ಬೆಂಗಳೂರು: ಬೆಳ್ಳಂಬೆಳಿಗ್ಗೆ ರೈಲ್ವೆ ಅಂಡರ್ಪಾಸ್ನ ಕೆಳಭಾಗಕ್ಕೆ ಅಳವಡಿಸಲಾಗಿದ್ದ ತಗಡಿನ ಶೀಟ್ ಕಳಚಿ ರಸ್ತೆ ಮಧ್ಯೆ ಬಿದ್ದ ಘಟನೆ ನಗರದಲ್ಲಿ ಆತಂಕ ಮೂಡಿಸಿದೆ.
ಶೇಷಾದ್ರಿಪುರಂ ರಿಂದ ಆನಂದ್ರಾವ್ ಸರ್ಕಲ್ ಕಡೆ ಹೋಗುವ ರಸ್ತೆಯಲ್ಲಿರುವ ರೈಲ್ವೆ ಬ್ರಿಡ್ಜ್ ಅಡಿಯಲ್ಲಿ ಅಳವಡಿಸಿದ್ದ ತಗಡಿನ ಶೀಟ್ ಬಸ್ಗೆ ತಾಗಿ ಕಳಚಿಬಿದ್ದಿದೆ ಎಂದು ತಿಳಿದುಬಂದಿದೆ. ತುಕ್ಕು ಹಿಡಿದ ಪರಿಣಾಮ ಕಬ್ಬಿಣದ ಕ್ಲಿಪ್ಗಳು ಕಟ್ ಆಗಿ ಶೀಟ್ ನಡು ರಸ್ತೆಯಲ್ಲೇ ಬಿದ್ದಿದೆ.
ಘಟನೆಯ ಬಳಿಕ ಸ್ಥಳದಲ್ಲಿ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ಇದೇ ವೇಳೆ ಇನ್ನೂ ಕೆಲವು ತಗಡಿನ ಶೀಟ್ಗಳ ಕ್ಲಿಪ್ಗಳು ಕೂಡ ಕಟ್ ಆಗಿರುವುದರಿಂದ ಉಳಿದ ಶೀಟ್ಗಳು ಯಾವ ಕ್ಷಣದಲ್ಲಾದರೂ ಬೀಳುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.
ಮಾಹಿತಿ ತಿಳಿದ ತಕ್ಷಣ ಶೇಷಾದ್ರಿಪುರಂ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಂಚಾರವನ್ನು ನಿಯಂತ್ರಿಸಿದರು. ಬಳಿಕ ರೈಲ್ವೆ ಸಿಬ್ಬಂದಿ ಘಟನಾ ಸ್ಥಳಕ್ಕೆ ಬಂದು ಅಪಾಯದ ಹಂತದಲ್ಲಿದ್ದ ಶೀಟ್ಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾದರು.
ಗ್ಯಾಸ್ ಕಟರ್ ಸಹಾಯದಿಂದ ಕಂಬಿಗಳನ್ನು ಕಟ್ ಮಾಡಿ ರಸ್ತೆಗೆ ಬಿದ್ದ ಶೀಟ್ ಹಾಗೂ ಉಳಿದ ತಗಡಿನ ಶೀಟ್ಗಳನ್ನು ಸಿಬ್ಬಂದಿ ತೆರವುಗೊಳಿಸಿದರು. ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವೆಂಬುದು ಸಮಾಧಾನಕರ ಸಂಗತಿಯಾಗಿದೆ.

