ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಡೆದ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಘಟನೆ ಸಂಭವಿಸಿದ ತಕ್ಷಣ 112ಕ್ಕೆ ದೂರು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಲ್ಲು ತೂರಾಟದ ವೇಳೆ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು, ಅವರು 16-17 ವರ್ಷದವರಾಗಿದ್ದಾರೆ ಎನ್ನಲಾಗಿದೆ. ಆರೋಪಿಗಳ ಪರವಾಗಿ ಕೆಲವರು ಪೊಲೀಸ್ ಠಾಣೆಗೆ ಆಗಮಿಸಿ ಸಮರ್ಥನೆ ನೀಡಲು ಪ್ರಯತ್ನಿಸಿರುವುದಾಗಿ ರವಿ ಆರೋಪಿಸಿದರು.
“ಚಿಕ್ಕಮಗಳೂರಿನಲ್ಲಿ ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಆತಂಕಕಾರಿ. ಕ್ಷೇತ್ರದ ಜನರು ಭಯಭೀತರಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಘಟನೆ ಹಿಂದೆ ಯಾವ ಉದ್ದೇಶ ಇದೆ ಎಂಬುದನ್ನು ಪತ್ತೆಹಚ್ಚಬೇಕು. ಒಂದೇ ಮನೆಗೆ ಗುರಿಯಾಗಿ ಕಲ್ಲು ತೂರಾಟ ಮಾಡಿರುವುದು ಏಕೆ ಎಂಬುದರ ಕುರಿತು ಸೂಕ್ತ ತನಿಖೆ ನಡೆಯಬೇಕು,” ಎಂದು ಅವರು ಒತ್ತಾಯಿಸಿದರು.
RSS ರಿಜಿಸ್ಟರ್ ವಿಚಾರ: ಪ್ರಿಯಾಂಕ್ ಖರ್ಗೆ ವಿರುದ್ಧ ರವಿ ವಾಗ್ದಾಳಿ
RSS ಅನ್ನು ರಿಜಿಸ್ಟರ್ ಮಾಡಿಸುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, “ಪ್ರಿಯಾಂಕ್ ಖರ್ಗೆ ಅವರಿಗೆ RSS ಸಿಂಡ್ರೋಮ್ ವೈರಸ್ ಅಟ್ಯಾಕ್ ಆಗಿದೆ. ಸಾಂಸ್ಕೃತಿಕ ಮಾರ್ಕ್ಸ್ ವಾದದ ಪ್ರಭಾವದಿಂದ ಸಂಘರ್ಷದ ರಾಜಕೀಯ ನಡೆಸಲಾಗುತ್ತಿದೆ,” ಎಂದು ಟೀಕಿಸಿದರು.
“ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಗೆ ಮಹಾತ್ಮಾ ಗಾಂಧೀಜಿ ಭೇಟಿ ನೀಡಿದ್ದರು. ಜಾತಿ ಭೇದವಿಲ್ಲದ ಸಂಘಟನೆಯಾಗಿ ಶ್ಲಾಘಿಸಿದ್ದರು. ಡಾ. ಬಿ.ಆರ್. ಅಂಬೇಡ್ಕರ್, ರತನ್ ಟಾಟಾ ಸೇರಿದಂತೆ ಅನೇಕ ಗಣ್ಯರು ಸಂಘದ ಕಾರ್ಯವನ್ನು ಮೆಚ್ಚಿದ್ದಾರೆ. ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಕೂಡ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು,” ಎಂದು ಹೇಳಿದರು.
“RSS ಹಿಂದೂಗಳನ್ನು ಸಂಘಟಿಸುವ ಕೆಲಸ ಮಾಡುತ್ತಿದೆ. ಅದರ ಪ್ರೇರಣೆಯಿಂದ ಹಲವು ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ರಾಷ್ಟ್ರೋತ್ತಾನ, ಸಕ್ಷಮ, ವಿದ್ಯಾಭಾರತಿ ಸೇರಿದಂತೆ ಅನೇಕ ಸಂಘಟನೆಗಳು ನೋಂದಾಯಿತವಾಗಿವೆ. ಸಂಘದ ಆಂತರಿಕ ಚಟುವಟಿಕೆಗಳಿಗೆ ‘ಗುರು ಕಾಣಿಕೆ’ ಸಮರ್ಪಿಸಲಾಗುತ್ತದೆ. 100 ರೂಪಾಯಿಗಿಂತ ಹೆಚ್ಚಿನ ದೇಣಿಗೆ ಚೆಕ್ ಮೂಲಕ ಸ್ವೀಕರಿಸುವ ವ್ಯವಸ್ಥೆ ಇದೆ. ಸರ್ಕಾರದ ಅನುದಾನಕ್ಕೆ ಸಂಘ ಕೈಚಾಚಿಲ್ಲ,” ಎಂದು ವಿವರಿಸಿದರು.
“ಹಿಂದೂ ಅನ್ನೋ ಪದ ರಿಜಿಸ್ಟರ್ ಆಗಿದೆಯೇ? RSS ಶಾಖೆ ನಡೆಸುತ್ತದೆ. ಅದರ ಪ್ರೇರಣೆಯಿಂದ ಬಂದ ಸಂಘಟನೆಗಳು ನೋಂದಾಯಿತವಾಗಿವೆ. ರಾಷ್ಟ್ರಭಕ್ತಿ ಮತ್ತು ಸೇವೆಯನ್ನೇ ನೀವು ವಿರೋಧಿಸುತ್ತೀರಾ?” ಎಂದು ಪ್ರಶ್ನಿಸಿದರು.
ಜಾತಿ ರಾಜಕೀಯ ದೂರವಾಗಿ, ಎಲ್ಲರೂ ಒಂದೇ ಎಂಬ ಭಾವನೆ ಬೆಳೆಬೇಕು. ಸ್ವದೇಶಿ ಮೂಲಕ ಸ್ವಾವಲಂಬನೆ ಸಾಧಿಸಬೇಕು. RSS ದೇವರ ಮತ್ತು ರಾಷ್ಟ್ರಭಕ್ತರ ಕೆಲಸ ಮಾಡುತ್ತಿದೆ ಎಂದು ಸಿ.ಟಿ. ರವಿ ಅಭಿಪ್ರಾಯಪಟ್ಟರು.

