ಚಾಮರಾಜನಗರ: ಮಹಾಶಿವರಾತ್ರಿ ಹಿನ್ನಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ಸಾಗರ ಹರಿದು ಬರುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಭಕ್ತರು ಪಾದಯಾತ್ರೆ ಮೂಲಕ ಮಹದೇಶ್ವರನ ದರ್ಶನಕ್ಕಾಗಿ ಆಗಮಿಸುತ್ತಿದ್ದು, ಬೆಟ್ಟದ ಸುತ್ತಮುತ್ತ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿದೆ.
ಅಪಾಯವನ್ನು ಲೆಕ್ಕಿಸದೆ ಕೆಲ ಭಕ್ತರು ಕಾವೇರಿ ನದಿಯನ್ನು ದಾಟಿ ಬೆಟ್ಟದತ್ತ ಸಾಗುತ್ತಿರುವುದು ಗಮನಾರ್ಹವಾಗಿದೆ. ಹಗ್ಗ ಹಿಡಿದು ನದಿ ದಾಟುತ್ತಿರುವ ಮಾದಪ್ಪನ ಭಕ್ತರ ದೃಶ್ಯಗಳು ಎಲ್ಲೆಡೆ ಕಂಡುಬರುತ್ತಿವೆ. ಚಾಮರಾಜನಗರ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ಗಡಿಯಂಚಿನಲ್ಲಿ ಹರಿಯುವ ಕಾವೇರಿ ನದಿ ಭಕ್ತರ ಪ್ರವಾಹದಿಂದ ಕಂಗೊಳಿಸುತ್ತಿದೆ.
ಕನಕಪುರ ತಾಲ್ಲೂಕಿನ ಸಂಗಮ ಪ್ರದೇಶದಲ್ಲಿ ನದಿ ದಾಟಿ ಭಕ್ತರು ಕಾಲ್ನಡಿಗೆಯಲ್ಲೇ ಬೆಟ್ಟದತ್ತ ಪ್ರಯಾಣಿಸುತ್ತಿದ್ದಾರೆ. ಬೆಂಗಳೂರು, ಮಾಗಡಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಳವಳ್ಳಿ ಮೊದಲಾದ ಭಾಗಗಳಿಂದ ಭಕ್ತರು ಪಾದಯಾತ್ರೆ ಕೈಗೊಂಡಿದ್ದಾರೆ. ನದಿ ದಾಟಿದ ಬಳಿಕ ಕಾಡಿನ ಕಲ್ಲು-ಮುಳ್ಳುಗಳ ಹಾದಿಯಲ್ಲಿ ಕಷ್ಟಕರ ಕಾಲ್ನಡಿಗೆ ಮುಂದುವರಿಸುತ್ತಿದ್ದಾರೆ.
ಇತ್ತೀಚೆಗೆ ಬೆಟ್ಟದತ್ತ ಪಾದಯಾತ್ರೆಯಲ್ಲಿ ತೆರಳುತ್ತಿದ್ದ ಭಕ್ತನನ್ನು ಚಿರತೆ ಕೊಂದ ಘಟನೆ ಇನ್ನೂ ಮಂಕಾಗಿಲ್ಲ. ಕೆಲ ದಿನಗಳ ಹಿಂದೆ ಬಾಲಕ ಭಕ್ತನ ಮೇಲೂ ಚಿರತೆ ದಾಳಿ ನಡೆಸಿದ್ದ ಘಟನೆ ಆತಂಕ ಮೂಡಿಸಿತ್ತು. ಆದರೂ ಚಿರತೆ ಭೀತಿಯನ್ನು ಲೆಕ್ಕಿಸದೆ ಸಹಸ್ರಾರು ಭಕ್ತರು ಮಹದೇಶ್ವರನ ಸನ್ನಿಧಿಗೆ ಆಗಮಿಸುತ್ತಿದ್ದಾರೆ.
ಭಕ್ತರ ಸುರಕ್ಷತೆಗಾಗಿ ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದಾರೆ. ನದಿ ದಾಟುವ ವೇಳೆ ವಿಶೇಷ ಸಹಾಯ ಒದಗಿಸಲಾಗುತ್ತಿದ್ದು, ಕಾಡಿನೊಳಗೆ ಒಬ್ಬೊಬ್ಬರಾಗಿ ತೆರಳದೆ ಗುಂಪುಗಳಾಗಿ ಸಾಗುವಂತೆ ಸೂಚಿಸಲಾಗಿದೆ.
ಮಹಾಶಿವರಾತ್ರಿ ಅಂಗವಾಗಿ ಬೆಟ್ಟದಲ್ಲಿ ವಿಶೇಷ ಪೂಜೆ, ಅಭಿಷೇಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತರ ಸಂಚಾರ ದಿನೇದಿನೇ ಹೆಚ್ಚಳವಾಗುತ್ತಿದೆ.

