ಗದಗ, ಫೆ.22: ಸರ್ಕಾರಿ ಕಾಮಗಾರಿಯೊಂದರ ಸಂಬಂಧ ಲಂಚ ಸ್ವೀಕರಿಸುವ ವೇಳೆ ಡಾ. ಚಂದ್ರು ಲಮಾಣಿ ಬಂಧನಕ್ಕೊಳಗಾದ ಪ್ರಕರಣ ಇದೀಗ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ. ಪ್ರಕರಣದ ಬೆನ್ನಲ್ಲೇ ಶಾಸಕ ಹಾಗೂ ಗುತ್ತಿಗೆದಾರನ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕಮಿಷನ್ ವಿಚಾರವಾಗಿ ಶಾಸಕ ಚಂದ್ರು ಲಮಾಣಿ ಅವರು ಗುತ್ತಿಗೆದಾರನಿಗೆ ಗರಂ ಆಗಿ ಮಾತನಾಡಿರುವ 48 ಸೆಕೆಂಡ್ಗಳ ಆಡಿಯೋ ಬಹಿರಂಗವಾಗಿದೆ.
ಆಡಿಯೋದಲ್ಲಿ “ಪ್ರೀತಿ ವಿಶ್ವಾಸದಿಂದ ಹೇಳಿದ್ರೆ ಹೀಗೆಲ್ಲ ನಾಟಕ ಮಾಡ್ತೀಯಾ? ನಮ್ಮ ತಾಲೂಕಿನಲ್ಲಿ ಮಾಡಿದ್ರೆ ಸೊಂಟ ಮುರಿಸ್ತೀನಿ” ಎಂದು ಶಾಸಕ ಗುತ್ತಿಗೆದಾರನಿಗೆ ಎಚ್ಚರಿಕೆ ನೀಡಿರುವುದು ಕೇಳಿಬರುತ್ತಿದೆ. ಇದಕ್ಕೆ ಪ್ರತಿಯಾಗಿ ಗುತ್ತಿಗೆದಾರ “ಸರ್, ಇದೊಂದು ಸಾರಿ ತಪ್ಪಾಗಿದೆ” ಎಂದು ಸ್ಪಷ್ಟನೆ ನೀಡಲು ಯತ್ನಿಸಿರುವುದು ತಿಳಿದುಬಂದಿದೆ.
ಲಕ್ಷ್ಮೇಶ್ವರದಲ್ಲಿ ಹೈಡ್ರಾಮಾ :
5 ಲಕ್ಷ ರೂ. ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದಿದ್ದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿ ಕರೆತರುತ್ತಿದ್ದ ವೇಳೆ ಲಕ್ಷ್ಮೇಶ್ವರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
ಲೋಕಾಯುಕ್ತ ಅಧಿಕಾರಿಗಳು ಶಾಸಕರನ್ನು ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ, ಬೆಂಬಲಿಗರು ವಾಹನವನ್ನು ಅಡ್ಡಗಟ್ಟಿ ತಡೆಯಲು ಯತ್ನಿಸಿದರು. ಕೆಲಕಾಲ ಅಲ್ಲಲ್ಲಿ ತೀವ್ರ ಹೈಡ್ರಾಮಾ ನಡೆಯಿತು. ಬೆಂಬಲಿಗರು ಘೋಷಣೆಗಳನ್ನು ಕೂಗಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪರಿಸ್ಥಿತಿ ನಿಯಂತ್ರಣ ತಪ್ಪುವ ಸೂಚನೆ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ, ಬೆಂಬಲಿಗರನ್ನು ತೆರವುಗೊಳಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಬಳಿಕ ಶಾಸಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.
ಈ ವೇಳೆ ಮಾಧ್ಯಮ ಪ್ರತಿನಿಧಿಗಳು ಶಾಸಕ ಚಂದ್ರು ಲಮಾಣಿ ಅವರ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದರು. ಆದರೆ ಅವರು ಯಾವುದೇ ಹೇಳಿಕೆ ನೀಡದೆ ಮೌನವಾಗಿದ್ದರು.ಪ್ರಕರಣದ ಕುರಿತು ಲೋಕಾಯುಕ್ತ ಅಧಿಕಾರಿಗಳ ತನಿಖೆ ಮುಂದುವರಿದಿದ್ದು, ಮುಂದಿನ ಕಾನೂನು ಕ್ರಮಗಳ ಬಗ್ಗೆ ನಿರೀಕ್ಷೆ ವ್ಯಕ್ತವಾಗಿದೆ.

