ಗದಗ (ಕುಂದಾನಗರಿ), ಜ.17: ಲಕ್ಕುಂಡಿಯಲ್ಲಿ ಬಂಗಾರದ ನಿಧಿ ಪತ್ತೆ ಸುದ್ದಿಯ ಬೆನ್ನಲ್ಲೇ ಕುಂದಾನಗರಿ ತಾಲ್ಲೂಕಿನ ಪಾಲಭಾವಿ ಗ್ರಾಮದಲ್ಲಿ ಮತ್ತೊಂದು ಬಂಗಾರದ ನಿಧಿ ಪತ್ತೆಯಾಗಿದೆ ಎಂಬ ಶಂಕೆ ಹುಟ್ಟಿದೆ. ಗ್ರಾಮದ ರೈತ ಪ್ರಕಾಶ ನಿಂಗನೂರ ಅವರ ಜಮೀನಿನಲ್ಲಿ ಮಣ್ಣು ತೆಗೆಯುವ ವೇಳೆ ಸುಮಾರು 3 ಕೆಜಿ ಬಂಗಾರದ ನಿಧಿ ದೊರಕಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಸ್ಥಳಕ್ಕೆ ತಾಲೂಕು ಆಡಳಿತದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಂಗಾರ ಪತ್ತೆ ವಿಚಾರ ಗ್ರಾಮದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಜಮೀನು ಮಾಲೀಕ ಪ್ರಕಾಶ ನಿಂಗನೂರ ಮಾತನಾಡಿ,
“ನನ್ನ ಜಮೀನಿನಲ್ಲಿ ಮಣ್ಣು ತೆಗೆಯುವಾಗ ನಿಧಿ ಪತ್ತೆಯಾಗಿದೆ. ಆ ನಿಧಿಯನ್ನು ನಮ್ಮ ಅಣ್ಣನ ಮಗ ನೋಡಿದ್ದಾನೆ” ಎಂದು ತಿಳಿಸಿದ್ದಾರೆ.
ಆದರೆ ಈ ಪ್ರಕರಣದಲ್ಲಿ ಹೊಸ ತಿರುವು ಪಡೆದುಕೊಂಡಿದ್ದು,
“ರಾತ್ರೋರಾತ್ರಿ ಆ ನಿಧಿಯನ್ನು ಆನಂದ ನಿಂಗನೂರ ಕದ್ದಿದ್ದಾನೆ” ಎಂದು ಪ್ರಕಾಶ ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಆನಂದ ನಿಂಗನೂರ,
“ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ನಿಧಿ ತೆಗೆದುಕೊಂಡ ಆರೋಪ ಸತ್ಯಕ್ಕೆ ದೂರ. ಇಲಾಖೆಯ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ನಾನು ಯಾವುದೇ ನಿಧಿ ತೆಗೆದುಕೊಂಡಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಪ್ರಕರಣದ ಸತ್ಯಾಸತ್ಯತೆ ಆಡಳಿತದ ತನಿಖೆಯ ನಂತರವೇ ಸ್ಪಷ್ಟವಾಗಲಿದೆ. ಗ್ರಾಮದಲ್ಲಿ ಕುತೂಹಲ ಮತ್ತು ಚರ್ಚೆ ಮುಂದುವರಿದಿದೆ.

