ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಬರೆದುಕೊಂಡಿರುವ ಅಶೋಕ್, ರೈತರ ಬಗ್ಗೆ ಮಾತನಾಡುವಾಗ ಜಾಗ್ರತೆ ಇರಲಿ ಡಿಕೆ ಶಿವಕುಮಾರ್ ಅವರೇ ಎಂದಿದ್ದಾರೆ.
ಈ ಹಿಂದೆ ರೈತರ ಸರಣಿ ಆತ್ಮಹತ್ಯೆ ವಿಷಯ ಬಂದಾಗ “ಎಲ್ಲಿದೆ ಆತ್ಮಹತ್ಯೆ? ಸ್ವಂತಕ್ಕೆ ಆತ್ಮಹತ್ಯೆ ಮಾಡಿಕೊಂಡವರನ್ನೆಲ್ಲಾ ರೈತರು ಅನ್ನೋಕ್ಕಾಗುತ್ತಾ? ಸುಳ್ಳು ಅದೆಲ್ಲಾ.” ಎಂದು ರೈತರ ಬಗ್ಗೆ ತುಚ್ಛವಾಗಿ ಮಾತನಾಡಿದ್ದಿರಿ.
ಈಗ “ರೈತರು ಧಿಕ್ಕಾರ ಕೂಗೋದು ಬಿಟ್ಟು ಬೇರೇನೂ ಮಾಡೋಕ್ಕಾಗಲ್ಲ” ಎಂದು ರೈತರ ಅಸಹಾಯಕರು ಅನ್ನುವ ರೀತಿ ಹೀಯಾಳಿಸಿ ಮಾತನಾಡಿದ್ದೀರಿ. ಆದರೆ ಇಡೀ ದೇಶಕ್ಕೆ ಅನ್ನ ನೀಡುವ ರೈತ ಜೀವನವಿಡೀ ತಾನು ಬದುಕುವುದು, ದುಡಿಯುವುದು ಎಲ್ಲವೂ ಇನ್ನೊಬ್ಬರಿಗಾಗಿಯೇ ಹೊರತು ತನ್ನ ಸ್ವಂತಕ್ಕಾಗಿ ಅಲ್ಲ ಶಿವಕುಮಾರ್ ಅವರೇ.
ಕೈಗಾರಿಕೆಗಳಿಗೆ, ರೈಲು, ರಸ್ತೆ, ವಿಮಾನ ನಿಲ್ದಾಣಕ್ಕೆ ಈ ಹಿಂದೆಯೂ ರೈತರ ಬಳಿ ಜಮೀನು ಪಡೆಯಲಾಗಿದೆ. ಹೆಚ್ ಎಂಟಿ ಕಾರ್ಖಾನೆ ಬಂದಾಗ ಸ್ವತಃ ನಮ್ಮ ಕುಟುಂಬ ಕೂಡ ಜಮೀನು ನೀಡಿತ್ತು. ಆದರೆ ತಮ್ಮ ಜೀವನದ ಆಧಾರ ಸ್ತಂಭವಾಗಿರುವ ಜಮೀನನ್ನು ಕಳೆದುಕೊಳ್ಳುತ್ತಿರುವ ರೈತರ ಬಳಿ ಹೇಗೆ ಮಾತನಾಡಬೇಕು, ಯಾವ ರೀತಿ ಸಂವೇದನೆಯಿಂದ ನಡೆದುಕೊಳ್ಳಬೇಕು ಎನ್ನುವ ಕನಿಷ್ಠ ಸೌಜನ್ಯವೂ ಇಲ್ಲದ ತಮ್ಮಂತಹವರು ಮುಂದೊಂದು ದಿನ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿರುವುದು ನಮ್ಮ ನಾಡಿನ ದುರಂತ.
ರೈತರ ಕಷ್ಟ, ಕೃಷಿಯಲ್ಲಿರುವ ಸಮಸ್ಯೆಗಳ ಬಗ್ಗೆ ಗೊತ್ತಿರುವ ನಿಜವಾದ ಒಕ್ಕಲಿಗ ಅನ್ನದಾತರ ಬಗ್ಗೆ ಈ ರೀತಿಯ ದರ್ಪದ ಮಾತುಗಳನ್ನು ಎಂದಿಗೂ ಆಡುವುದಿಲ್ಲ. ಒಕ್ಕಲಿಕೆಯನ್ನು, ಮಣ್ಣಿನ ಮಕ್ಕಳನ್ನು ಅಪಮಾನ ಮಾಡುತ್ತಿರುವ ತಮ್ಮ ಈ ದುರ್ನಡತೆಯ ಪರಿಣಾಮ ಮುಂದೆ ಗೊತ್ತಾಗಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಮನಗರದಲ್ಲಿ 9600 ಎಕರೆ ಭೂಸ್ವಾಧೀನ ವಿಚಾರದಲ್ಲಿ ರೈತರ ಪ್ರತಿಭಟನೆ ವೇಳೆ ರೈತರ ಮೇಲೆ ಗರಂ ಆಗಿರುವ ಡಿಕೆ ಶಿವಕುಮಾರ್. ನೀವು ದಿಕ್ಕಾರ ಕೂಗೋದು ಬಿಟ್ಟು ಬೇರೇನೂ ಮಾಡೋಕೆ ಆಗೋಲ್ಲ. ರೈತರು ಹೋರಾಟ ಮಾಡಿ ಆದ್ರೆ ರಾಜಕೀಯ ಮಾಡಬೇಡಿ. ಹಿಂದೆ ಭೂಮಿ ಸ್ವಾಧೀನ ಮಾಡಿದ್ರಲ್ಲ ಅವರೇನು ನಿಮ್ಮ ಪರವಾಗಿ ಇದ್ರಾ? ಶಾಸಕರು ಒಳ್ಳೆಯ ಕೆಲಸ ಮಾಡ್ತಿದ್ದಾರೆ, ಅವರಿಗೆ ಅವಮಾನ ಮಾಡಬೇಡಿ ಎಂದಿದ್ದಾರೆ.
ರೈತರಿಗೆ ಅನ್ಯಾಯ ಆಗಬಾರದು ಅಂತ ಎಷ್ಟು ಸಭೆ ಮಾಡಿದ್ದೇವೆ ಗೊತ್ತಾ? ಯಾವುದೇ ರೈತರಿಗೆ ಅನ್ಯಾಯ ಆಗಲು ಬಿಡಲ್ಲ. 70% ಜನ ಈ ಯೋಜನೆಗೆ ಒಪ್ಪಿದ್ದಾರೆ, 30% ಜನ ಒಪ್ಪಿಗೆ ನೀಡಿಲ್ಲ. ಇದನ್ನ ಡಿನೋಟಿಫೈ ಮಾಡಿ ಬಿಎಸ್ವೈ ತರ ನಾನು ಜೈಲಿಗೆ ಹೋಗಲ್ಲ. ನಿಮಗೆ ಏನು ಸಹಾಯ ಮಾಡಬೇಕೋ ಮಾಡ್ತೇನೆ. ಕಾನೂನು ಚೌಕಟ್ಟಿನಲ್ಲಿ ಏನು ಆಗಬೇಕೋ ಆಗುತ್ತೆ ಎಂದು ಡಿಕೆ ಶಿವಕುಮಾರ ಅವರು ತಮ್ಮ ನಿಲುವನ್ನು ಡಿಕೆಶಿ ಸ್ಪಷ್ಟಪಡಿಸಿದ್ದರು.

