ಬೆಂಗಳೂರು: ಕನಕಪುರ ರಸ್ತೆಯ ಕಗ್ಗಲಿಪುರ ಸಮೀಪದ ಗುಲ್ಲಹಟ್ಟಿ ಕಾವಲ ಗ್ರಾಮದಲ್ಲಿ ಸುಮಾರು 10 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದ ಘಟನೆ ಇಂದು ಸಂಜೆ ನಡೆದಿದೆ.
ಗ್ರಾಮದ ಸೋಮಸುಂದರ ಮೂರ್ತಿ ಅವರ ಮನೆಯ ನೀರಿನ ತೊಟ್ಟಿಯ ಪಕ್ಕದಲ್ಲಿದ್ದ ಚೀಲದೊಳಗೆ ಹೆಬ್ಬಾವು ಅಡಗಿ ಕುಳಿತಿತ್ತು. ಸಂಜೆ ಸುಮಾರು 6 ಗಂಟೆಯ ವೇಳೆಗೆ ಅಲ್ಲಿ ಹೋದ ಅಭಿಷೇಕ್ ಅವರಿಗೆ ಹಾವು ಶಬ್ದ ಮಾಡಿದ್ದು ಕೇಳಿಬಂದಿದ್ದು, ಭಯಭೀತರಾಗಿ ಕಿರುಚುತ್ತಾ ಓಡಿಬಂದಿದ್ದಾರೆ.
ತಕ್ಷಣ ಸ್ಥಳೀಯರು ಸೇರಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸಿ ನಂತರ ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಗ್ರಾಮದಲ್ಲಿ ಸಣ್ಣ ಮಕ್ಕಳು ಆಗಾಗ್ಗೆ ಆಟವಾಡಲು ಬರುತ್ತಿರುವುದರಿಂದ ಭಯದ ವಾತಾವರಣ ನಿರ್ಮಾಣವಾಗಿತ್ತು. “ಹಾವು ಮಕ್ಕಳ ಮೇಲೆ ದಾಳಿ ಮಾಡಿದ್ದರೆ ಏನು ಆಗುತ್ತಿತ್ತೋ?” ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು. ಸದ್ಯ ಯಾವುದೇ ಅನಾಹುತ ಸಂಭವಿಸದಿರುವುದು ಗ್ರಾಮಸ್ಥರಿಗೆ ನಿರಾಳತೆಯನ್ನು ತಂದಿದೆ.

