಿದ ಅವರು, ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಮೋದಿಯವರ ‘ಇಮೇಜ್ ಬಬಲ್’ (ಬಿಂಬದ ಗುಳ್ಳೆ) ಶೀಘ್ರದಲ್ಲೇ ಒಡೆಯಲಿದೆ ಎಂದು ಭವಿಷ್ಯ ನುಡಿದರು.
“ಈ ವ್ಯಾಪಾರ ಒಪ್ಪಂದದ ಮೂಲಕ ನರೇಂದ್ರ ಮೋದಿ ಜನರ ಕಠಿಣ ಪರಿಶ್ರಮ ಹಾಗೂ ರಕ್ತ-ಬೆವರಿನ ಫಲವನ್ನು ಮಾರಾಟ ಮಾಡಿದ್ದಾರೆ. ನಮ್ಮ ಪ್ರಧಾನಿ ದೇಶವನ್ನು ಮಾರಿದ್ದಾರೆ,” ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.
ಮಾತನಾಡಲು ಅವಕಾಶ ನಿರಾಕರಣೆ ಆರೋಪ
ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯ ವೇಳೆ ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶ ನೀಡಲಾಗುತ್ತಿಲ್ಲ ಎಂದು ರಾಹುಲ್ ಗಾಂಧಿ ದೂರಿದರು.
“ಮೋದಿ ಗಾಬರಿಯಾಗಿದ್ದಾರೆ. ಯಾವುದೇ ಬದಲಾವಣೆ ಆಗದಿದ್ದರೂ ಸ್ಥಗಿತಗೊಂಡಿದ್ದ ಒಪ್ಪಂದಕ್ಕೆ ಹಠಾತ್ ಸಹಿ ಹಾಕಲಾಗಿದೆ. ಪ್ರಧಾನಿ ರಾಜಿಯಾಗಿದ್ದಾರೆ ಎಂಬುದು ಪ್ರಮುಖ ವಿಷಯ. ಇದನ್ನು ಭಾರತದ ಜನರು ಗಂಭೀರವಾಗಿ ಪರಿಗಣಿಸಬೇಕು,” ಎಂದು ಅವರು ಹೇಳಿದರು.
ಇನ್ನೊಂದೆಡೆ ಸಂಸತ್ತಿನಲ್ಲಿ ಚೀನಾ ಗಡಿ ವಿಚಾರವಾಗಿ ಗದ್ದಲ ಮುಂದುವರಿದಿರುವ ಹಿನ್ನೆಲೆ, ರಾಹುಲ್ ಗಾಂಧಿ ಅವರ ಈ ಹೇಳಿಕೆಗಳು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.

