ಹೈದರಾಬಾದ್ : ನಿವೃತ್ತ ಸೈನಿಕರೊಬ್ಬರು ತಮ್ಮ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿ, ದೇಹದ ಭಾಗಗಳನ್ನು ಕುಕ್ಕರ್ನಲ್ಲಿ ಹಾಕಿ ಬೇಯಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಹೈದರಾಬಾದ್ನ ಹೊರವಲಯದಲ್ಲಿರುವ ರಂಗಾರೆಡ್ಡಿ ಜಿಲ್ಲೆಯ ಮೀರ್ಪೇಟ್ನಲ್ಲಿ ಈ ಘಟನೆ ನಡೆದಿದೆ.
ಪೊಲೀಸರ ಪ್ರಕಾರ ಗುರುಮೂರ್ತಿ ಎಂಬುವವರು ಜನವರಿ 18ರಂದು ರಾಚಕೊಂಡ ಪೊಲೀಸ್ ಕಮಿಷನರೇಟ್ ಅಡಿಯಲ್ಲಿ ಮೀರಪೇಟ್ ಪೊಲೀಸ್ ಠಾಣೆಗೆ ತಮ್ಮ ಪತ್ನಿ ವೆಂಕಟ ಮಾಧವಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದರು.
ತನಿಖಾಧಿಕಾರಿಗಳು ಗುರು ಮೂರ್ತಿಯನ್ನು ವಿಚಾರಣೆಗೊಳಪಡಿಸಿದ್ದು, ಅವರು ಘೋರ ಅಪರಾಧವನ್ನು ಒಪ್ಪಿಕೊಂಡರು ಮತ್ತು ಆಘಾತಕಾರಿ ವಿವರಗಳನ್ನು ಬಹಿರಂಗಪಡಿಸಿದರು. ಪತ್ನಿಯನ್ನು ಕೊಲೆ ಮಾಡಿ, ಶವವನ್ನು ತುಂಡು ಮಾಡಿ ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿದ್ದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ನಂತರ, ಅವರು ಬೇಯಿಸಿದ ದೇಹದ ಭಾಗಗಳನ್ನು ಜಿಲ್ಲೆಲಗುಡಾದ ಕೆರೆಗೆ ಎಸೆದಿದ್ದಾರೆ.
ಗುರುಮೂರ್ತಿ ಅವರು ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ನಿವೃತ್ತರಾದ ನಂತರ ಕಾಂಚನ್ ಬಾಗ್ನಲ್ಲಿರುವ ಡಿಆರ್ಡಿಒದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಸುಮಾರು 13 ವರ್ಷಗಳ ಹಿಂದೆ ಮಾಧವಿ ಅವರನ್ನು ವಿವಾಹವಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ತನ್ನ ಹೆಂಡತಿಯನ್ನು ಕೊಂದ ನಂತರ, ಆರೋಪಿಯು ತನ್ನ ಹೆತ್ತವರೊಂದಿಗೆ ಮೀರ್ಪೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ ಯಾರಿಗೂ ತನ್ನ ಮೇಲೆ ಅನುಮಾನ ಬಾರದು ಎಂದು ತಿಳಿದಿದ್ದರು. ಪ್ರಕರಣದ ತನಿಖೆ ಮುಂದುವರೆದಿದ್ದು, ಶೀಘ್ರದಲ್ಲೇ ಎಲ್ಲಾ ವಿವರಗಳನ್ನು ಬಹಿರಂಗಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಆತನ ಹೇಳಿಕೆಯನ್ನು ದಾಖಲಿಸಿಕೊಂಡು ಸಾಕ್ಷ್ಯ ಸಂಗ್ರಹಿಸಲು ಆರಂಭಿಸಿದರು. ಕೆರೆಯಲ್ಲಿ ಸಂತ್ರಸ್ತೆಯ ದೇಹದ ಭಾಗಗಳಿಗಾಗಿ ಹುಡುಕಾಟ ನಡೆದಿದೆ.

