ಕುಂದಾಪುರ : ಕುಡಿದ ಮತ್ತಿನಲ್ಲಿ ಪತ್ನಿಯ ಕುತ್ತಿಗೆ ಕಡಿದು ಪತಿಯೊಬ್ಬ ನರ್ತಿಸಿ ವಿಕೃತಿ ಮೆರೆದಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ನಡೆದಿದೆ. ಅನಿತಾ (38) ಹಲ್ಲೆಗೊಳಗಾದಾಕೆ. ಈಕೆ ಪತಿ ಸೊರಬ ತಾಲೂಕು ಮೂಲದ ಲಕ್ಷ್ಮಣ ಯಾನೆ ರಮೇಶ್ ಹಲ್ಲೆ ನಡೆಸಿದಾತ. ಈ ಘಟನೆ ಮಠವೊಂದಕ್ಕೆ ಸಂಬಂಧಿಸಿದ ರೆಸಿಡೆನ್ಶಿಯಲ್ ಬ್ಲಾಕ್ನ ಬಾಡಿಗೆ ಮನೆಯಲ್ಲಿ ನಡೆದಿದೆ.
ಲಕ್ಷ್ಮಣ ಮತ್ತು ಅನಿತಾ ದಂಪತಿ ಮಠದ ತೋಟ ನೋಡಿಕೊಳ್ಳುತ್ತಿದ್ದರು. ನಾಲ್ಕು ತಿಂಗಳ ಹಿಂದೆಯಷ್ಟೆ ತೋಟ ನೋಡಿಕೊಳ್ಳಲು ಉಡುಪಿ ಜಿಲ್ಲೆಗೆ ಬಂದಿದ್ದರು. ವಿಪರೀತ ಕುಡಿತದ ಚಟ ಹೊಂದಿದ್ದ ಲಕ್ಷ್ಮಣ ಪತ್ನಿಯ ಕುತ್ತಿಗೆ ಕಡಿದು ಮಾರಣಾಂತಿಕ ಗಾಯಗೊಳಿಸಿದ್ದ. ಮನೆಯ ಬಾಗಿಲ ಚಿಲಕ ಹಾಕಿ ಹಾಲ್ ನಲ್ಲಿ ಕೈಯಲ್ಲಿ ಕತ್ತಿ ಹಿಡಿದು ಆರೋಪಿ ಲಕ್ಷ್ಮಣ ನರ್ತಿಸುತ್ತಿದ್ದ.
ಘಟನೆ ಅರಿವಿಗೆ ಬರುತ್ತಲೇ ಕಿಟಕಿ ಒಡೆದು ಅಡುಗೆ ಕೋಣೆಗೆ ತೆರಳಿ ಪತ್ನಿಯನ್ನು ಹೊರತಂದ ಸ್ಥಳೀಯರು ಆಕೆಯನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಷ್ಟಾದರೂ ಕೈಯಲ್ಲಿ ಕತ್ತಿ ಹಿಡಿದು ನರ್ತಿಸುತ್ತಿದ್ದ ಪತಿಯನ್ನು ಸ್ಥಳಕ್ಕೆ ಬಂದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಅಶ್ರುವಾಯು ಪ್ರಯೋಗಿಸಿ ಸುಮಾರು ಒಂದೂವರೆ ಗಂಟೆಯ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ. ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

