ಬೆಂಗಳೂರು: ರಾಜ್ಯದ ಹಲವು ಪ್ರಮುಖ ನಗರಗಳಲ್ಲಿ ಇಂದು ವಾಯು ಗುಣಮಟ್ಟ ಕುಸಿತ ಕಂಡುಬಂದಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 155ಕ್ಕೆ ಏರಿಕೆಯಾಗಿ ಆರೋಗ್ಯಕ್ಕೆ ಹಾನಿಕರ ಮಟ್ಟ ತಲುಪಿದೆ.
ಇದರ ಜೊತೆಗೆ ಮಂಗಳೂರು 168, ಮೈಸೂರು 173, ಬೆಳಗಾವಿ 163, ಶಿವಮೊಗ್ಗ 162, ಹುಬ್ಬಳ್ಳಿ 162, ಉಡುಪಿ 160 ಹಾಗೂ ವಿಜಯಪುರ 151 ರಷ್ಟು AQI ದಾಖಲಾಗಿದ್ದು, ಗಾಳಿಯ ಗುಣಮಟ್ಟ ಕಳಪೆ ಮಟ್ಟದಲ್ಲಿದೆ. ಬಳ್ಳಾರಿಯಲ್ಲಿ 124 AQI ದಾಖಲಾಗಿದ್ದು, ಕಲಬುರ್ಗಿಯಲ್ಲಿ ಮಾತ್ರ 90 AQI ಮೂಲಕ ಸ್ವಲ್ಪ ಮಟ್ಟಿಗೆ ಸುಧಾರಿತ ಸ್ಥಿತಿ ಕಂಡುಬಂದಿದೆ.
ಈ ತಿಂಗಳಲ್ಲಿ ರಾಜ್ಯದ ಹವಾಮಾನ ಹೆಚ್ಚಾಗಿ ಉಷ್ಣವಾಗಿರುವ ಹಿನ್ನೆಲೆಯಲ್ಲಿ, ಹಲವು ನಗರಗಳಲ್ಲಿ ವಾಯು ಗುಣಮಟ್ಟ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಮಾನದಂಡಗಳ ಪ್ರಕಾರ, ಇಂತಹ ಮಟ್ಟದ ವಾಯು ಮಾಲಿನ್ಯವು ಉಸಿರಾಟದ ಸಮಸ್ಯೆಗಳು ಹಾಗೂ ಶ್ವಾಸಕೋಶ ಸಂಬಂಧಿತ ತೊಂದರೆಗಳನ್ನು ಹೆಚ್ಚಿಸಬಹುದು. ಆದ್ದರಿಂದ ಮಕ್ಕಳು, ವೃದ್ಧರು ಹಾಗೂ ಆರೋಗ್ಯ ಸಮಸ್ಯೆಯಿರುವವರು ಹೊರಾಂಗಣದಲ್ಲಿ ಹೆಚ್ಚು ಕಾಲ ಕಳೆದುವುದನ್ನು ತಪ್ಪಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

