ನವದೆಹಲಿ, ನವೆಂಬರ್ 25 : ಬರೋಬ್ಬರಿ 12 ಸಾವಿರ ವರ್ಷಗಳ ಬಳಿಕ ಆಫ್ರಿಕಾ ಖಂಡದ ಇಥಿಯೋಪಿಯಾದಲ್ಲಿ ಜ್ವಾಲಾಮುಖಿಯೊಂದು ಭೀಕರವಾಗಿ ಸ್ಫೋಟಗೊಂಡಿದೆ. ಹೈಲಿ ಗುಬ್ಬಿ (Haile Gubbi) ಎಂಬ ಈ ಜ್ವಾಲಾಮುಖಿಯ ಬೂದಿ ಮಿಶ್ರಿತ ಹೊಗೆಯು ಈಗ ಉತ್ತರ ಭಾರತ ಸೇರಿದಂತೆ ಹಲವು ದೇಶಗಳತ್ತ ಚಲಿಸುತ್ತಿದ್ದು, ಅನೇಕ ವಿಮಾನಗಳ ಹಾರಾಟಕ್ಕೆ ಗಂಭೀರ ವ್ಯತ್ಯಯ ಉಂಟಾಗಿದೆ.
ಇಥಿಯೋಪಿಯಾದ ಅಫಾರ್ ಪ್ರಾಂತ್ಯದಲ್ಲಿ ಸಂಭವಿಸಿದ ಈ ಸ್ಫೋಟದ ತೀವ್ರತೆಯಿಂದ ಆಸುಪಾಸಿನ ಗ್ರಾಮಗಳಲ್ಲಿ ಭೂಕಂಪದ ಅನುಭವವಾಗಿರುವುದಾಗಿ ಸ್ಥಳೀಯ ಮೂಲಗಳು ತಿಳಿಸಿವೆ. ಜ್ವಾಲಾಮುಖಿಯಿಂದ ಹೊರಬಿದ್ದ ಬೂದಿ-ಹೊಗೆಯು ಭೂತಾನ್ಗೂ ವ್ಯಾಪಿಸಿ, ಮುಂದೇನು ಹಿಮಾಲಯದವರೆಗೆ ತಲುಪಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ವಿಮಾನ ಸಂಚಾರಕ್ಕೆ ಭಾರೀ ಅಡ್ಡಿ
ಬೂದಿ ಮಿಶ್ರಿತ ಹೊಗೆಯ ಪರಿಣಾಮವಾಗಿ ಆಕಾಶದಲ್ಲಿ ಗೋಚರತೆ ಕುಸಿದಿದ್ದು, ಇದರಿಂದ ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ದೆಹಲಿ-ಎನ್ಸಿಆರ್, ಪಂಜಾಬ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ವಾಯು ಸಂಚಾರಕ್ಕೆ ತೊಂದರೆ ಉಂಟಾಗಿದೆ. ಹಲವು ಭಾರತೀಯ ವಿಮಾನಗಳು ಕೊಲ್ಲಿ ರಾಷ್ಟ್ರಗಳಿಗೆ ಹಾರಾಟವನ್ನು ರದ್ದುಗೊಳಿಸಿವೆ.
ಹೊಗೆಯ ಮಾರ್ಗ: ಆಫ್ರಿಕಾದಿಂದ ಹಿಮಾಲಯದವರೆಗೆ
ಸ್ಫೋಟದಿಂದ ಹೊರಬಿದ್ದ ಹೊಗೆ ಈಗಾಗಲೇ ಕೆಂಪು ಸಮುದ್ರ ದಾಟಿ ಯೆಮೆನ್, ಒಮಾನ್ ಪ್ರದೇಶದತ್ತ ಚಲಿಸುತ್ತಿದೆ. ಬಳಿಕ ಇದು ಅರಬ್ಬಿ ಸಮುದ್ರವನ್ನು ದಾಟಿ ಕರಾಚಿ–ಗುಜರಾತ್ ಮಾರ್ಗವಾಗಿ ಭಾರತಕ್ಕೆ ಪ್ರವೇಶಿಸಲಿದೆ. ನಂತರ ದೆಹಲಿ, ಹರ್ಯಾಣ, ಉತ್ತರ ಪ್ರದೇಶ ಮಾರ್ಗವಾಗಿ ಬಿಹಾರ, ಭೂತಾನ್, ಅಂತಿಮವಾಗಿ ಅಸಾಂ ಮೂಲಕ ಹಿಮಾಲಯದವರೆಗೆ ತಲುಪಲಿದೆ ಎಂದು ತಜ್ಞರು ತಿಳಿಸಿದ್ದಾರೆ.
ಸ್ಥಿತಿಗತಿ ಇನ್ನೂ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ, ವಿಮಾನಯಾನ ಸಂಸ್ಥೆಗಳು ಹಾಗೂ ಪರಿಸರ ಇಲಾಖೆಗಳು ತುರ್ತು ಕ್ರಮಗಳನ್ನು ಕೈಗೊಂಡಿವೆ.

