ಕಲಬುರಗಿ: ಜಿಲ್ಲೆಯ ಚಿತ್ತಾಪೂರ ಪಟ್ಟಣದಲ್ಲಿರುವ ರಾಷ್ಟ್ರಕೂಟರ ಕುಲದೇವತೆ ಎಂದು ಖ್ಯಾತಿ ಪಡೆದಿರುವ ನಾಗಾವಿ ಯಲ್ಲಮ್ಮ ದೇವಾಲಯದ ಹುಂಡಿಯಲ್ಲಿ ಎಂಟು ತಿಂಗಳಲ್ಲಿ ಒಟ್ಟು 14,73,160 ರೂ. ಹಣ ಸಂಗ್ರಹವಾಗಿದೆ.
ದೇವಾಲಯದ ಆವರಣದಲ್ಲಿ ಸ್ವಯಂಸೇವಕರು ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಗಳ ಸಮ್ಮುಖದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು. ಎಣಿಕೆ ವೇಳೆ ಮಲೇಷ್ಯಾ ದೇಶದ 18 ನೋಟುಗಳು ಮತ್ತು 2 ನಾಣ್ಯಗಳು ಪತ್ತೆಯಾಗಿದ್ದು ವಿಶೇಷವಾಗಿತ್ತು.
ಭಕ್ತರ ಕಾಣಿಕೆ ರೂಪದಲ್ಲಿ ಸಂಗ್ರಹವಾದ ಈ ಮೊತ್ತ ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ತಹಶೀಲ್ದಾರ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.
ಚಿತ್ತಾಪೂರದ ನಾಗಾವಿ ಯಲ್ಲಮ್ಮ ದೇವಾಲಯಕ್ಕೆ ದೂರದೂರಿನಿಂದ ಭಕ್ತರು ಆಗಮಿಸಿ ಹರಕೆ ತೀರಿಸುವುದು ಸಾಮಾನ್ಯವಾಗಿದ್ದು, ಇತ್ತೀಚಿನ ಅವಧಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಿದ ಪರಿಣಾಮವಾಗಿ ಹೆಚ್ಚಿನ ಕಾಣಿಕೆ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

