ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಿಂದ ಮರದ ತುಂಡು ಬಿದ್ದು 10ನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟಿರುವ ದಾರುಣ ಘಟನೆ ವಿ.ವಿ.ಪುರಂ ಠಾಣಾ ವ್ಯಾಪ್ತಿಯಲ್ಲಿಶನಿವಾರ ನಡೆದಿದೆ.
ಕೆಂಪೇಗೌಡ ನಗರದ ಸುಧಾಕರ್ ರಾವ್ ಹಾಗೂ ಧನಲಕ್ಷ್ಮೇ ದಂಪತಿ ಪುತ್ರಿ ತೇಜಸ್ವಿನಿ (15) ಮೃತ ದುರ್ದೈವಿ. ತೇಜಸ್ವಿನಿ ವಿ.ವಿ.ಪುರಂನ ವಾಸವಿ ವಿದ್ಯಾನಿಕೇತನ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದಳು.
ಶಾಲೆ ಮುಗಿಸಿಕೊಂಡು ಶನಿವಾರ ಮಧ್ಯಾಹ್ನ 1.30ರ ಸುಮಾರಿಗೆ ನ್ಯಾಷನಲ್ ಹೈಸ್ಕೂಲ್ ರಸ್ತೆಯಲ್ಲಿ ನಡೆದುಕೊಂಡು ಮನೆಗೆ ವಾಪಸ್ಸಾಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ರಸ್ತೆ ಬದಿಯ ನಿರ್ಮಾಣ ಹಂತದ 6 ಅಂತಸ್ತಿನ ಕಟ್ಟಡದ ಮೇಲಿಂದ ಮರದ ತುಂಡು ತೇಜಸ್ವಿನ ತಲೆ ಮೇಲೆ ಬಿದ್ದಿದೆ.ಮರದ ಕಂಬ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ತೇಜಸ್ವಿನಿಯನ್ನು ಸ್ಥಳೀಯರು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ತೇಜಸ್ವಿನಿ ಆಸ್ಪತ್ರೆಯಲ್ಲಿಕೊನೆಯುಸಿರೆಳೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪ್ಪಟ ಅಪ್ಪು ಅಭಿಮಾನಿ :
ತೇಜಸ್ವಿನಿ ಪುನೀತ್ ರಾಜ್ ಕುಮಾರ್ ಅಪ್ಪಟ ಅಭಿಮಾನಿಯಾಗಿದ್ದಳು. ಆದರೆ ವಿಧಿಯಾಟ ಡ್ಯಾನ್ಸರ್ ಕನಸಿಗೆ ಕೊಳ್ಳಿ ಇಟ್ಟಿದೆ. ಮಗಳನ್ನು ಕಳೆದುಕೊಂಡ ಹೆತ್ತವರ ಕಣ್ಣೀರಿಡುತ್ತಿದ್ದಾರೆ.