ಬೆಂಗಳೂರು : ಬೆಂಗಳೂರಲ್ಲಿ ಹಸುಗಳ ಕೆಚ್ಚಲುಗಳನ್ನು ಕೊಯ್ದು ವಿರುತಿಮೇರೆದ ಪ್ರಕರಣ ಕುರಿತಂತೆ ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರಿಂದ ವರದಿ ಕೇಳಲಾಗಿದೆ. ವರದಿ ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮೂರು ಹಸುಗಳು ಕರ್ಣ ಎಂಬುವವರಿಗೆ ಸೇರಿದ್ದು. ಹಸುಗಳ ಕೆಚ್ಚಲನ್ನೇ ಕೊಯ್ದ ದುಷ್ಟರು ರಕ್ತದ ಕೋಡಿಯನ್ನೇ ಹರಿಸಿದ್ದಾರೆ. ರವಿವಾರ ಬೆಳ್ಳಂಬೆಳಗ್ಗೆ (ಜ.12) ಈ ಘಟನೆ ಬೆಳಕಿಗೆ ಬಂದಿದೆ. ಹಸುಗಳನ್ನು ಚಾಮರಾಜಪೇಟೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಸುಗಳು ಕರ್ಣ ಎಂಬುವವರಿಗೆ ಸೇರಿದ್ದು. ಒಟ್ಟು 8 ಹಸುಗಳನ್ನು ಕರ್ಣ ಅವರು ಸಾಕುತ್ತಿದ್ದು, ಇವುಗಳನ್ನು 3-4 ಹಸುಗಳು ಮನೆಯಿಂದ ಸ್ವಲ್ಪ ದೂರದಲ್ಲಿರುವ ರಸ್ತೆಯಲ್ಲಿ ಮಲಗಿದೆ. ತಡರಾತ್ರಿ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೆ.
ಈ ಬಗ್ಗೆ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳೀಯರಿಂದ ಮಾಹಿತಿ ಪಡೆದು, ಸಿಸಿಟಿವಿ ದೃಶ್ಯಗಳ ಪರಿಶೀಲನೆಯನ್ನು ಮಾಡಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, 20 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಹಾಗೂ ಹಿಂದೂ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬೆಂಗಳೂರು ಸಂಸದ ಪಿ.ಸಿ.ಮೋಹನ್ ಭೇಟಿ ನೀಡಿದ್ದು, ಚಿಕ್ಕಪೇಟೆ ಎಸಿಪಿ ರಮೇಶ್ ಕೂಡಾ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಹಸುಗಳ ಮಾಲೀಕ ಕರ್ಣ ಅವರು, ಕೂಡಲೇ ದುಷ್ಕೃತ್ಯ ಮೆರೆದವರ ಬಂಧನವಾಗಬೇಕು. ಇಲ್ಲ ನಮ್ಮ ಕೈಯಲ್ಲಿ ಕೊಡಿ ನಾವು ಬುದ್ಧಿ ಕಲಿಸುತ್ತೇವೆ. ಹಸುವಿನ ಕಾಲಿಗೆ ಮಚ್ಚಿನಲ್ಲಿ ಹೊಡೆದಿದ್ದು, ಕೆಚ್ಚಲು ಕತ್ತರಿಸಿದ್ದಾರೆ ಎಂದು ನೋವಿನಿಂದ ಹೇಳಿದ್ದಾರೆ.
ವೋಟ್ ಬ್ಯಾಂಕ್ ರಾಜಕಾರಣ ರಾಜ್ಯದ ನೆಮ್ಮದಿ ಕೆಡಿಸುತ್ತಿದೆ :
ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದು ಅನಾಗರಿಕ, ಕ್ರೌರ್ಯ ಮೆರೆದಿರುವ ಘಟನೆ ಕಂಡಾಗ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ ? ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಗಾವೋ ವಿಶ್ವಸ್ಯ ಮಾತರಃ ಎಂದು ನಂಬಿದ ನಾಡು ನಮ್ಮದು. ಗೋವನ್ನು ಗೋಮಾತೆ ಎಂದೇ ಕರೆಯಲಾಗುತ್ತದೆ. ಅಂಥ ತಾಯಿಯ ಕೆಚ್ಚಲನ್ನೇ ಕತ್ತರಿಸುವಂಥ ವಿಕೃತ ಸ್ಥಿತಿಗೆ ಸಮಾಜ ಬಂದಿದೆ ಎಂದರೆ ಎಲ್ಲರೂ ನಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕು. ಆದರೆ, ಈ ಸರಕಾರದಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂಬ ಸನ್ನಿವೇಶ ನಿರ್ಮಾಣವಾಗಿದ್ದು ಕಾನೂನಿನ ಭಯ ಇಲ್ಲದಂತಾಗಿದೆ.
ಘಟನೆಗೆ ಕಾರಣವಾದ ವ್ಯಕ್ತಿಗಳು ಯಾರೇ ಆದರೂ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ವೋಟ್ ಬ್ಯಾಂಕ್ ರಾಜಕಾರಣ ಕರ್ನಾಟಕದ ನೆಮ್ಮದಿ ಕಳೆಯುತ್ತಿದೆ. ಆರೋಪಿಗಳು ಯಾರ ಬಾಂಧವರೇ ಆದರೂ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.