ಬೆಂಗಳೂರು, ಫೆ. 5: ಬಾಂಗ್ಲಾದೇಶದ ಪ್ರಜೆಗಳು ಸೇರಿದಂತೆ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವವರನ್ನು ಪತ್ತೆಹಚ್ಚಿ ಗಡೀಪಾರು ಮಾಡುವ ಕಾರ್ಯಾಚರಣೆಯನ್ನು ಅಭಿಯಾನದ ಮಾದರಿಯಲ್ಲಿ ನಡೆಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 20 ಲಕ್ಷ ಬಾಂಗ್ಲಾದೇಶದ ಪ್ರಜೆಗಳು ಅಕ್ರಮವಾಗಿ ನೆಲೆಸಿದ್ದಾರೆ ಎಂಬ ಹೈಕೋರ್ಟ್ ಟೀಕೆಗೆ ಪ್ರತಿಕ್ರಿಯಿಸಿ, ಕೇಂದ್ರ ವಿದೇಶಾಂಗ ಸಚಿವಾಲಯದ ಅಧೀನದಲ್ಲಿರುವ ಎಫ್ಆರ್ಆರ್ಒ (FRRO) ಕಚೇರಿ ಬೆಂಗಳೂರಿನಲ್ಲಿದ್ದು, ಅವರ ದಾಖಲೆಗಳಲ್ಲಿ 20 ಲಕ್ಷ ಅಕ್ರಮ ವಾಸಿಗಳ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು. ನೋಂದಣಿಯ ಹೊರಗೆ ಉಳಿದವರಿದ್ದರೆ, ಅವರನ್ನು ಪತ್ತೆಹಚ್ಚಿ ಗಡೀಪಾರು ಮಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ 390 ಅಕ್ರಮ ವಿದೇಶಿ ಪ್ರಜೆಗಳನ್ನು ಗಡೀಪಾರು ಮಾಡಲಾಗಿದೆ ಎಂದರು.
ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡದ ಸಚಿವರು ಮತ್ತು ಶಾಸಕರ ಸಭೆ ನಡೆಸಲಾಗಿದೆ. ಎಸ್ಇಪಿ–ಟಿಎಸ್ಪಿ ಯೋಜನೆಯಡಿ ಕಳೆದ ಬಜೆಟ್ನಲ್ಲಿ 42 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದರೂ, ಅನುದಾನವು ವಿವಿಧ ಇಲಾಖೆಗಳ ನಡುವೆ ಹಂಚಿಕೆಯಾಗಿದ್ದು, ಯಾವ ಇಲಾಖೆಯಲ್ಲಿ ಎಷ್ಟು ಖರ್ಚಾಗಿದೆ ಎಂಬ ನಿಖರ ಮಾಹಿತಿ ಸಿಗುತ್ತಿಲ್ಲ. ಫಲಾನುಭವಿಗಳಿಗೆ ಸೌಲಭ್ಯ ತಲುಪುತ್ತಿಲ್ಲ ಎಂಬ ವಿಷಯ ಸಭೆಯಲ್ಲಿ ಚರ್ಚೆಯಾಯಿತು ಎಂದು ಹೇಳಿದರು.
ಈ ಹಿಂದೆ ಎಸ್ಇಪಿ–ಟಿಎಸ್ಪಿ ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆಗೆ ನೀಡಲಾಗುತ್ತಿತ್ತು. ಅಲ್ಲಿಂದ ಗಂಗಾ ಕಲ್ಯಾಣ, ಸ್ವಯಂ ಉದ್ಯೋಗ, ವಾಹನ ಖರೀದಿ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿತ್ತು. ಆಗ ಫಲಾನುಭವಿಗಳಿಗೆ ನೇರವಾಗಿ ಸೌಲಭ್ಯ ಸಿಗುತ್ತಿತ್ತು. ಮತ್ತೆ ಅದೇ ವ್ಯವಸ್ಥೆ ಜಾರಿಯಾಗಬೇಕು ಎಂಬುದು ಎಲ್ಲಾ ಜನಪ್ರತಿನಿಧಿಗಳ ಅಭಿಪ್ರಾಯವಾಗಿದ್ದು, ಈ ಕುರಿತು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲು ತೀರ್ಮಾನಿಸಲಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಎಸ್ಇಪಿ–ಟಿಎಸ್ಪಿ ಹಣ ಬಳಕೆಯಾಗುವುದನ್ನು ತಪ್ಪಿಸಲು ಇದು ಸೂಕ್ತ ಮಾರ್ಗ ಎಂದು ಹೇಳಿದರು.
ನಮ್ಮ ಮೆಟ್ರೋ ಸಂಸ್ಥೆ ಸ್ವಾಯತ್ತವಾಗಿದ್ದು, ಅದರಲ್ಲಿ ಕೇಂದ್ರ ಸರ್ಕಾರದ ಪಾಲೂ ಇದೆ. ಮೆಟ್ರೋ ರೈಲು ನಿಗಮದ ಸಿಎಂಡಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಪ್ರಯಾಣ ದರ ಪರಿಷ್ಕರಣೆ ಮಾಡಿರಬಹುದು ಎಂದು ಅಭಿಪ್ರಾಯಪಟ್ಟರು. ರಾಜ್ಯ ಸರ್ಕಾರ ದಿವಾಳಿಯಾಗಿದೆ, ಹೊಸ ಯೋಜನೆಗಳಿಲ್ಲ ಎಂದು ಬಜೆಟ್ಗೂ ಮುನ್ನವೇ ಲೇವಡಿ ಮಾಡುವವರು ಬೇಜಾವಾಬ್ದಾರಿ ಜನರು ಎಂದು ತರಾಟೆಗೆ ತೆಗೆದುಕೊಂಡರು.
2024–25ನೇ ಸಾಲಿಗೆ 3.97 ಲಕ್ಷ ಕೋಟಿ ರೂ. ಹಾಗೂ 2025–26ನೇ ಸಾಲಿಗೆ 4.9 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಲಾಗಿದೆ. ಪ್ರತಿ ವರ್ಷದ ಬಜೆಟ್ನಲ್ಲಿ ಸರಾಸರಿ ಶೇ.15ರಷ್ಟು ಏರಿಕೆ ಸಾಮಾನ್ಯವಾಗಿದ್ದು, ಇದು ಕೇಂದ್ರ ಹಾಗೂ ರಾಜ್ಯ ಬಜೆಟ್ಗಳಲ್ಲೂ ಸಹಜ ಎಂದರು.
ಸಚಿವ ಆರ್.ಬಿ. ತಿಮಾಪುರ ವಿರುದ್ಧದ ಆರೋಪಗಳಿಗೆ ವಿರೋಧ ಪಕ್ಷಗಳು ಸೂಕ್ತ ಸಾಕ್ಷ್ಯ ನೀಡಲು ವಿಫಲವಾಗಿವೆ. ಯಾರೋ ಮಾತನಾಡಿರುವ ಆಡಿಯೋವನ್ನು ಸಿಡಿಯಲ್ಲಿ ತಂದು ಆರೋಪಿಸಿದರೆ ಒಪ್ಪಲಾಗುವುದಿಲ್ಲ. ನೇರವಾಗಿ ಹಣ ಪಡೆದಿರುವುದು ಅಥವಾ ಕಚೇರಿಯಲ್ಲಿ ಲಂಚದ ಮಾತುಕತೆ ನಡೆದಿದ್ದರೆ ಸಾಬೀತುಪಡಿಸಬೇಕು. ಹಾಗಿದ್ದರೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ತಿಮಾಪುರ ಹೇಳಿದ್ದಾರೆ. ಪ್ರತಿದಿನ ಒಬ್ಬೊಬ್ಬ ಸಚಿವರ ವಿರುದ್ಧ ಸಿಡಿ ತರುವುದು ಸರಿಯಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಕಚೇರಿಗಳ ನಿರ್ಮಾಣಕ್ಕಾಗಿ ನಿವೇಶನ ಹಂಚಿಕೆ ಮಾಡುವುದು ಸರ್ಕಾರದ ತೀರ್ಮಾನ. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಪಕ್ಷದ ಕಚೇರಿಗಳಿಗೆ ನಿವೇಶನ ನೀಡಲಾಗಿತ್ತು. ಇದು ವೈಯಕ್ತಿಕ ನಿರ್ಧಾರವಲ್ಲ, ಸರ್ಕಾರದ ನೀತಿ ನಿರ್ಧಾರ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಪೂರ್ವಭಾವಿ ಸಭೆ ಆರಂಭಿಸಿದ್ದು, ಮೊದಲಿಗೆ ಗೃಹ ಇಲಾಖೆಯ ಬೇಡಿಕೆಗಳ ಕುರಿತು ಚರ್ಚೆ ನಡೆಯುತ್ತಿದೆ. ಹೊಸ ನೇಮಕಾತಿ ಹಾಗೂ ಪೊಲೀಸ್ ಠಾಣೆಗಳ ಮಂಜೂರು ನಮ್ಮ ಪ್ರಮುಖ ಬೇಡಿಕೆಗಳಾಗಿವೆ ಎಂದರು.
ವಿಬಿಜಿ ರಾಮ್ಜಿ ಯೋಜನೆ ವಿರೋಧಿಸಿ ವಿಧಾನಮಂಡಲದಲ್ಲಿ ಕೈಗೊಂಡಿರುವ ನಿರ್ಣಯ ಸಂವಿಧಾನಬಾಹಿರವಲ್ಲ. ಚುನಾಯಿತ ಸರ್ಕಾರ ಬಹುಮತದಿಂದ ಅಂಗೀಕರಿಸಿದ ನಿರ್ಣಯ ಅಕ್ರಮವಾಗುವುದು ಹೇಗೆ? ಎಂದು ಅವರು ಪ್ರಶ್ನಿಸಿದರು.

