Siddaramaiah : ಬಿಹಾರದಲ್ಲಿಯೂ ವೋಟ್ ಚೋರಿ ಆಗಿದೆ. ಆದರೆ ಜನರ ತೀರ್ಪನ್ನು ನಾವು ಒಪ್ಪಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಗರದಲ್ಲಿ ಬಿಹಾರ ಚುನಾವಣೆ ಫಲಿತಾಂಶದ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಯಾಕೆ ಹಿನ್ನಡೆ ಆಗಿದೆ ಗೊತ್ತಿಲ್ಲ, ನಾನು ಇನ್ನೂ ನೋಡಿಲ್ಲ, ಸರಿಯಾಗಿ ಮಾಹಿತಿ ಪಡೆದು ಮತ್ತೆ ಮಾತಾಡ್ತೀನಿ. ಯಾಕೆ ಜನ ವೋಟ್ ಹಾಕಿಲ್ಲ, ಎನ್ಡಿಎ ಯಾಕೆ ಇಷ್ಟು ದೊಡ್ಡ ಬಹುಮತದಲ್ಲಿದೆ ಎನ್ನೋದು ಗೊತ್ತಿಲ್ಲ. ಇಲ್ಲೂ ವೋಟ್ ಚೋರಿ ಆಗಿದೆ. ಆದರೆ ನಾವು ಜನರ ತೀರ್ಪು ಒಪ್ಪಿಕೊಳ್ಳಬೇಕು” ಎಂದು ಹೇಳಿದರು.
ಕಬ್ಬು ಗಲಾಟೆ : ರೈತರು 3,300 ರೂ. ಕಬ್ಬು ರೇಟ್ ಪಡೆಯೋಕೆ ಒಪ್ಪಿದ್ದಾರೆ
ಮುಧೋಳದಲ್ಲಿ ಕಬ್ಬು ಗಲಾಟೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬೇರೆ ಎಲ್ಲಾ ರೈತರು 3,300 ರೂ. ಕಬ್ಬು ರೇಟ್ ಪಡೆಯೋಕೆ ಒಪ್ಪಿಕೊಂಡಿದ್ದಾರೆ. ಆದರೆ ಮುಧೋಳ ರೈತರು ಮಾತ್ರ ಒಪ್ಪಿಕೊಂಡಿಲ್ಲ. ಅವರ ಜೊತೆಗೂ ಮಾತುಕತೆ ನಡೆಯುತ್ತಿದೆ.
ಯಾರು ಕಬ್ಬು, ಟ್ರ್ಯಾಕ್ಟರ್, ಟ್ರಾಲಿಗಳನ್ನ ಸುಟ್ಟಿ ಹಾಕಿದ್ದಾರೆ ಅಂತ ವಿಚಾರಣೆ ಮಾಡಿಸೋಣ. ರೈತರು ನಾವು ಸುಟ್ಟಿಲ್ಲ ಅಂತ ಹೇಳ್ತಿದ್ದಾರೆ. ಅದಕ್ಕಾಗಿಯೇ ವಿಚಾರಣೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ತೀವಿ” ಎಂದರು.
“ರೈತರ ಹೋರಾಟದ ಹಿಂದೆ ರಾಜಕೀಯ ಪ್ರಚೋದನೆ ಇದ್ದೇ ಇರುತ್ತದೆ. ಬಿಜೆಪಿ ಅವರಿಗೆ ಬೇರೆ ಏನು ಕೆಲಸ ಇಲ್ಲ. ಹೀಗಾಗಿ ಎಲ್ಲದಕ್ಕೂ ಪ್ರಚೋದನೆ ಮಾಡಿಸುತ್ತಾರೆ” ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಗೆ ಗಾಂಧಿ ಹಾಗೂ ನೆಹರು ಅವರನ್ನು ತೆಗಳುವುದೇ ಕೆಲಸ
ಜವಾಹರಲಾಲ್ ನೆಹರು ಜನ್ಮದಿನದ ಅಂಗವಾಗಿ ವಿಧಾನಸೌಧದಲ್ಲಿರುವ ನೆಹರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಗೆ ಗಾಂಧಿ ಹಾಗೂ ನೆಹರು ಅವರನ್ನು ತೆಗಳುವುದೇ ಕೆಲಸ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ದೇಶದ ಮೊದಲ ಪ್ರಧಾನಮಂತ್ರಿ ಜವಾಹರ್ಲಾಲ್ ನೆಹರು ಅವರ ಜನ್ಮದಿನದಂದೇ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮಕ್ಕಳನ್ನು ಕಂಡರೆ ಬಹಳ ಪ್ರೀತಿಯಿದ್ದ ಅವರು ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳು ಎಂದು ಅರ್ಥೈಸಿಕೊಂಡಿದ್ದರು. ಆದ್ದರಿಂದ ಚಾಚಾ ನೆಹರು ಎಂದೇ ಅವರನ್ನು ಕರೆಯಲಾಗುತ್ತಿತ್ತು. ಆದರೆ ಇಂದಿನ ಬಿಜೆಪಿಯವರಿಗೆ ಗಾಂಧಿ ಹಾಗೂ ನೆಹರು ಅವರನ್ನು ತೆಗಳುವುದೇ ಕೆಲಸವಾಗಿದೆ ಎಂದರು.
ಬಿಜೆಪಿಗೆ ಗಾಂಧಿ ಹಾಗೂ ನೆಹರು ಅವರನ್ನು ತೆಗಳುವುದೇ ಕೆಲಸ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯ ಪಾತ್ರವೇ ಇಲ್ಲ. ಮಹಾತ್ಮ ಗಾಂಧಿ, ನೆಹರು ಅವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು. ಅವರನ್ನು ತೆಗಳಿ, ಇಲ್ಲದ ಆರೋಪಗಳನ್ನು ಹೊರಿಸುವುದೇ ಅವರ ಕೆಲಸ. ನರೇಂದ್ರ ಮೋದಿ, ಬಿಜೆಪಿ, ಆರ್ಎಸ್ಎಸ್ನವರು ಗಾಂಧಿ ಮತ್ತು ನೆಹರು ಅವರನ್ನು ಹೀಯಾಳಿಸುವುದನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ ಅಂತ ಕಿಡಿಕಾರಿದರು.

