ಬೆಂಗಳೂರು : ನಗರದಲ್ಲಿ ಮನಕಲಕುವ ದುರಂತ ಘಟನೆಯೊಂದು ಬೆಳಕಿಗೆ ಬಂದಿದೆ. ಮಗು ಸಾವನ್ನಪ್ಪಿದ ದುಃಖವನ್ನು ತಾಳಲಾರದೆ ತಾಯಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಂದ್ರಾ ಲೇಔಟ್ ಪ್ರದೇಶದಲ್ಲಿ ನಡೆದಿದೆ.
ಚಂದ್ರಾ ಲೇಔಟ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ಈ ದುರ್ಘಟನೆ ನಡೆದಿದೆ. 11 ತಿಂಗಳ ಗಂಡು ಮಗು ಅಗಸ್ತ್ಯ ಬಚ್ಚಲು ಮನೆಯಲ್ಲಿದ್ದ ನೀರಿನ ಬಕೆಟ್ನಲ್ಲಿ ಮುಳುಗಿ ಮೃತಪಟ್ಟಿದೆ. ಈ ವೇಳೆ ಮನೆಯಲ್ಲಿ ತಾಯಿ ಪ್ರತಿಭಾ (29) ಮತ್ತು ಮಗು ಮಾತ್ರ ಇದ್ದರು. ಗಂಡ ಮಹಾಂತೇಶ್ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದರು.
ಮಗು ಸಾವನ್ನಪ್ಪಿರುವುದನ್ನು ಕಂಡ ತಾಯಿ ಪ್ರತಿಭಾ ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಇಬ್ಬರೂ ಸಾಫ್ಟ್ವೇರ್ ಉದ್ಯೋಗಿಗಳಾಗಿದ್ದರು ಎನ್ನಲಾಗಿದೆ.
ಘಟನಾ ಸ್ಥಳದಲ್ಲಿ ಪ್ರತಿಭಾ ಬರೆದಿಟ್ಟ ಡೆತ್ ನೋಟ್ ಪತ್ತೆಯಾಗಿದ್ದು, ಅದರ ಪಕ್ಕದಲ್ಲೇ ಮಾತ್ರೆಗಳ ಶೀಟ್ ಕೂಡ ಕಂಡುಬಂದಿದೆ. “ನಾನು ಬಟ್ಟೆ ತರಲು ಹೋದಾಗ ಈ ಘಟನೆ ನಡೆದಿದೆ. ಮಗುವಿನ ಸಾವಿಗೆ ನಾನು ಕಾರಣ” ಎಂದು ಅವರು ನೋಟ್ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ.
ಮೊದಲಿಗೆ ಮಾತ್ರೆ ಸೇವಿಸಿ ಹಾಗೂ ಕೈ ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದರೂ ಸಾಧ್ಯವಾಗದೆ, ಬಳಿಕ ನೇಣಿಗೆ ಶರಣಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಕುರಿತು ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

