ಉದಯಪುರ: ದೀರ್ಘಕಾಲದಿಂದ ಪರಸ್ಪರ ಪ್ರೀತಿಸುತ್ತಿದ್ದ ದಕ್ಷಿಣ ಭಾರತದ ಖ್ಯಾತ ತಾರೆಯರಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇದೀಗ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಸುಂದರ ನಗರ ಉದಯಪುರದಲ್ಲಿ ಇವರ ಮದುವೆ ಅದ್ದೂರಿಯಾಗಿ ನೆರವೇರಿದೆ.
ಉದಯಪುರ ನಗರದ ಹೊರವಲಯದಲ್ಲಿರುವ ಐಷಾರಾಮಿ ITC Udaipur Resortನಲ್ಲಿ ತಾರಾ ಜೋಡಿ ಸಪ್ತಪದಿ ತುಳಿದಿದ್ದಾರೆ. ಮದುವೆ ಸಮಾರಂಭಕ್ಕಾಗಿ ರೆಸಾರ್ಟ್ನ ಪ್ರತಿಯೊಂದು ಮೂಲೆಯನ್ನೂ ಅದ್ದೂರಿಯಾಗಿ ಅಲಂಕರಿಸಲಾಗಿದ್ದು, ರಾಜಮರ್ಯಾದೆಯ ಸಡಗರದಲ್ಲಿ ಕಾರ್ಯಕ್ರಮ ಜರುಗಿದೆ.
ರಶ್ಮಿಕಾ ಮತ್ತು ವಿಜಯ್ ಸಿನಿ ಜಗತ್ತಿನಲ್ಲಿ ಒಟ್ಟಿಗೆ ಅಭಿನಯಿಸುವ ವೇಳೆ ಹತ್ತಿರವಾಗಿದ್ದು, ಬಳಿಕ ಪ್ರೀತಿಯಲ್ಲಿ ಮುಳುಗಿದ್ದರು. ಇವರಿಬ್ಬರು ‘ಗೀತ ಗೋವಿಂದಂ’ ಹಾಗೂ ‘ಡಿಯರ್ ಕಾಮ್ರೇಡ್’ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿ ಅಭಿಮಾನಿಗಳ ಮನಗೆದ್ದಿದ್ದರು. ‘ಗೀತ ಗೋವಿಂದಂ’ ಚಿತ್ರದ ಚಿತ್ರೀಕರಣದ ಸಮಯದಲ್ಲೇ ಇವರಿಬ್ಬರ ಮಧ್ಯೆ ಪ್ರೀತಿ ಮೊಳಕೆಯೊಡೆದಿತ್ತು ಎಂಬ ಮಾತುಗಳು ಕೇಳಿಬಂದಿದ್ದವು.
ಅರಾವಳಿ ಪರ್ವತ ಶ್ರೇಣಿಯ ಮಧ್ಯೆ, ಬೆಟ್ಟದ ತುದಿಯಲ್ಲಿ ನೆಲೆಗೊಂಡಿರುವ ಈ ರೆಸಾರ್ಟ್ ಪ್ರಕೃತಿಯ ಮಡಿಲಲ್ಲಿ ಶಾಂತಿಯುತ ವಾತಾವರಣವನ್ನು ಹೊಂದಿದೆ. ಹಚ್ಚ ಹಸಿರು ಮತ್ತು ಬೆಟ್ಟಗಳ ಸೌಂದರ್ಯ ಈ ಸ್ಥಳದ ವಿಶೇಷತೆ. ನಗರ ಜಂಜಾಟದಿಂದ ದೂರವಿರುವುದರಿಂದ ಖಾಸಗಿ ಸಮಾರಂಭಗಳಿಗೆ ಇದು ಸೂಕ್ತ ತಾಣವಾಗಿದೆ.
ಒಳಾಂಗಣ ಡಿನ್ನರ್ ಹಾಲ್, ವಿಶಾಲ ಹುಲ್ಲುಹಾಸು ಹಾಗೂ ಹೊರಾಂಗಣ ಕಾರ್ಯಕ್ರಮ ಸ್ಥಳಗಳನ್ನು ಮದುವೆಗಾಗಿ ವಿಶೇಷವಾಗಿ ಸಿಂಗರಿಸಲಾಗಿತ್ತು. ವರದಿಗಳ ಪ್ರಕಾರ, ರೆಸಾರ್ಟ್ನಲ್ಲಿ ಸುಮಾರು 117 ಕೊಠಡಿಗಳಿದ್ದು, ಪ್ರತಿಯೊಂದು ಕೊಠಡಿಯಲ್ಲೂ ದೊಡ್ಡ ಕಿಟಕಿಗಳ ಮೂಲಕ ಪ್ರಕೃತಿಯ ನೋಟವನ್ನು ಆಸ್ವಾದಿಸಬಹುದಾಗಿದೆ. ಆರಾಮದಾಯಕ ಹಾಸಿಗೆಗಳು ಹಾಗೂ ಐಷಾರಾಮಿ ಸೌಲಭ್ಯಗಳು ಅತಿಥಿಗಳಿಗೆ ವಿಶೇಷ ಅನುಭವವನ್ನು ನೀಡುತ್ತವೆ.
ಈ ರೆಸಾರ್ಟ್ನಲ್ಲಿ ತಂಗುವ ದರವು ಒಂದು ರಾತ್ರಿ 20,000 ರಿಂದ 70,000 ರೂಪಾಯಿಗಳವರೆಗೆ ಇರುವುದಾಗಿ ತಿಳಿದುಬಂದಿದೆ. ತಾರಾ ಜೋಡಿಯ ಮದುವೆ ಸಮಾರಂಭವು ಸಿನಿ ಅಭಿಮಾನಿಗಳಲ್ಲಿ ಕುತೂಹಲ ಮತ್ತು ಸಂಭ್ರಮ ಮೂಡಿಸಿದೆ.

