ಬಾರಿಪಡಾ (ಒಡಿಶಾ), ಫೆ.18: ಅಪರೂಪದ ಧೈರ್ಯ ಪ್ರದರ್ಶನದಲ್ಲಿ 41 ವರ್ಷದ ಆದಿವಾಸಿ ಮಹಿಳೆ ಒಡಿಶಾದ ಮಯೂರಭಂಜ್ ಜಿಲ್ಲೆಯ ದಟ್ಟ ಕಾಡಿನಲ್ಲಿ ಕಾಡು ಕರಡಿಯೊಂದಿಗೆ ಹೋರಾಡಿ ತನ್ನ ಪತಿಯ ಜೀವ ಉಳಿಸಿದ ಘಟನೆ ಮಂಗಳವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಟಿಸಲಬೇಡಾ ಕಾಡಿನಲ್ಲಿ, ಕರಂಜಿಯಾ ರೇಂಜ್ ವ್ಯಾಪ್ತಿಯ ಮಿಲು ಗ್ರಾಮದ ಸಮೀಪ ಈ ಘಟನೆ ಸಂಭವಿಸಿದೆ. ಮಲ್ಡೆ ಸೊರೆನ್ (48) ಮತ್ತು ಲಿಲಿ ಸೊರೆನ್ (41) ಎಂಬ ದಂಪತಿ ಎಲೆ ಸಂಗ್ರಹಿಸಲು ಕಾಡಿಗೆ ತೆರಳಿದ್ದ ವೇಳೆ ದುರಂತ ಸಂಭವಿಸಿದೆ.
ದಟ್ಟ ಕಾಡಿನೊಳಗೆ ಪ್ರವೇಶಿಸಿದ ವೇಳೆ ಆರು ಕಾಡು ಕರಡಿಗಳ ಗುಂಪು ಎದುರಾಗಿದೆ. ಅವುಗಳಲ್ಲಿ ಒಂದು ಕರಡಿ ಮಲ್ಡೆ ಸೊರೆನ್ ಮೇಲೆ ದಾಳಿ ನಡೆಸಿ ಭೀಕರವಾಗಿ ಕಚ್ಚಿ ಗಾಯಗೊಳಿಸಿದೆ. ತಲೆಯ ಭಾಗದಲ್ಲಿ ಆಳವಾದ ಗಾಯಗಳೂ ಸೇರಿದಂತೆ ಗಂಭೀರ ಗಾಯಗಳಾಗಿವೆ ಎಂದು ಕರಂಜಿಯಾ ರೇಂಜ್ ಅಧಿಕಾರಿ ಪ್ರಶಾಂತ್ ಕುಮಾರ್ ಸ್ವೈನ್ ತಿಳಿಸಿದ್ದಾರೆ.
ಘಟನೆಯ ಸಂದರ್ಭದಲ್ಲಿ ಓಡಿಹೋಗದೆ ಧೈರ್ಯದಿಂದ ನಡೆದುಕೊಂಡ ಲಿಲಿ ಸೊರೆನ್, ಕೈಯಲ್ಲಿದ್ದ ಕೊಡಲಿಯನ್ನು ಹಿಡಿದು ಕರಡಿಯ ಮೇಲೆ ಪ್ರಹಾರ ನಡೆಸಿದರು. ಕೊಡಲಿ ಹೊಡೆತದಿಂದ ಗಾಯಗೊಂಡ ಕರಡಿ ಕಾಡಿನೊಳಗೆ ಓಡಿಹೋಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಂಭೀರವಾಗಿ ಗಾಯಗೊಂಡ ಮಲ್ಡೆ ಅವರನ್ನು ಮೊದಲು ಕರಂಜಿಯಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಉತ್ತಮ ಚಿಕಿತ್ಸೆಗೆ ಕೇಯೊಂಜಾರ್ ಜಿಲ್ಲಾ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಮಹಿಳೆಯ ಸಾಹಸ ಮತ್ತು ಧೈರ್ಯವನ್ನು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

