ಚೆನ್ನೈ: ಚೆನ್ನೈನ ಸವೀತಾ ವೈದ್ಯಕೀಯ ಕಾಲೇಜಿನ 39 ವರ್ಷದ ಹೃದಯ ಶಸ್ತ್ರಚಿಕಿತ್ಸಕ ಡಾ. ಗ್ರಾಡ್ಲಿನ್ ರಾಯ್ ಆಸ್ಪತ್ರೆಯಲ್ಲಿ ರೌಂಡ್ಸ್ ವೇಳೆ ಹೃದಯಾಘಾತದಿಂದ ಕುಸಿದು ಮೃತಪಟ್ಟ ಘಟನೆ ನಡೆದಿದೆ. ಈ ಘಟನೆ ಯುವ ವೈದ್ಯರ ಜೀವನ ಶೈಲಿ ಹಾಗೂ ಆರೋಗ್ಯದ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟಿಹಾಕಿದೆ.
ತಮ್ಮ ಸಹೋದ್ಯೋಗಿ ನಿಧನ ಬಗ್ಗೆ ಎಕ್ಸ್ನಲ್ಲಿ ಬರೆದುಕೊಂಡಿರುವ ಹೈದರಾಬಾದ್ನ ನರವಿಜ್ಞಾನಿ ಡಾ. ಸುಧೀರ್ ಕುಮಾರ್, “ಡಾ. ರಾಯ್ ಅವರ ಸಹೋದ್ಯೋಗಿಗಳು ಅವರನ್ನು ಉಳಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಿದ್ದರು. ಸಿಪಿಆರ್, ತುರ್ತು ಆಂಜಿಯೋಪ್ಲಾಸ್ಟಿ, ಸ್ಟೆಂಟಿಂಗ್, ಇಂಟ್ರಾ-ಏಯಾರ್ಟಿಕ್ ಬಲೂನ್ ಪಂಪ್, ಇಸಿಎಂಒ ಸೇರಿದಂತೆ ಎಲ್ಲ ಚಿಕಿತ್ಸೆಯನ್ನೂ ನೀಡಲಾಯಿತು, ಆದರೂ ಎಡಗಡೆ ಮುಖ್ಯ ಧಮನಿಯ ಕಂಪ್ಲೀಟ್ ಬ್ಲಾಕ್ ಆಗಿದ್ದರಿಂದಾಗಿ ಭಾರಿ ಹೃದಯ ಸ್ತಂಭನದಿಂದ ಅವರು ಸಾವಿಗೀಡಾಗಿದ್ದಾರೆ’.
ಡಾ. ರಾಯ್ಗೆ ಪತ್ನಿ ಮತ್ತು ಒಬ್ಬ ಚಿಕ್ಕ ಮಗನಿದ್ದು, ಎಂದು ಮರುಕಪಟ್ಟಿದ್ದು, ಡಾ. ರಾಯ್ ಅವರ ಸಾವು ಮಾತ್ರವಲ್ಲ, 30 ಮತ್ತು 40ರ ಹರೆಯದ ಯುವ ವೈದ್ಯರಲ್ಲಿ ಹೃದಯಾಘಾತದಿಂದ ಬಳಲುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ತಜ್ಞರ ಪ್ರಕಾರ, ದೀರ್ಘ ಕೆಲಸದ ಸಮಯವು ಇಂತಹ ಸಾವುಗಳ ಪ್ರಮುಖ ಕಾರಣವಾಗಿದೆ. ವೈದ್ಯರು ದಿನಕ್ಕೆ 12-18 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ, ಕೆಲವೊಮ್ಮೆ ಒಂದೇ ಶಿಫ್ಟ್ನಲ್ಲಿ 24 ಗಂಟೆಗಳಿಗಿಂತಲೂ ಹೆಚ್ಚು ಕೆಲಸ ಮಾಡುತ್ತಾರೆ. ಜೀವ-ಮರಣದ ನಿರ್ಧಾರಗಳ ಒತ್ತಡ, ರೋಗಿಗಳ ಆಕಾಂಕ್ಷೆಗಳು ಮತ್ತು ವೈದ್ಯಕೀಯ-ಕಾನೂನು ಕಾಳಜಿಗಳು ಮಾನಸಿಕ ಒತ್ತಡವನ್ನು ಉಂಟುಮಾಡುತ್ತವೆ.

