ವಿಜಯನಗರ: ಹರಪನಹಳ್ಳಿ ತಾಲೂಕಿನ ಅರಸಿಕೆರೆ ಹೋಬಳಿಯ ಕಮ್ಮತ್ತಹಳ್ಳಿ ಗ್ರಾಮದಲ್ಲಿ ಪುರಾತನ ಬಾವಿ ಪುನಶ್ಚೇತನಗೊಳಿಸಿ (Ancestors Rising) ಅಭಿವೃದ್ಧಿಪಡಿಸುವಾಗ ದೇವರ ಕೇಲುಗಳು, ಶಿವಲಿಂಗ, ಬಸವಣ್ಣ ಮೂರ್ತಿಗಳು ಪತ್ತೆಯಾಗಿದೆ.
ಬಾವಿಯ ತಳಭಾಗದ ಗೋಡೆಯ ಪೂರ್ವ ಅಭಿಮುಖವಾಗಿ ಮೂರು ದೇವರ ಕೇಲುಗಳು (ದೇವರ ಪೂಜೆ ಸಾಮಗ್ರಿಗಳು) ಮಡಿಕೆಗಳು, ಸುಮಾರು ಒಂದು ಅಡಿ ಎತ್ತರದ ಏಕಶಿಲಾ ಶಿವಲಿಂಗ ಹಾಗೂ ಹಲವು ಬಸವಣ್ಣ ಮೂರ್ತಿಗಳು ದೊರೆತಿದೆ.
ಒಳಗೇನಿದೆ ಎಂಬುದೇ ಕೌತುಕ!
ಮಡಿಕೆಗಳನ್ನು (ಕೇಲು) ಮುಚ್ಚಲಾಗಿದ್ದು, ಒಳಗಡೆ ಏನಿದೆ ಎಂಬುದು ತಿಳಿದಿಲ್ಲ. ಹೂಳು ಹೊರ ತೆಗೆಯುವ ಸಂದರ್ಭದಲ್ಲಿ ಕಾರ್ಮಿಕರ ಕಣ್ಣಿಗೆ ಬಿದ್ದಿದ್ದು ಸ್ಥಳಿಯರು ಆಶ್ಚರ್ಯ ಪಟ್ಟಿದ್ದಾರೆ.
ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಪುನಶ್ಚೇತನ
ಸುಮಾರು 500 ವರ್ಷಗಳ ಹಳೆಯ ಬಾವಿ ಇದಾಗಿದ್ದು, ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪುಣಭಗಟ್ಟ ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಪುನಶ್ಚೇತನದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.
ಮುಳ್ಳು ಜಾಲಿ, ಪೊದೆಗಳಲ್ಲಿ ಮುಚ್ಚಿಹೋಗಿದ್ದ ಪುರಾತನ ಬಾವಿಯ ಪುನಶ್ಚೇತನಕ್ಕಾಗಿ ಮೊದಲ ಹಂತದಲ್ಲಿ ಜಿಲ್ಲಾಡಳಿತದಿಂದ ₹5 ಲಕ್ಷ ಮೊತ್ತದ ಹಣದಲ್ಲಿ ಬಾವಿಗೆ ಪುಷ್ಕರಣಿ ರೂಪ ನೀಡಲಾಗಿದೆ. ಸುತ್ತಲೂ ತಂತಿಬೇಲಿ ಹಾಕಲಾಗಿದೆ. ಮುಂದುವರೆದ ಕಾಮಗಾರಿಗೆ ₹3 ಲಕ್ಷ ವೆಚ್ಚದಲ್ಲಿ ಬಾವಿ ಹೂಳು ತೆಗೆಸುವ ವೇಳೆ ಪುರಾತನ ಶಿವಲಿಂಗ, ಬಸವಣ್ಣ ಮೂರ್ತಿಗಳು ಸೇರಿ ಹತ್ತಾರು ಹಳೆಯ ಮೂರ್ತಿಗಳು ಪತ್ತೆ ಆಗಿವೆ.
ಅಂದಿನ ಕಮ್ಮತ್ತವು ಇಂದು ಕಮ್ಮತ್ತಹಳ್ಳಿ
ಕ್ರಿ.ಶ 1784 ರ ಸಮಯದಲ್ಲಿ ಹರಪನಹಳ್ಳಿ-ಉಚ್ಚಂಗಿದುರ್ಗವನ್ನು ಚಿತ್ರದುರ್ಗದ ಮೂಲ ಪುರುಷ ಚಿತ್ರನಾಯಕ, ಹರಪನಹಳ್ಳಿ ಸೋಮಶೇಖರ ಆಳ್ವಿಕೆ ನಡೆಸಿದ್ದಾರೆ. ವ್ಯವಸಾಯಕ್ಕೆ ಯೋಗ್ಯವಾದ ಭೂಮಿಯನ್ನು ರೈತರಿಗೆ ಕಮ್ಮತ್ತದಿಂದ ನೀಡಿದ್ದರು. ರೈತರ ಉಪಯೋಗಕ್ಕೆ ಬಾವಿಯನ್ನು ಕೊರೆಯಿಸಲಾಗಿದೆ. ಅಂದಿನ ಕಮ್ಮತ್ತವು ಇಂದು ಕಮ್ಮತ್ತಹಳ್ಳಿ ಗ್ರಾಮವಾಗಿ ಪರಿವರ್ತನೆ ಆಗಿದೆ.
ಪುರಾತನ ಬಾವಿಗೆ ಪುಷ್ಕರಣಿಯ ಸ್ಪರ್ಶ
‘ಪುರಾತನ ಬಾವಿಗೆ ಪುಷ್ಕರಣಿಯ ಸ್ಪರ್ಶ ನೀಡಲಾಗಿದೆ. ಇಲ್ಲಿ ದೊರಕಿರುವ ಪ್ರಾಚೀನ ಕಾಲದ ಸಾಮಗ್ರಿಗಳು ಧಾರ್ಮಿಕ ನಂಬಿಕೆಗಳನ್ನು ಜೀವಂತವಾಗಿಸಿದೆ. ಇಲ್ಲಿ ದೊರೆತಿರುವ ಪುರಾತನ ಕಾಲದ ಸಾಮಗ್ರಿಗಳ ಕುರಿತು ಅಧ್ಯಯನ ನಡೆಯಬೇಕು. ಅವುಗಳ ರಕ್ಷಣೆಗೆ ಆಗಬೇಕು’ ಎಂದು ಗ್ರಾಮಸ್ಥರಾದ ಶ್ರೀನಿವಾಸ ನಾಯಕ ಹಾಗೂ ತಿಪ್ಪೇಶಪ್ಪ ಆಗ್ರಹಿಸಿದ್ದಾರೆ.
ಇದನ್ನೂ ಓದಿ:
Ancestors Rising: ಅಚಾನಕ್ ಆಗಿ ಪತ್ತೆಯಾಯ್ತು 1300 ವರ್ಷ ಹಳೆಯ ಪುರಾತನ ದೇಗುಲ, ಅಪರೂಪದ ಶಾಸನ!
ಓದಿ, ಓದಿಸಿ!
ಭಾರತ ಒಂದೇ ಅಲ್ಲ, ಜಗತ್ತಿನ ಮೂಲೆ ಮೂಲೆಗಳಲ್ಲಿ ಘಟಿಸುತ್ತಿರುವ ಇಂತಹ ವಿಶಿಷ್ಟ ವಿದ್ಯಮಾನಗಳನ್ನು ಹೊತ್ತು ನ್ಯೂಸ್18 ಕನ್ನಡ ಜಾಲತಾಣ ನಿಮ್ಮ ಮುಂದೆ ಬರುತ್ತಿದೆ. ಈ ಎಲ್ಲ ವಿದ್ಯಮಾನಗಳನ್ನು ನಿಮ್ಮ ಮನಸ್ಸು ಒಂದಕ್ಕೊಂದು ಜೋಡಿಸಿಕೊಳ್ಳಬಹುದು, ಪ್ರತ್ಯೇಕವಾಗಿ ಗಮನಿಸಬಹುದು. ಆದರೆ ನಿರ್ಲಕ್ಷಿಸಲಂತೂ ಸಾಧ್ಯವಿಲ್ಲ! ಬೇರೆಲ್ಲೂ ಸಿಗದ ವಿಭಿನ್ನ ಪ್ರಯತ್ನವನ್ನು ನೀವೂ ಓದಿ, ಇತರರಿಗೂ ಓದಿಸಿ!
Editors Note
ಬದಲಾವಣೆ ಜಗದ ನಿಯಮ. ಈ ಬದಲಾವಣೆ ಹೀಗೆ ಆಗುತ್ತೆ..ಯಾವಾಗ ಆಗುತ್ತೆ? ಹೇಗಾಗುತ್ತೆ? ಇದಕ್ಕೆ ‘ಇದಂ ಇತ್ಥಂ’ ಎಂಬ ಉತ್ತರ ಇಲ್ಲ. ಇದು ಪ್ರಕೃತಿಯ ವಿವೇಚನೆಗೆ ಬಿಟ್ಟಿದ್ದು. ಕೆಲವೊಮ್ಮೆ ಸಹಜ, ಕೆಲವೊಮ್ಮೆ ಅಚ್ಚರಿ, ಕೆಲವೊಮ್ಮೆ ಆಘಾತ, ಕೆಲವೊಮ್ಮೆ ನಿರ್ಲಿಪ್ತ, ಕೆಲವೊಮ್ಮೆ ಮಾತ್ರ ಸುಳಿವು ಸಿಗುವಂಥ ಬೆಳವಣಿಗೆ ಇದು. ಮೂಲದ ನಂಟಿನ ಒಗಟು ಬಿಚ್ಚಿಡುವ ಘಟ್ಟವಿದು. ಸೂಕ್ಷ್ಮವಾಗಿ ಗಮನಿಸಿದಾಗ ಜಗತ್ತಿನಾದ್ಯಂತ ಇಂಥದ್ದೊಂದು ಬದಲಾವಣೆ ಈಗ ಶುರುವಾಗಿದೆಯಾ? ಈಗ ನಡೆಯುತ್ತಿರುವ ಹಲವು ಘಟನೆಗಳು ಈಗಲೇ ನಡೆಯುತ್ತಿರೋದ್ಯಾಕೆ? ಈ ಘಟನೆಗಳಿಗೆ ಪೂರಕ ವಾತಾವರಣ ಮೂಡಿರೋದು ಈಗಲೇ ಯಾಕೆ? ಇಂಥದ್ದೊಂದು ಪ್ರಶ್ನೆಗೆ ಉತ್ತರ ಹುಡುಕುವ ಪಯಣದ ಚಾರಣಿಗರು ಎಲ್ಲ. ಇಂಥದ್ದೇ ಅಪರೂಪದ, ಅಕಲ್ಪನೀಯ, ಘಟನಾವಳಿಗಳ ಹೆಕ್ಕಿ ತೆಗೆದು ನಿಮ್ಮ ಮುಂದಿಡುವ ಪ್ರಯತ್ನವೇ ನಮ್ಮ ಈ ಪುರಾತನರ ಪುನರುತ್ಥಾನ ಅಂದ್ರೆ Ancestors Rising ಲೇಖನ ಮಾಲೆಯ ಮುಖ್ಯ ಉದ್ದೇಶ. ನೀವೂ ನಮ್ಮ ಈ ಪಯಣದ ಭಾಗವಾಗಬೇಕು ಅನ್ನೋದು ನಮ್ಮ ಆಶಯ –ರಾಘವೇಂದ್ರ ಗುಡಿ
ವರದಿ: ಬಸವರಾಜ್, ನ್ಯೂಸ್ 18 ಕನ್ನಡ ಬಳ್ಳಾರಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

