ಅಮರಾವತಿ : “ ಹಿಂದಿನ ವೈ.ಎಸ್.ಜಗನ್ ಸರ್ಕಾರದ ಅವಧಿಯಲ್ಲಿ ತಿರುಪತಿ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು” ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.
ಬುಧವಾರ ನಡೆದಿದ್ದ ಎನ್ಡಿಎ ಶಾಸಕಾಂಗ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ನಾಯ್ಡು, ಕಳೆದ ಐದು ವರ್ಷಗಳಲ್ಲಿ ತಿರುಪತಿ ವೆಂಕಟೇಶ್ವರ ದೇವಾಲಯದ ಪಾವಿತ್ರ್ಯತೆಯನ್ನು ಎಷ್ಟು ಸಾಧ್ಯವೋ ಅಷ್ಟು ಕೆಡಿಸಲಾಗಿತ್ತು. ಭಕ್ತಾದಿಗಳಿಗೆ ದೇವಾಲಯ ನೀಡುವ ಅನ್ನದಾನದ ಗುಣಮಟ್ಟದ ವಿಚಾರದಲ್ಲೂ ಜಗನ್ ಸರ್ಕಾರ ರಾಜಿ ಮಾಡಿಕೊಂಡಿತ್ತು ಎಂದು ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ. ” ತಿರುಪತಿ ಲಡ್ಡು ಪ್ರಸಾದವನ್ನು ಶುದ್ದವಾದ ತುಪ್ಪದಲ್ಲಿ ತಯಾರಿಸಲಾಗುತ್ತದೆ. ಆದರೆ, ಜಗನ್ ಸರ್ಕಾದ ಅವಧಿಯಲ್ಲಿ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಿದ್ದಾರೆ. ಪ್ರಸಾದ ರೂಪದಲ್ಲಿ ಕೊಡುವ ಲಡ್ಡನ್ನೂ ಕಲುಷಿತಗೊಳಿಸಲಾಗಿದೆ ” ಎನ್ನುವ ಗುರುತರ ಆರೋಪವನ್ನು ಸಿಎಂ ನಾಯ್ಡು ಮಾಡಿದ್ದಾರೆ.
ಪಾವಿತ್ರ್ಯತೆ ಉಳಿಸುವುದು ನನ್ನ ಮೊದಲ ಕರ್ತವ್ಯ :
ತಿಮ್ಮಪ್ಪನ ಭಕ್ತನಾಗಿ ಈ ದೇವಾಲಯದ ಪಾವಿತ್ರ್ಯತೆ ಮತ್ತು ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಉಳಿಸುವುದು ನನ್ನ ಮೊದಲ ಕರ್ತವ್ಯ. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಹೆಜ್ಜೆಯನ್ನು ಇಡುತ್ತಿದೆ. ಎಲ್ಲವನ್ನೂ ಸರಿದಾರಿಗೆ ತರಲಾಗುತ್ತದೆ ಎನ್ನುವ ವಿಶ್ವಾಸದಲ್ಲಿ ನಾವಿದ್ದೇವೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಆರೋಪ ತಳ್ಳಿಹಾಕಿದ ಜಗನ್
ಸಿಎಂ ನಾಯ್ಡು ಅವರ ಆರೋಪವನ್ನು ಮಾಜಿ ಸಿಎಂ ಜಗನ್ ತಳ್ಳಿ ಹಾಕಿದ್ದಾರೆ. ವೈ.ಎಸ್.ಆರ್ ಕಾಂಗ್ರೆಸ್ ಪಾರ್ಟಿಯ ನಾಯಕರು ಈ ಆಪಾದನೆಯನ್ನು ತಳ್ಳಿ ಹಾಕಿದ್ದಾರೆ. “ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತ ವ್ಯಕ್ತಿಯಿಂದ ಬೇಜವ್ದಾರಿ ಹೇಳಿಕೆ ನಿರೀಕ್ಷಿಸಿರಲಿಲ್ಲ. ಅಸಲಿಗೆ, ತಿರುಪತಿ ದೇವಾಲಯದ ಪಾವಿತ್ರ್ಯತೆಯನ್ನು ಹಾಳು ಮಾಡುತ್ತಿರುವುದೇ ಚಂದ್ರಬಾಬು ನಾಯ್ಡು” ಎಂದು ರಾಜ್ಯಸಭಾ ಸದಸ್ಯ ವೈ.ವಿ.ಸುಬ್ಬಾ ರೆಡ್ಡಿ ತಿರುಗೇಟು ನೀಡಿದ್ದಾರೆ. ನಮ್ಮ ಹಿಂದಿನ ಸರ್ಕಾರ ತಿರುಪತಿಯ ಧಾರ್ಮಿಕ ಭಾವನೆಗೆ ಧಕ್ಕೆ ತಂದಿಲ್ಲ. ಲಡ್ಡು ವಿಚಾರದಲ್ಲಿ ಭಗವಂತನ ಮುಂದೆ ಪ್ರಮಾಣ ಮಾಡಲು ನಾವು ಸಿದ್ದ. ಚಂದ್ರಬಾಬು ಅವರೂ ವೆಂಕಟೇಶ್ವರನ ಮುಂದೆ ಪ್ರಮಾಣ ಮಾಡಲಿ ಎಂದು ವೈಎಸ್ಆರ್ ಕಾಂಗ್ರೆಸ್ ನಾಯಕರು ಚಾಲೆಂಜ್ ಮಾಡಿದ್ದಾರೆ.
ಹಲವು ಆರೋಪ ಕೇಳಿಬಂದಿತ್ತು :
ಆಂಧ್ರ ಪ್ರದೇಶದ ಹಿಂದಿನ ವೈ.ಎಸ್.ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ, ತಿರುಪತಿ ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿ ಹಲವು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತಹ ವಿದ್ಯಮಾನಗಳು ನಡೆದಿತ್ತು ಎಂದು ಸುದ್ದಿಯಾಗುತ್ತಿದ್ದವು. ಲಡ್ಡು ತಯಾರಿಕೆಯ ಗುತ್ತಿಗೆಯನ್ನು ಹಿಂದೂಯೇತರರಿಗೆ ನೀಡಲಾಗಿತ್ತು, ತಿರುಮಲ ಬೆಟ್ಟದಲ್ಲಿ ಅನ್ಯ ಕೋಮಿನ ಧರ್ಮ ಪ್ರಚಾರ ವ್ಯವಸ್ಥಿತವಾಗಿ ನಡೆಯುತ್ತಿತ್ತು. ಇದಕ್ಕೆಲ್ಲಾ, ನೇರ ಕಾರಣ ಅಂದಿನ ಸಿಎಂ ಆಗಿದ್ದ ವೈ.ಎಸ್.ಜಗನ್ ಎನ್ನುವ ಆಪಾದನೆ ಬರುತ್ತಿತ್ತು.

