ನವದೆಹಲಿ, ಫೆ.11: ರಾಷ್ಟ್ರಗೀತೆ ‘ಜನಗಣಮನ’ದಂತೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯನ್ನು ಹಾಡುವುದನ್ನೂ ಕಡ್ಡಾಯಗೊಳಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ರಾಷ್ಟ್ರಗೀತೆಗೂ ಮುನ್ನ ‘ವಂದೇ ಮಾತರಂ’ನ ಆರು ಚರಣಗಳನ್ನು ಹಾಡಬೇಕು ಎಂದು ನಿರ್ದೇಶನದಲ್ಲಿ ತಿಳಿಸಲಾಗಿದೆ. ಗೀತೆ ನುಡಿಸಿದಾಗ ಅಥವಾ ಹಾಡಿದಾಗ ಎಲ್ಲರೂ ಕಡ್ಡಾಯವಾಗಿ ಎದ್ದು ನಿಲ್ಲಬೇಕು ಎಂದು ಸೂಚಿಸಲಾಗಿದೆ.
ಕೇಂದ್ರ ಗೃಹ ಸಚಿವಾಲಯದ ಆದೇಶದ ಪ್ರಕಾರ, ಸುಮಾರು 3.10 ನಿಮಿಷಗಳ ಅವಧಿಯ ಆರು ಚರಣಗಳ ‘ವಂದೇ ಮಾತರಂ’ ಗೀತೆಯನ್ನು ನುಡಿಸಬೇಕು ಅಥವಾ ಹಾಡಬೇಕು. ತ್ರಿವರ್ಣ ಧ್ವಜ ಹಾರಿಸುವ ಸಂದರ್ಭದಲ್ಲಿ, ಸರ್ಕಾರಿ ಕಾರ್ಯಕ್ರಮಗಳಿಗೆ ರಾಷ್ಟ್ರಪತಿಗಳ ಆಗಮನದ ವೇಳೆ, ಅವರ ಭಾಷಣಗಳ ಮೊದಲು ಮತ್ತು ನಂತರ, ರಾಷ್ಟ್ರವನ್ನುದ್ದೇಶಿಸಿ ಮಾಡುವ ಭಾಷಣಗಳ ಸಂದರ್ಭದಲ್ಲೂ ಇದನ್ನು ಒಳಗೊಂಡಿದೆ. ಇದೇ ರೀತಿ ರಾಜ್ಯಪಾಲರು ಅಥವಾ ಲೆಫ್ಟಿನೆಂಟ್ ಗವರ್ನರ್ ಅವರ ಆಗಮನ ಮತ್ತು ಭಾಷಣಗಳ ಮೊದಲು ಹಾಗೂ ನಂತರವೂ ಗೀತೆ ಹಾಡಬೇಕು ಎಂದು ಸೂಚಿಸಲಾಗಿದೆ. ಆದರೆ ಯಾವುದೇ ಸಾಕ್ಷ್ಯಚಿತ್ರಗಳ ಪ್ರದರ್ಶನದ ಮಧ್ಯೆ ಗೀತೆ ನುಡಿಸಿದರೆ ಎದ್ದು ನಿಲ್ಲುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಈ ನಿರ್ದೇಶನವನ್ನು ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ವಿವಿಧ ಸಚಿವಾಲಯಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳಿಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಕಳುಹಿಸಲಾಗಿದೆ. ಇದುವರೆಗೆ ‘ವಂದೇ ಮಾತರಂ’ ಗೀತೆಗೆ ಯಾವುದೇ ಅಧಿಕೃತ ಶಿಷ್ಟಾಚಾರ ಇರಲಿಲ್ಲ. ಆದರೆ ‘ಜನಗಣಮನ’ಗೆ ರಾಗ, ಅವಧಿ ಮತ್ತು ಗಾಯನ ವಿಧಾನ ಕುರಿತು ಸ್ಪಷ್ಟ ನಿಯಮಗಳು ಜಾರಿಯಲ್ಲಿದ್ದವು. ಈಗ ಆರು ಚರಣಗಳ ಪೂರ್ಣಾವೃತ್ತಿಯನ್ನು ಅಧಿಕೃತ ಕಾರ್ಯಕ್ರಮಗಳಲ್ಲಿ ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ.
ನಾಗರಿಕ ಪುರಸ್ಕಾರ ಸಮಾರಂಭಗಳು, ಸರ್ಕಾರ ಆಯೋಜಿಸುವ ರಾಜ್ಯ ಮಟ್ಟದ ಕಾರ್ಯಕ್ರಮಗಳು, ರಾಷ್ಟ್ರಪತಿಗಳ ಆಗಮನ ಮತ್ತು ನಿರ್ಗಮನ, ಅಖಿಲ ಭಾರತ ರೇಡಿಯೋ ಹಾಗೂ ದೂರದರ್ಶನದಲ್ಲಿ ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿಗಳ ಭಾಷಣಗಳ ಮೊದಲು ಮತ್ತು ನಂತರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಜ್ಯಪಾಲರು-ಲೆಫ್ಟಿನೆಂಟ್ ಗವರ್ನರ್ ಅವರ ಔಪಚಾರಿಕ ಕಾರ್ಯಕ್ರಮಗಳ ಸಂದರ್ಭದಲ್ಲೂ ಈ ನಿಯಮ ಅನ್ವಯಿಸುತ್ತದೆ. ಭಾರತ ಸರ್ಕಾರ ವಿಶೇಷ ಆದೇಶ ಹೊರಡಿಸುವ ಇತರ ಸಂದರ್ಭಗಳಲ್ಲಿಯೂ ಇದು ಜಾರಿಗೆ ಬರಲಿದೆ.
ರಾಷ್ಟ್ರಗೀತೆ ನುಡಿಸಲಾಗುವುದನ್ನು ಸೂಚಿಸಲು ಅದರ ಮೊದಲು ಡ್ರಮ್ ರೋಲ್ ಇರಲಿದೆ. ಈ ರೋಲ್ ನಿಧಾನಗತಿಯಲ್ಲಿ ಆರಂಭವಾಗಿ, ಗರಿಷ್ಠ ಧ್ವನಿ ಮಟ್ಟ ತಲುಪಿ, ಬಳಿಕ ಕ್ರಮೇಣ ಕಡಿಮೆ ಪಿಚ್ಗೆ ಮರಳುತ್ತದೆ. ಏಳನೇ ಬೀಟ್ವರೆಗೆ ಅದು ಕೇಳಿಸಿಕೊಂಡು, ನಂತರ ಒಂದು ಬೀಟ್ ವಿರಾಮದ ಬಳಿಕ ರಾಷ್ಟ್ರಗೀತೆ ಪ್ರಾರಂಭವಾಗಲಿದೆ.
ಇನ್ನು ಮುಂದೆ ಎಲ್ಲಾ ಶಾಲೆಗಳು ತಮ್ಮ ದಿನವನ್ನು ಸಾಮೂಹಿಕವಾಗಿ ರಾಷ್ಟ್ರಗೀತೆ ಹಾಡುವುದರೊಂದಿಗೆ ಪ್ರಾರಂಭಿಸುವಂತೆ ಸೂಚಿಸಲಾಗಿದೆ. ಅದರೊಂದಿಗೆ ‘ವಂದೇ ಮಾತರಂ’ ಕೂಡ ಹಾಡಬಹುದಾಗಿದೆ. ಈ ವರ್ಷ ‘ವಂದೇ ಮಾತರಂ’ ಗೀತೆಯ 150ನೇ ವಾರ್ಷಿಕೋತ್ಸವ ಆಚರಣೆ ನಡೆಯುತ್ತಿರುವ ಹಿನ್ನೆಲೆ ಈ ನಿರ್ಧಾರ ಮಹತ್ವ ಪಡೆದುಕೊಂಡಿದೆ.
ಐತಿಹಾಸಿಕ ಹಿನ್ನೆಲೆ
ಬಂಕಿಮ್ ಚಂದ್ರ ಚಟರ್ಜಿ ಅವರು 1870ರ ದಶಕದಲ್ಲಿ ‘ವಂದೇ ಮಾತರಂ’ ಎಂಬ ದೇಶಭಕ್ತಿ ಗೀತೆಯನ್ನು ರಚಿಸಿದರು. ವರದಿಗಳ ಪ್ರಕಾರ, ಬ್ರಿಟಿಷ್ ಆಡಳಿತದಲ್ಲಿ ಪ್ರತಿ ಸಮಾರಂಭದಲ್ಲಿ ‘ಸೇವ್ ದಿ ಕ್ವೀನ್’ ಹಾಡನ್ನು ಕಡ್ಡಾಯಗೊಳಿಸಲಾಗುತ್ತಿತ್ತು. ಇದರಿಂದ ಅಸಮಾಧಾನಗೊಂಡ ಬಂಕಿಮ್ ಚಂದ್ರರು ‘ವಂದೇ ಮಾತರಂ’ ರಚನೆಗೆ ಮುಂದಾದರು.
ಭಾರತ ಭೂಮಿಯನ್ನು ತಾಯಿಯಾಗಿ ಕೊಂಡಾಡುವ ಈ ಗೀತೆಯನ್ನು ನಂತರ 1882ರಲ್ಲಿ ಪ್ರಕಟವಾದ ಅವರ ‘ಆನಂದಮಠ’ ಕಾದಂಬರಿಯಲ್ಲಿ ಸೇರಿಸಲಾಯಿತು. ಈ ಕೃತಿ ದೇಶದಲ್ಲಿ ರಾಷ್ಟ್ರೀಯ ಚೇತನೆಯನ್ನು ಜಾಗೃತಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿತು.
1896ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ‘ವಂದೇ ಮಾತರಂ’ ಮೊದಲ ಬಾರಿಗೆ ಸಾರ್ವಜನಿಕವಾಗಿ ಹಾಡಲಾಯಿತು. ಬಳಿಕ ಅದು ಸ್ವಾತಂತ್ರ್ಯ ಹೋರಾಟದ ಪ್ರಮುಖ ಘೋಷಣೆಯಾಗಿ ರೂಪುಗೊಂಡು, ಕ್ರಾಂತಿಕಾರಿಗಳ ಮನಗಳಲ್ಲಿ ದೇಶಭಕ್ತಿಯ ಸಂಕೇತವಾಗಿ ಅಚ್ಚೊತ್ತಿತು. ದೇಶಾದ್ಯಂತ ಮಹಿಳೆಯರು, ಯುವಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಈ ಘೋಷಣೆಯನ್ನು ತಮ್ಮ ಹೋರಾಟದ ನಿನಾದವನ್ನಾಗಿ ಮಾಡಿಕೊಂಡರು.

