ಹೆಬ್ರಿ : ಆರ್ಸಿಬಿ ಸಂಭ್ರಮಾಚರಣೆಯಲ್ಲಿ ಮೃತಪಟ್ಟಿದ್ದ ಚಿನ್ಮಯಿ ಶೆಟ್ಟಿ (19) ಕುಟುಂಬಕ್ಕೆ ಜೂ. 10ರಂದು ಸರಕಾರ ಪರಿಹಾರದ ಚೆಕ್ ಹಸ್ತಾಂತರ ಮಾಡಿದೆ. ಉಡುಪಿ ಜಿಲ್ಲಾಧಿಕಾರಿ ಹೆಬ್ರಿ ತಾಲೂಕಿನ ಕುಚ್ಚೂರು ರಸ್ತೆಯಲ್ಲಿರುವ ಚಿನ್ಮಯಿ ಶೆಟ್ಟಿ ಅವರ ನಿವಾಸಕ್ಕೆ ತೆರಳಿ ಪರಿಹಾರ ಚೆಕ್ ನೀಡಿದ್ದಾರೆ.
ಚಿನ್ಮಯಿ ಶೆಟ್ಟಿ ಕುಟುಂಬ ಬೆಂಗಳೂರಿನ ತಿಪ್ಪಸಂದ್ರದಲ್ಲಿ ವಾಸವಿತ್ತು. ಅವರ ತಾಯಿಯ ಹಿರಿಯರ ಮನೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕುಚ್ಚೂರಿನಲ್ಲಿದೆ. ಇದೀಗ ಮೃತಳ ತಾಯಿ ಶಾಂತ ಶೆಟ್ಟಿ ಹಾಗೂ ತಂದೆ ಕರುಣಾಕರ ಶೆಟ್ಟಿ ಕುಚ್ಚೂರಿನಲ್ಲಿರುವುದರಿಂದ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಇಂದು ಸರಕಾರದ ಸೂಚನೆಯಂತೆ ಮನೆಗೆ ಭೇಟಿ ನೀಡಿ 25 ಲಕ್ಷದ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಎ.ಸಿ. ರಶ್ಮಿ ಉಪಸ್ಥಿತರಿದ್ದರು.
ಮೃತ ಚಿನ್ಮಯಿ ಶೆಟ್ಟಿ ಬೆಂಗಳೂರಿನ ಜ್ಯೋತಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದರು. ಯಕ್ಷಗಾನ, ಭರತನಾಟ್ಯ, ಫಿಲ್ಮಂ ಡ್ಯಾನ್ಸ್ನಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಚಿನ್ಮಯಿ ಬಾಸ್ಕೆಟ್ ಬಾಲ್ ಕ್ರೀಡಾಪಟುವಾಗಿದ್ದರು.