ನವದೆಹಲಿ, ಜ.31: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸಕ್ತ 2026–27ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಸಿದ್ಧರಾಗಿದ್ದು, ಸತತ ಒಂಬತ್ತನೇ ಬಾರಿಗೆ ಬಜೆಟ್ ಮಂಡಿಸಿದ ಭಾರತದ ಮೊದಲ ಹಣಕಾಸು ಸಚಿವೆ ಎಂಬ ಐತಿಹಾಸಿಕ ಕೀರ್ತಿಗೆ ಭಾಜನರಾಗಲಿದ್ದಾರೆ. ಈ ಮೂಲಕ ಅವರು ದೇಶದ ರಾಜಕೀಯ–ಆರ್ಥಿಕ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಿದ್ದಾರೆ.
ಸತತ 9ನೇ ಬಾರಿಗೆ ಬಜೆಟ್ ಮಂಡಿಸುವ ಸಾಧನೆಯೊಂದಿಗೆ, ನಿರ್ಮಲಾ ಸೀತಾರಾಮನ್ ಅವರು ಮಾಜಿ ಪ್ರಧಾನಿ ಮೋರಾರ್ಜಿ ದೇಸಾಯಿ ಅವರ ದಾಖಲೆಯ ಹತ್ತಿರಕ್ಕೆ ತಲುಪುತ್ತಿದ್ದಾರೆ. ಮೋರಾರ್ಜಿ ದೇಸಾಯಿ ಅವರು 1959–1964 ಹಾಗೂ 1967–1969ರ ಅವಧಿಯಲ್ಲಿ ಒಟ್ಟು 10 ಬಾರಿ ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದಾರೆ. ಸೀತಾರಾಮನ್ ಅವರ ಈ ಬಜೆಟ್ ಮಂಡನೆ ಆ ಸಾರ್ವಕಾಲಿಕ ದಾಖಲೆಗೆ ಇನ್ನಷ್ಟು ಸಮೀಪಿಸುವುದಾಗಿ ಪರಿಣಮಿಸಿದೆ.
ಮಾಜಿ ಹಣಕಾಸು ಸಚಿವರಾದ ಪಿ. ಚಿದಂಬರಂ ಮತ್ತು ಪ್ರಣಬ್ ಮುಖರ್ಜಿ ಅವರು ವಿವಿಧ ಪ್ರಧಾನಮಂತ್ರಿಗಳ ಅವಧಿಯಲ್ಲಿ ಕ್ರಮವಾಗಿ ಎಂಟು ಹಾಗೂ ಒಂಬತ್ತು ಬಜೆಟ್ಗಳನ್ನು ಮಂಡಿಸಿದ್ದರೂ, ಸತತವಾಗಿ ಈ ಸಾಧನೆ ಮಾಡಿದ ಮೊದಲ ಮಹಿಳಾ ಸಚಿವರಾಗಿ ಸೀತಾರಾಮನ್ ವಿಶೇಷ ಸ್ಥಾನ ಪಡೆದಿದ್ದಾರೆ.
2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ, ನಿರ್ಮಲಾ ಸೀತಾರಾಮನ್ ಅವರನ್ನು ಭಾರತದ ಮೊದಲ ಪೂರ್ಣಾವಧಿಯ ಮಹಿಳಾ ಹಣಕಾಸು ಸಚಿವೆಯಾಗಿ ನೇಮಿಸಲಾಯಿತು. 2024ರಲ್ಲಿ ಮೋದಿ ಸರ್ಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೂ, ಹಣಕಾಸು ಖಾತೆಯನ್ನು ಅವರಿಗೇ ಒಪ್ಪಿಸಲಾಗಿದ್ದು, ನಿರಂತರವಾಗಿ ಈ ಮಹತ್ವದ ಜವಾಬ್ದಾರಿಯನ್ನು ಅವರು ನಿರ್ವಹಿಸುತ್ತಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು 2019ರ ಮೇ 31ರಂದು ಕೇಂದ್ರ ಹಣಕಾಸು ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು. ಕೋವಿಡ್-19 ಸಾಂಕ್ರಾಮಿಕ, ಜಾಗತಿಕ ಆರ್ಥಿಕ ಬಿಕ್ಕಟ್ಟುಗಳು ಸೇರಿದಂತೆ ಹಲವು ಸವಾಲಿನ ಸಂದರ್ಭಗಳಲ್ಲಿ ದೇಶದ ಆರ್ಥಿಕತೆಯನ್ನು ಮುನ್ನಡೆಸಿದ ಅವರಿಗೆ, ಅವರ ಅವಧಿಯಲ್ಲಿ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಅರ್ಥವ್ಯವಸ್ಥೆಗಳಲ್ಲಿ ಒಂದಾಗಿದೆ ಎಂಬ ಹೆಗ್ಗಳಿಕೆ ಲಭಿಸಿದೆ.
ಸಾಮಾನ್ಯವಾಗಿ ಕೇಂದ್ರ ಹಣಕಾಸು ಸಚಿವರು ಪ್ರತಿ ವರ್ಷ ಫೆಬ್ರವರಿ 1ರಂದು ಬಜೆಟ್ ಮಂಡಿಸುತ್ತಾರೆ, ಆದರೆ ಈ ಪದ್ಧತಿ ಸದಾ ಹಾಗಿರಲಿಲ್ಲ. 2016ರ ವರೆಗೆ ಬ್ರಿಟಿಷ್ ಕಾಲದ ಸಂಪ್ರದಾಯದಂತೆ ಫೆಬ್ರವರಿ ಕೊನೆಯ ದಿನ ಬಜೆಟ್ ಮಂಡಿಸಲಾಗುತ್ತಿತ್ತು. ಆದರೆ ಹಣಕಾಸು ವರ್ಷ ಏಪ್ರಿಲ್ 1ರಿಂದ ಆರಂಭವಾಗುವುದರಿಂದ, ಹೊಸ ನೀತಿಗಳು ಮತ್ತು ತೆರಿಗೆ ನಿಯಮಗಳನ್ನು ಜಾರಿಗೆ ತರುವುದಕ್ಕೆ ಸಮಯದ ಕೊರತೆ ಎದುರಾಗುತ್ತಿತ್ತು.
ಬಜೆಟ್ ಅನುಮೋದನೆ ಪ್ರಕ್ರಿಯೆ ಪೂರ್ಣಗೊಳ್ಳುವಷ್ಟರಲ್ಲಿ ಹೊಸ ಹಣಕಾಸು ವರ್ಷ ಆರಂಭವಾಗುತ್ತಿದ್ದುದರಿಂದ, ಹಲವು ಸರ್ಕಾರಿ ಯೋಜನೆಗಳು ವಿಳಂಬವಾಗುತ್ತಿದ್ದರು. ಈ ಹಿನ್ನೆಲೆ, 2017ರಲ್ಲಿ ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮೊದಲ ಬಾರಿಗೆ ಫೆಬ್ರವರಿ 1ರಂದು ಬಜೆಟ್ ಮಂಡಿಸಿದರು. ಹೊಸ ಹಣಕಾಸು ವರ್ಷಕ್ಕೆ ಮುನ್ನ ಎಲ್ಲರಿಗೂ ಸಮರ್ಪಕ ಯೋಜನೆ ರೂಪಿಸಲು ಅವಕಾಶ ನೀಡುವುದು ಇದರ ಮುಖ್ಯ ಉದ್ದೇಶವಾಗಿತ್ತು.
ಇದೇ ವೇಳೆ, ವಸಾಹತುಶಾಹಿ ಯುಗದಿಂದ ನಡೆದು ಬಂದ ಬಜೆಟ್ ಮಂಡನೆಯ ಸಮಯವನ್ನೂ ಬದಲಾಯಿಸಲಾಯಿತು. 1999ರ ವರೆಗೆ ಸಂಜೆ 5 ಗಂಟೆಗೆ ಬಜೆಟ್ ಮಂಡಿಸುವ ಪದ್ಧತಿ ಇತ್ತು. ಹೆಚ್ಚಿನ ಮಾಧ್ಯಮ ಪ್ರಸಾರ ಹಾಗೂ ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ, ಆಗಿನ ಹಣಕಾಸು ಸಚಿವ ಯಶವಂತ್ ಸಿನ್ಹಾ ಅವರು ಬಜೆಟ್ ಮಂಡನೆಯ ಸಮಯವನ್ನು ಬೆಳಿಗ್ಗೆ 11 ಗಂಟೆಗೆ ಸ್ಥಳಾಂತರಿಸಿದರು

