ಶಿಮ್ಲಾ, ಫೆಬ್ರವರಿ 26: ದೆಹಲಿಯಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ ಮೂವರು ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ ಪ್ರಕರಣವು ಭಾರೀ ನಾಟಕೀಯ ತಿರುವು ಪಡೆದುಕೊಂಡಿದೆ. ಆರೋಪಿಗಳನ್ನು ಬಂಧಿಸಲು ಶಿಮ್ಲಾಗೆ ತೆರಳಿದ್ದ Delhi Police ತಂಡವನ್ನೇ Himachal Pradesh Police ವಶಕ್ಕೆ ಪಡೆದ ಘಟನೆ ಚರ್ಚೆಗೆ ಗ್ರಾಸವಾಗಿದೆ.
ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಏಕಾಂಶ್ ಕಪಿಲ್ ನೀಡಿದ ಟ್ರಾನ್ಸಿಟ್ ರಿಮಾಂಡ್ ಆಧಾರದ ಮೇಲೆ ದೆಹಲಿ ಪೊಲೀಸ್ ತಂಡ ಮೂವರು ಆರೋಪಿಗಳಾದ ಸೌರವ್, ಅರ್ಬಾಜ್ ಮತ್ತು ಸಿದ್ಧಾರ್ಥ್ ಅವರನ್ನು ಕರೆದೊಯ್ಯುತ್ತಿತ್ತು. ಈ ವೇಳೆ ಶಿಮ್ಲಾ ಪೊಲೀಸರು ತಡೆಹಿಡಿದು, ಆರೋಪಿಗಳನ್ನು ಬಲವಂತವಾಗಿ ಕರೆದೊಯ್ಯಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಜೊತೆಗೆ, ಆರೋಪಿಗಳು ತಂಗಿದ್ದ ರೆಸಾರ್ಟ್ನ ಸಿಸಿಟಿವಿ ಡಿವಿಆರ್ಗಳನ್ನು ಯಾವುದೇ ಅನುಮತಿ ಇಲ್ಲದೇ ತೆಗೆದುಕೊಂಡಿದ್ದಾರೆ ಎಂಬ ಆರೋಪವನ್ನೂ ಮಾಡಿದರು.
ಘಟನೆಯ ಹಿನ್ನೆಲೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿ, ದೆಹಲಿ ಪೊಲೀಸರ ವಾಹನಗಳನ್ನೂ ವಶಕ್ಕೆ ಪಡೆಯಲಾಯಿತು. ಇದರಿಂದ ಎರಡು ರಾಜ್ಯಗಳ ಖಾಕಿ ಪಡೆಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ, ಕೆಲಕಾಲ ಘರ್ಷಣೆ ಏರ್ಪಟ್ಟಿತು. ಬಳಿಕ ಮೂವರು ಆರೋಪಿಗಳನ್ನು ಕರೆದೊಯ್ಯಲು ಅವಕಾಶ ನೀಡಿದ ನಂತರ 24 ಗಂಟೆಗಳ ಬಳಿಕ ಪರಿಸ್ಥಿತಿ ಶಮನವಾಯಿತು.
ಬಂಧಿತ ಮೂವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ನಂತರ ಶಿಮ್ಲಾ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಈ ಸಂದರ್ಭದಲ್ಲಿ ದೆಹಲಿ ಪೊಲೀಸರು ಸಹ ಹಾಜರಿದ್ದರು.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆ ಪೊಲೀಸರು ಹಲವರನ್ನು ಬಂಧಿಸಿದ್ದರು. ಇನ್ನುಳಿದ ಮೂವರು Himachal Pradeshದ ರೋಹ್ರು ಪ್ರದೇಶದಲ್ಲಿ ಆಶ್ರಯ ಪಡೆದಿದ್ದರು ಎನ್ನಲಾಗಿದೆ. ಮಾಹಿತಿ ಆಧರಿಸಿ ದೆಹಲಿ ಪೊಲೀಸರು ಅವರನ್ನು ಬಂಧಿಸಿದ್ದರು.
ಬುಧವಾರ ತಡರಾತ್ರಿ ಶಿಮ್ಲಾದ ದೀನ್ಡಯಾಳ ಉಪಾಧ್ಯಾಯ ವಲಯ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಆರೋಪಿಗಳನ್ನು ಕರೆತರುತ್ತಿದ್ದ ವೇಳೆ, ಧರ್ಮಪುರ ಸಮೀಪದ ಚಂಡೀಗಢ–ಕಲ್ಕಾ–ಶಿಮ್ಲಾ ಹೆದ್ದಾರಿಯಲ್ಲಿ ಶಿಮ್ಲಾ ಪೊಲೀಸರು ಬ್ಯಾರಿಕೇಡ್ ನಿರ್ಮಿಸಿ ದೆಹಲಿ ಪೊಲೀಸರನ್ನು ತಡೆದರು. ಸುಮಾರು 20 ಮಂದಿ ದೆಹಲಿ ಪೊಲೀಸ್ ಸಿಬ್ಬಂದಿಯನ್ನು ವಶಕ್ಕೆ ಪಡೆದು, ಅವರ ವಿರುದ್ಧ ಅಪಹರಣ ಪ್ರಕರಣ ದಾಖಲಿಸಲಾಯಿತು.
ಶಿಮ್ಲಾ ಪೊಲೀಸರು ಮೂವರು ಸಿಬ್ಬಂದಿ ಮಾತ್ರ ಆರೋಪಿಗಳನ್ನು ಕರೆದುಕೊಂಡು ರಾಜಧಾನಿಗೆ ಹಿಂತಿರುಗಬಹುದು, ಉಳಿದವರು ತನಿಖೆಗೆ ಸಹಕರಿಸಲು ಶಿಮ್ಲಾದಲ್ಲೇ ಉಳಿಯಬೇಕು ಎಂದು ಸೂಚಿಸಿದರು. ಜೊತೆಗೆ ವಶಪಡಿಸಿಕೊಂಡ ಡಿವಿಆರ್ಗಳನ್ನು ಹಿಂದಿರುಗಿಸುವಂತೆ ಆಗ್ರಹಿಸಿದರು. ಇದಕ್ಕೆ ದೆಹಲಿ ಪೊಲೀಸರು ಒಪ್ಪದೆ ತಮ್ಮ ಸಿಬ್ಬಂದಿಯನ್ನು ಹಿಂದೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಈ ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಾಗ್ವಾದಕ್ಕೂ ಕಾರಣವಾಗಿದೆ.

