ದೇಶದಲ್ಲಿ ಉಗ್ರ ತಾಂಡವಾಡ್ತಿದೆ ಭ್ರಷ್ಟಾಚಾರ!
ಹಳ್ಳಿಯಿಂದ ದಿಲ್ಲಿವರೆಗೆ ಕರಪ್ಶನ್ ನರ್ತನ!
ಎಲ್ಲಾ ಕಡೆ ಭ್ರಷ್ಟಾಚಾರ ಕ್ಯಾನ್ಸರ್ ನಂತೆ ಹರಡಿಬಿಟ್ಟಿದೆ
ತನ್ನ ಕರಾಳ ಹಸ್ತವನ್ನು ಚಾಚದ ಕ್ಷೇತ್ರವೇ ಇಲ್ಲ
ಭ್ರಷ್ಟಾಚಾರ.. ಭ್ರಷ್ಟಾಚಾರ.. ಭ್ರಷ್ಟಾಚಾರ.. ಇಡೀ ದೇಶವೇ ಕರಪ್ಶನ್ ಬಾಯಿಯಲ್ಲಿ ಮುಳುಗೇಳ್ತಿದೆ.. ಹಾಗಾದ್ರೆ ಇದಕ್ಕೆಲ್ಲಾ ಬ್ರೇಕ್ ಯಾವಾಗ.. ಜನರಾದ್ರೂ ಯಾವಾಗ ಎಚ್ಚೆತ್ತುಕೊಳ್ತಾರೆ ಅನ್ನೋದೆ ಯಕ್ಷ ಪ್ರಶ್ನೆ..
ಭ್ರಷ್ಟಾಚಾರ ಎಲ್ಲಿ ಇಲ್ಲಾ ಹೇಳಿ? ಎಲ್ಲಾ ಕಡೆ ಭ್ರಷ್ಟಾಚಾರ ಕ್ಯಾನ್ಸರ್ ನಂತೆ ಹರಡಿಬಿಟ್ಟಿದೆ. ಭ್ರಷ್ಟಾಚಾರದ ಭೂತ, ತನ್ನ ಕರಾಳ ಹಸ್ತವನ್ನು ಚಾಚದ ಕ್ಷೇತ್ರವೇ ಇಲ್ಲ. ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ, ಮನೆಯಿಂದ ಹಿಡಿದು ಮಂದಿರಗಳವರೆಗೆ, ಅನಕ್ಷರಸ್ಥರಿಂದ ಹಿಡಿದು ಅಕ್ಷರಸ್ಥರವರೆಗೆ, ಎಲ್ಲಾ ಕಡೆ ಲಂಚದ ಗೆದ್ದಲು ಹರಡಿಬಿಟ್ಟಿದೆ.
ಭ್ರಷ್ಟಾಚಾರ ಅಂದ್ರೆ ಏನು? ಅನ್ನುವ ಪ್ರಶ್ನೆ ಇಂದು, ನಿನ್ನೆಯದಲ್ಲ .. ಶತ, ಶತಮಾನಗಳಿಂದ ಈ ಪ್ರಶ್ನೆ ಬಂದ್ರೂ ಇನ್ನೂ ಈ ಪ್ರಶ್ನೆ ಚಿರ ಹೊಸತು. ನಮ್ಮ ಭಾರತ ದೇಶವನ್ನು ಭ್ರಷ್ಟಾಚಾರ ರಹಿತ ದೇಶ ವನ್ನಾಗಿ ಮಾಡೋದೆ ಭಾರತದ ಪ್ರತಿಯೊಬ್ಬ ನಾಗರಿಕನ ಬಯಕೆ. ಆದ್ರೆ ಏನ್ ಮಾಡೋದು ಒಗ್ಗಟ್ಟಿನಲ್ಲಿ ಬಲವಿದ್ರೆ ಮಾತ್ರ ಅದು ಸಾಧ್ಯ. ಇಲ್ಲವಾದ್ರೆ ಹೊಳೆಯಲ್ಲಿ ಹುಣಸೆಹಣ್ಣು ತೊಳೆದ ರೀತಿ ಆಗುತ್ತೆ..
ಭ್ರಷ್ಟಾಚಾರವನ್ನು ತಡೆಗಟ್ಟಲು ಎಷ್ಟೋ ಪ್ರಯತ್ನಗಳು ನಡೆದಿವೆ.. ಆದ್ರೆ ಫಲಿತಾಂಶ ಮಾತ್ರ ಸಿಕ್ಕಿಲ್ಲ.. ನಾವಿಂದು ಭ್ರಷ್ಟಾಚಾರ ಎಂದ್ರೆ ಕಚೇರಿಯಲ್ಲಿ ನಡೆಯುವ ಲಂಚ, ರಾಜಕಾರಣಿಗಳು ತಿನ್ನುವ ಲಂಚ, ಪುಢಾರಿಗಳ ಕೃತ್ಯ, ಕಳ್ಳತನ, ಸುಲಿಗೆ, ಕೊಲೆ ಇವೆಲ್ಲವನ್ನ ಪ್ರತಿ ದಿನ ನೋಡ್ತಾನೆ ಇದ್ದೇವೆ. ಆದ್ರೆ ಪ್ರಯೋಜನ ಏನ್ ಬಂತು.. ಯಾರೋ ತಿಂತಾರೆ.. ಮತ್ಯಾರೋ ಬಲಿಯಾಗ್ತಾರೆ ಅಂತ ಸುಮ್ಮನಾಗ್ತಿವಿ.. ಇದು ಸುಭದ್ರ ಸಮಾಜದ ಪರಿಸ್ಥಿತಿ..
ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿಯಂತ್ರಿಸೋದು ಕಷ್ಟ.. ಯಾಕಂದ್ರೆ ಇದು ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿದೆ. ಸಾಮಾನ್ಯ ಜನ್ರು ಇದಕ್ಕೆ ಎಷ್ಟು ಒಗ್ಗಿಕೊಂಡಿದ್ದಾರೆ ಅಂದ್ರೆ, ಇದು ಒಂದು ಸಮಸ್ಯೆ ಎಂದೇ ಅವರಿಗೆ ಅನ್ನಿಸೋದಿಲ್ಲ. ಉದಾಹರಣೆಗೆ ಚಾಲನಾ ಪರವಾನಗಿ ಪತ್ರ ಪಡೆಯುವಾಗ, ಭೂಮಿ ಪರಿವರ್ತನೆಗೊಳಿಸುವಾಗ ದಲ್ಲಾಳಿಗಳಿಗೆ “ಶುಲ್ಕ” ನೀಡುವುದು, ಇದು ಅಧಿಕಾರಿಗಳಿಗೆ, ನೌಕರರಿಗೆ ರಾಜಕಾರಣಿಗಳಿಗೆ ಲಂಚದ ರೂಪದಲ್ಲಿ ತಲುಪುವುದು, ಸಾಮಾನ್ಯವೆನಿಸಿಬಿಟ್ಟಿದೆ. ಹೀಗಾಗಿ ಭ್ರಷ್ಟಾಚಾರದಿಂದ ನೊಂದು ಬೇಸತ್ತು ಹೋಗಿದ್ದಾರೆ ಬಡಪಾಯಿಗಳು..
ಏನ್ ಮಾಡೋದು ಸ್ವಾಮಿ.. ನಮ್ಮ ಕೆಲ್ಸ ಆ್ಬೇಕು ಅಂದ್ರೆ ಝಣಝಣ ಕಾಂಚಾಣ ಎಣಿಸಲೇಬೇಕು.. ಇಲ್ಲವಾದ್ರೆ ನಮ್ಮ ಫೈಲ್ ಮೂ ಆಗೋದೇ ಇಲ್ಲ. ಒಂದ್ವೇಳೆ ಫೈಲ್ ಮೂ ಆಗಿಲ್ಲಂದ್ರೆ ನಮ್ಮ ಸಮಸ್ಯೆಗೆ ಪರಿಹಾರ ಸಿಗಲ್ಲ.. ಹಾಗಾಗಿ ಭ್ರಷ್ಟಕೋರರು ಎಷ್ಟೇ ಕೇಳಿದ್ರೂ ಕೊಟ್ಟುಬಿಡಬೇಕಾಗುತ್ತೆ.. ಅಂತ ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ..
ದಿನ ನಿತ್ಯದ ಜೀವನದಲ್ಲಿ ಬ್ರಷ್ಟಾಚಾರದ ಪ್ರಭಾವ ಎಷ್ಟಾಗಿದೆ ಎಂದ್ರೆ ಭ್ರಷ್ಟಾಚಾರ ಇಲ್ಲದ ಯಾವುದೇ ಒಂದು ಕ್ಷೇತ್ರವೂ ಸಿಗೋದಿಲ್ಲ.. ಯಾವಾಗ, ಖಾದಿ, ಖಾಕಿ, ಕಾವಿ, ಭ್ರಷ್ಟವಾಯಿತೋ ಅಂದೇ ಭ್ರಷ್ಟಾಚಾರ ನಿರ್ಮೂಲನೆ ಮಾಡಲಾಗದಷ್ಟು ಹಂತಕ್ಕೆ ಬೆಳೆದು ಬಿಟ್ಟಿದೆ. ಏನೇ ಆದ್ರೂ ನಮ್ಮ ನ್ಯಾಯಾಂಗ ವ್ಯವಸ್ಥೆ ತ್ವರಿತ ಗತಿಯಲ್ಲಿ ನ್ಯಾಯ ಒದಗಿಸುವಷ್ಟು ಬಲಿಷ್ಠವಾಗಿದ್ರೆ, ಭ್ರಷ್ಟಾಚಾರ ಒಂದು ಮಟ್ಟಿಗೆ ನಿಯಂತ್ರಣಕ್ಕೇ ತರಲು ಯೋಚಿಸಬಹುದಿತ್ತು… ಆದರೆ ನ್ಯಾಯಾಲಯದಲ್ಲಿ ಒಬ್ಬೊಬ್ಬರು ನ್ಯಾಯಕ್ಕಾಗಿ ಹೋಗಿ ಅಲ್ಲಿ ಅವರ ಒದ್ದಾಟ , ಕಾಯುವಿಕೆ, ಅವರ ಹತಾಶೆ ಭಾವನೆ, ವಕೀಲರಿಂದ ಸುಲಿಗೆ ಇವೆಲ್ಲ ನೋಡಿದರೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಅದು ಆಗದ ಮಾತು. ಒಟ್ನಲ್ಲಿ ಭೂಮಿ ಇರೋವರೆಗೂ ಭ್ರಷ್ಟಾಚರ ಅನ್ನೋ ಕಂಟಕ ಜನರಿಗೆ ತಪ್ಪಿದ್ದಲ್ಲ ಅನ್ನೋದಂತು ಸುಳ್ಳಲ್ಲ..

