ಬೆಂಗಳೂರು, ಫೆಬ್ರವರಿ 26: ರಾಜಧಾನಿಯ ಉತ್ತರ ಭಾಗದಲ್ಲಿ ಬೆಚ್ಚಿಬೀಳಿಸುವಂತಹ ಘಟನೆ ನಡೆದಿದೆ. ನಗರದ ಥಣಿಸಂದ್ರ ವ್ಯಾಪ್ತಿಯ ಅಮರಜ್ಯೋತಿ ಲೇಔಟ್ನಲ್ಲಿ ರೌಡಿಶೀಟರ್ ಪವನ್ ಕುಮಾರ್ (25) ಅವರನ್ನು ಆತನ ತಾಯಿಯ ಕಣ್ಣೆದುರೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮೂರು ವರ್ಷಗಳ ಹಿಂದೆ ನಡೆದ ಕಪಿಲ ಎಂಬಾತನ ಕೊಲೆಗೆ ಸೇಡಿಗಾಗಿ ಈ ಕೃತ್ಯ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್ ಆಗಿದ್ದ ಪವನ್ ಕುಮಾರ್ ಬುಧವಾರ ಸಂಜೆ ಮನೆಗೆ ಆಗಮಿಸಿದ ವೇಳೆ, ಮೂರು ಬೈಕ್ಗಳಲ್ಲಿ ಬಂದಿದ್ದ ಆರು ಮಂದಿ ಆರೋಪಿಗಳು ದಾಳಿ ನಡೆಸಿದ್ದಾರೆ. ಹೆಲ್ಮೆಟ್ ಧರಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು, ಪವನ್ ಮನೆ ಮುಂದೆ ನಿಂತ ಕ್ಷಣದಲ್ಲೇ ಆತನ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಮಗನನ್ನು ರಕ್ಷಿಸಲು ತಾಯಿ ಕೋಮಲ ಕಣ್ಣೀರು ಹಾಕುತ್ತ ಸಹಾಯಕ್ಕಾಗಿ ಗೋಗರೆದರೂ, ಆರೋಪಿಗಳ ಕ್ರೌರ್ಯಕ್ಕೆ ಅಡ್ಡಿಯಾಗಲು ಸಾಧ್ಯವಾಗಲಿಲ್ಲ. ತಾಯಿಯ ಕಣ್ಣೆದುರೇ ನಡೆದ ಈ ಭೀಕರ ಹತ್ಯೆ ಸ್ಥಳೀಯರಲ್ಲಿ ಭೀತಿಯನ್ನು ಉಂಟುಮಾಡಿದೆ.
ಘಟನೆ ತಿಳಿಯುತ್ತಿದ್ದಂತೆ ಸಂಪಿಗೆಹಳ್ಳಿ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದಾರೆ.
ಪವನ್ ಕುಮಾರ್ ಹಿಂದೆ ನಡೆದಿದ್ದ ಕಪಿಲ ಕೊಲೆ ಪ್ರಕರಣದಲ್ಲಿ A5 ಆರೋಪಿಯಾಗಿ ಜೈಲು ಶಿಕ್ಷೆ ಅನುಭವಿಸಿದ್ದನು. ಕಳೆದ ಮೇ ತಿಂಗಳಲ್ಲಿ ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಮರಳಿದ್ದನು. ಮಗನು ಸರಿದಾರಿಗೆ ಬರಲೆಂದು ಕುಟುಂಬದವರು ಒಂದೂವರೆ ತಿಂಗಳ ಹಿಂದೆ ಮನೆ ಸಮೀಪವೇ ಬೇಕರಿ ಅಂಗಡಿ ಆರಂಭಿಸಲು ಸಹಾಯ ಮಾಡಿದ್ದರು ಎಂದು ತಿಳಿದುಬಂದಿದೆ.
ಜುಲೈ 11, 2023ರಂದು ಡಿಜೆ ಹಳ್ಳಿ ಬಳಿ ಕಪಿಲ ಎಂಬಾತನನ್ನು ಇದೇ ರೀತಿಯಲ್ಲಿ ಹೆಲ್ಮೆಟ್ ಧರಿಸಿಕೊಂಡು ಬಂದಿದ್ದ ಆರು ಮಂದಿ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದರು. ಆ ಪ್ರಕರಣದಲ್ಲಿಯೇ ಪವನ್ ಕುಮಾರ್ ಆರೋಪಿಯಾಗಿದ್ದನು. ಇದೀಗ ಅದೇ ಮಾದರಿಯಲ್ಲಿ ಪವನ್ನ ಹತ್ಯೆ ನಡೆದಿರುವುದರಿಂದ ಇದು ರಿವೇಂಜ್ ಮರ್ಡರ್ ಆಗಿರಬಹುದೆಂಬ ಅನುಮಾನ ಗಟ್ಟಿಯಾಗಿದೆ.
ಕಪಿಲನ ತಮ್ಮ ಪ್ರೇಮ್ ಸೇರಿದಂತೆ ಕೆಲವರ ಮೇಲೆ ಪೊಲೀಸರಿಗೆ ಅನುಮಾನವಿದ್ದು, ಎಲ್ಲಾ ಕೋಣಗಳಿಂದ ತನಿಖೆ ಮುಂದುವರಿದಿದೆ. ನಗರದಲ್ಲಿ ಮತ್ತೆ ಗ್ಯಾಂಗ್ ವೈಷಮ್ಯದ ನೆರಳು ಮೂಡಿದಂತಾಗಿದೆ.

